ಇಂದಿರಾ ಕ್ಯಾಂಟೀನ್Image Credit source: Tv9 Kannada
ಹುಬ್ಬಳ್ಳಿ, ಜೂನ್ 11: ನಗರ ಮತ್ತು ಪಟ್ಟಣದಲ್ಲಿನ ಕಾರ್ಮಿಕರು, ವಿದ್ಯಾರ್ಥಿಗಳು, ಬಡಜನರು ಹಸಿವಿನಿಂದ ಇರಬಾರದು ಎಂಬ ಸದುದ್ದೇಶದಿಂದ ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಿದ್ದರು. ಹುಬ್ಬಳ್ಳಿ-ಧಾರವಾಡದಲ್ಲಿಯೂ ಅನೇಕ ಇಂದಿರಾ ಕ್ಯಾಂಟೀನ್ಗಳು ತಲೆ ಎತ್ತಿದ್ದವು. ಆದರೆ ಇತ್ತೀಚೆಗೆ ಇಂದಿರಾ ಕ್ಯಾಂಟೀನ್ಗಳ ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮೊದಲು ಇಂದಿರಾ ಕ್ಯಾಂಟೀನ್ಗಳಲ್ಲಿ ಅನ್ನ ಸಾರು, ಮೊಸರನ್ನ, ಪಲಾವ್, ಮುಂಜಾನೆ ಉಪಹಾರಕ್ಕೆ ಉಪ್ಪಿಟ್ಟು, ಪೊಂಗಲ್ ಸೇರಿದಂತೆ ಕೆಲವೇ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆ ಬಳಿಕ ಇವುಗಳ ಮೆನುವಿನಲ್ಲಿ ಹೆಚ್ಚಳ ಮಾಡಲಾಗಿತ್ತು. ಉತ್ತರ ಕರ್ನಾಟಕದಲ್ಲಿ ರೊಟ್ಟಿ, ಚಪಾತಿ, ಪಲ್ಯವನ್ನು ಊಟದಲ್ಲಿ ನೀಡಿದ್ರೆ, ಇಡ್ಲಿ, ಪೊಂಗಲ್, ಉಪ್ಪಿಟ್ಟು ಸೇರಿದಂತೆ ಅನೇಕ ಖಾದ್ಯಗಳು ಸೇರ್ಪಡೆಯಾಗಿದ್ದವು. ಮುಂಜಾನೆ ಉಪಹಾರಕ್ಕೆ ಐದು ರೂಪಾಯಿ ಮತ್ತು ಮಧ್ಯಾಹ್ನದ ರೊಟ್ಟಿ ಊಟಕ್ಕೆ ಇಪ್ಪತ್ತು ರೂಪಾಯಿ ಬೆಲೆ ನಿಗದಿ ಮಾಡಲಾಗಿತ್ತು. ಕೇವಲ ಅನ್ನ ಸಾಂಬಾರ್ ತಗೆದುಕೊಂಡರೆ ಹತ್ತು ರೂಪಾಯಿ ದರವಿತ್ತು. ಇದೇ ಕಾರಣಕ್ಕೆ ಆಟೋ ಚಾಲಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಮಧ್ಯಮ ಹಾಗೂ ಬಡತನ ರೇಖೆಗಿಂತ ಕೆಳಗಿರೋ ನೂರಾರು ಜನರು ಮುಂಜಾನೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಇಂದಿಗೂ ಇಂದಿರಾ ಕ್ಯಾಂಟೀನ್ಗಳನ್ನು ಅವಲಂಬಿಸಿದ್ದಾರೆ. ಆದ್ರೆ ಇತ್ತೀಚೆಗೆ ಇಲ್ಲಿನ ಊಟ, ಉಪಹಾರಗಳು ಗುಣಮಟ್ಟ ಕಳೆದುಕೊಂಡಿರುವ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ವಾಯುವ್ಯ ಸಾರಿಗೆಗೆ ಡೀಸೆಲ್ ಬೆನ್ನಲ್ಲೇ ಬಿಡಿಭಾಗಗಳ ದರ ಏರಿಕೆ ಶಾಕ್; ಸ್ಪೇರ್ ಪಾರ್ಟ್ಸ್ ಸಿಗದೆ ಸಂಕಷ್ಟ
‘ಬೇಕಾದ್ರೆ ತಿನ್ನಿ, ಇಲ್ಲದಿದ್ದರೆ ಹೋಗಿ’
ನೀರಿನಂತಿರುವ ಸಾರು, ಸರಿಯಾಗಿ ಬೆಂದಿರದ ಅನ್ನವನ್ನು ಇಂದಿರಾ ಕ್ಯಾಂಟೀನ್ಗಳಲ್ಲಿ ನೀಡಲಾಗ್ತಿದೆ. ಚಪಾತಿ ಮತ್ತು ರೊಟ್ಟಿ ಕೂಡ ತಿನ್ನಲು ಯೋಗ್ಯವಾಗಿರಲ್ಲ. ಮುಂಜಾನೆ ಉಪಹಾರದಲ್ಲಿ ನೀಡುವ ಇಡ್ಲಿ, ಸಾಂಬಾರು ಕೂಡ ಚೆನ್ನಾಗಿರಲ್ಲ. ಮೊದಲು ಉತ್ತಮ ಗುಣಮಟ್ಟದ ಆಹಾರ ಇಲ್ಲಿ ಸಿಗುತ್ತಿದ್ದ ಹಿನ್ನೆಲೆ ಊಟ, ಉಪಹಾರ ಸೇವಿಸಿದಾಗ ಸಂತೃಪ್ತಿಯಾಗುತಿತ್ತು. ಆದ್ರೆ ಇದೀಗ ಕಷ್ಟಪಟ್ಟು ತಿನ್ನಬೇಕಾಗಿದೆ. ಇನ್ನು ಆಹಾರ ಪ್ರಮಾಣವನ್ನು ಕೂಡ ಕಡಿಮೆ ನೀಡ್ತಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ನೀಡೋ ರೈಸ್ ಪ್ರಮಾಣ ಮುನ್ನೂರು ಗ್ರಾಂನಷ್ಟಿರಬೇಕು ಅಂತಿದೆ. ಆದರೆ ಅಷ್ಟು ಕೊಡೋದಿಲ್ಲ. ಸಿಬ್ಬಂದಿ ಕೇಳಿದ್ರೆ ಬೇಕಾದ್ರೆ ತಿನ್ನಿ, ಇಲ್ಲದಿದ್ದರೆ ಹೋಗಿ ಎನ್ನುತ್ತಾರೆ. ಹೀಗಾಗಿ ಸಂಬಂಧಪಟ್ಟವರು ಇತ್ತಕಡೆ ಗಮನಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
