‘ನನ್ನನ್ನು ಕೊಲ್ಲಬಹುದು, ಜೈಲಿಗೆ ಹಾಕಬಹುದು, ಆದರೂ ಬಾಂಗ್ಲಾದೇಶಕ್ಕೆ ಹೋಗುತ್ತೇನೆ’; ಶೇಖ್ ಹಸೀನಾ ಶಪಥ – Kannada News | Sheikh hasina vows to return to bangladesh says she may be killed or jailed

ನವದೆಹಲಿ, ಆಗಸ್ಟ್​ 5: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ತಾವು ಮತ್ತೆ ಸ್ವದೇಶಕ್ಕೆ ಮರಳುವುದಾಗಿ ಇಂದು ಘೋಷಿಸಿದ್ದು, ಈ ಹಾದಿಯಲ್ಲಿ ಎದುರಾಗಬಹುದಾದ ಬಂಧನ, ಜೈಲು ಶಿಕ್ಷೆ ಅಥವಾ ಜೀವ ಬೆದರಿಕೆ ಸೇರಿದಂತೆ ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಬಾಂಗ್ಲಾದೇಶವನ್ನು ತೊರೆದ ನಂತರ ನವದೆಹಲಿಯಿಂದ ವರ್ಚುವಲ್ ಆಗಿ ಭಾಗವಹಿಸಿದ ತಮ್ಮ ಮೊದಲ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಶೇಖ್ ಹಸೀನಾ, ತಮ್ಮ ಬೆಂಬಲಿಗರು ಮತ್ತು ಬಾಂಗ್ಲಾದೇಶದ ಜನತೆ ಸಂಕಷ್ಟದಲ್ಲಿರುವಾಗ ತಾವು ದೇಶದಿಂದ ದೂರವಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಇಂದು ನವದೆಹಲಿಯಲ್ಲಿ ‘ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ’ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶೇಖ್ ಹಸೀನಾ ವರ್ಚುವಲ್ ಆಗಿ ಮಾತನಾಡಿದ್ದಾರೆ. 2024ರ ಆಗಸ್ಟ್‌ನಲ್ಲಿ ಅಧಿಕಾರದಿಂದ ಪದಚ್ಯುತಗೊಂಡ ನಂತರ ಭಾರತದ ರಾಜಧಾನಿ ದೆಹಲಿಯಲ್ಲಿ ಆಶ್ರಯ ಪಡೆದಿರುವ ಅವರು ನಡೆಸಿದ ಮೊದಲ ಪತ್ರಿಕಾಗೋಷ್ಠಿ ಇದಾಗಿದೆ.

ಇದನ್ನೂ ಓದಿ: ಕೊಲೆಯ ಭೀತಿಯಿದೆ, ತಾಯ್ನಾಡಲ್ಲೇ ಸಾಯುತ್ತೇನೆ; ಬಾಂಗ್ಲಾದೇಶಕ್ಕೆ ಹೋಗುತ್ತೇನೆಂದ ಶೇಖ್ ಹಸೀನಾ

“ಅವರು ನನ್ನನ್ನು ಕೊಲ್ಲಬಹುದು, ಜೈಲಿಗೆ ತಳ್ಳಬಹುದು… ನನ್ನನ್ನು ಬಂಧಿಸಬಹುದು, ಜೈಲಿಗೆ ಕಳುಹಿಸಬಹುದು, ರಾಜಕೀಯ ಪ್ರೇರಿತ ಸುಳ್ಳು ಪ್ರಕರಣಗಳನ್ನು ಹೂಡಲು ಪ್ರಯತ್ನಿಸಬಹುದು ಎಂಬುದು ನನಗೆ ತಿಳಿದಿದೆ. ಆದರೆ ಈ ಭಯವು ಜನರ ಮೇಲಿನ ನನ್ನ ಕರ್ತವ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ನನ್ನ ಜೀವನವು ಬಹಳ ಹಿಂದೆಯೇ ವೈಯಕ್ತಿಕ ಸುರಕ್ಷತೆಯ ಲೆಕ್ಕಾಚಾರಗಳನ್ನು ಮೀರಿ ಬೆಳೆದಿದೆ” ಎಂದು ಶೇಖ್ ಹಸೀನಾ ಹೇಳಿದರು.

ಈ ರೀತಿಯ ಬಾಂಗ್ಲಾದೇಶಕ್ಕೆ ಪ್ರಾಣತ್ಯಾಗ ಬೇಕಿತ್ತಾ?:

“ನನ್ನ ದೇಶವನ್ನು ತೊರೆಯಲು ನನ್ನನ್ನು ಬಲವಂತಪಡಿಸಲಾಯಿತು, ಆದರೆ ನನ್ನ ಜನರಿಂದ ನಾನು ಎಂದಿಗೂ ದೂರವಾಗಿರಲಿಲ್ಲ. ಬಾಂಗ್ಲಾದೇಶದ ಜನರೊಂದಿಗೆ ನಮ್ಮ ಜೀವನವನ್ನೇ ಕಳೆದ ವ್ಯಕ್ತಿಯಾಗಿ ನಾನು ಮಾತನಾಡುತ್ತಿದ್ದೇನೆ. ಕಳೆದ 2 ವರ್ಷಗಳಲ್ಲಿ ಬಾಂಗ್ಲಾದೇಶವು ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ನಾನು ಗಮನಿಸುತ್ತಿದ್ದೇನೆ. ನಾವು ನಿರ್ಮಿಸಿದ ಬಾಂಗ್ಲಾದೇಶ ಇದಲ್ಲ. 1971ರಲ್ಲಿ 30 ಲಕ್ಷ ಜನರು ತಮ್ಮ ಪ್ರಾಣತ್ಯಾಗ ಮಾಡಿದ್ದು ಈ ರೀತಿಯ ಬಾಂಗ್ಲಾದೇಶಕ್ಕಾಗಿ ಅಲ್ಲ” ಎಂದು ಶೇಖ್ ಹಸೀನಾ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ‘ಶೇಖ್ ಹಸೀನಾ ಅವರ ನಾಳೆಯ ಸುದ್ದಿಗೋಷ್ಠಿಗೂ ನಮಗೂ ಸಂಬಂಧವಿಲ್ಲ’; ಭಾರತ ಸ್ಪಷ್ಟನೆ

2024ರ ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆದ ಘಟನೆಗಳನ್ನು ಪ್ರಸ್ತಾಪಿಸಿದ ಶೇಖ್ ಹಸೀನಾ, ಅದು ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ ಎಂದು ಪ್ರತಿಪಾದಿಸಿದರು. ತಮ್ಮ ಸರ್ಕಾರವು ಆರಂಭದಲ್ಲಿ ಮಾತುಕತೆ, ಕಾನೂನು ಪ್ರಕ್ರಿಯೆ ಮತ್ತು ತಾಳ್ಮೆಯ ಮೂಲಕ ಪರಿಸ್ಥಿತಿಯನ್ನು ಬಗೆಹರಿಸಲು ಯತ್ನಿಸಿತ್ತು. ಆದರೂ ಸುಧಾರಣೆಯ ನೆಪದಲ್ಲಿ ಕೆಲವು ಸಂಘಟಿತ ಗುಂಪುಗಳು ವಿದ್ಯಾರ್ಥಿಗಳ ಬೇಡಿಕೆಗಳನ್ನು ಹಿಂಸಾತ್ಮಕ ರಾಜಕೀಯ ಅಸ್ತ್ರವನ್ನಾಗಿ ಮಾಡಲು ಯತ್ನಿಸಿದವು” ಎಂದು ಅವರು ಆರೋಪಿಸಿದರು.

“ಬಾಂಗ್ಲಾದೇಶದ ಸಂಸ್ಥಾಪಕ ನಾಯಕ ಶೇಖ್ ಮುಜಿಬುರ್ ರೆಹಮಾನ್ ಅವರ ಹೆಸರನ್ನುಳಿಸದಂತೆ ಅಳಿಸಿಹಾಕಲು ತಮ್ಮ ರಾಜಕೀಯ ವಿರೋಧಿಗಳು ಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು. “ನನ್ನ ಮರಳುವಿಕೆಯ ಉದ್ದೇಶ ಅಧಿಕಾರ ಹಿಡಿಯುವುದಲ್ಲ, ಬಾಂಗ್ಲಾದೇಶವನ್ನು ಮತ್ತೆ ಅಭಿವೃದ್ಧಿ ಮತ್ತು ಜಾತ್ಯತೀತತೆಯ ಹಾದಿಗೆ ತರುವುದಾಗಿದೆ” ಎಂದು ಶೇಖ್ ಹಸೀನಾ ಹೇಳಿದರು.

ಶೇಖ್ ಹಸೀನಾ ಪದಚ್ಯುತಿ:

78 ವರ್ಷದ ಶೇಖ್ ಹಸೀನಾ ಅವರು 2024ರ ಜೆನ್​-ಜಿ ದಂಗೆಯ ಸಮಯದಲ್ಲಿ ಪದಚ್ಯುತಗೊಂಡು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತದಲ್ಲೇ ವಾಸಿಸುತ್ತಿದ್ದಾರೆ. ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಅವರಿಗೆ ಗೈರುಹಾಜರಿಯಲ್ಲಿ ಮರಣದಂಡನೆ ವಿಧಿಸಲಾಗಿದ್ದು, ಈ ತೀರ್ಪನ್ನು ಅವರು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದಾರೆ. ದೇಶ ತೊರೆಯಲು ತಮಗೆ ಕೆಲವೇ ನಿಮಿಷಗಳ ಕಾಲಾವಕಾಶವಿದ್ದಿದ್ದರಿಂದ ಅನಿವಾರ್ಯವಾಗಿ ಹೊರಡಬೇಕಾಯಿತು ಎಂದು ಶೇಖ್ ಹಸೀನಾ ಹೇಳಿದ್ದಾರೆ. ಮತ್ತೊಂದೆಡೆ, ಭಾರತದಿಂದ ಸ್ವದೇಶಕ್ಕೆ ಮರಳಿದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ಬಾಂಗ್ಲಾದೇಶ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *