ಬಾಲಿವುಡ್ನ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆದರೆ ಈ ಚಿತ್ರಕ್ಕೆ ಈಗ ಹೊಸ ಸಂಕಷ್ಟ ಎದುರಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೂ ಮುನ್ನ ತಮಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕು ಎಂದು ಶ್ರೀ ರಾಮಲೀಲಾ ಮಹಾಸಂಘವು ಚಿತ್ರತಂಡವನ್ನು ಒತ್ತಾಯಿಸಿದೆ. ಒಂದು ವೇಳೆ ಪ್ರದರ್ಶನ ನೀಡದಿದ್ದರೆ ದೇಶಾದ್ಯಂತ ಚಿತ್ರಮಂದಿರಗಳ ಮುಂದೆ ಭಾರಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯು ಎಚ್ಚರಿಕೆ ನೀಡಿದೆ.
ಈ ಕುರಿತು ಮಹಾಸಂಘದ ಅಧ್ಯಕ್ಷ ಅರ್ಜುನ್ ಕುಮಾರ್ ಅವರು ಚಿತ್ರದ ನಿರ್ಮಾಪಕರಿಗೆ ಅಧಿಕೃತ ಪತ್ರ ಬರೆದಿದ್ದಾರೆ. ತಮಗೆ ಪ್ರತ್ಯೇಕ ಪ್ರಿವ್ಯೂ ಶೋ ನೀಡುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಆದಿಪುರುಷ್’ ಸಿನಿಮಾದ ವಿವಾದವನ್ನು ಅವರು ನೆನಪಿಸಿದ್ದಾರೆ. ‘ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರದ ಸಂಭಾಷಣೆ, ಸೆಟ್ ಮತ್ತು ಕಾಸ್ಟ್ಯೂಮ್ಗಳ ವಿರುದ್ಧ ಸನಾತನ ಧರ್ಮದವರು ತೀವ್ರ ಆಕ್ಷೇಪ ಎತ್ತಿದ್ದರು. ಚಿನ್ನದ ಲಂಕೆಯನ್ನು ಕಪ್ಪಾಗಿ ತೋರಿಸಿದ್ದು ಮತ್ತು ರಾವಣನ ಪಾತ್ರದ ಚಿತ್ರಣವು ಹಿಂದೂಗಳ ಭಾವನೆಗೆ ಧಕ್ಕೆ ತಂದಿತ್ತು. ಇದರಿಂದ ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಸೋಲನ್ನು ಅನುಭವಿಸಬೇಕಾಯಿತು’ ಎಂದು ಅವರು ನೆನಪಿಸಿದ್ದಾರೆ.
‘ನಿರ್ದೇಶಕ ನಿತೇಶ್ ತಿವಾರಿ ಅವರ ಈ ಹೊಸ ರಾಮಾಯಣ ಚಿತ್ರದಲ್ಲೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ದೃಶ್ಯಗಳಿವೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಹೀಗಾಗಿ ಸಿನಿಮಾವನ್ನು ಮೊದಲೇ ವೀಕ್ಷಿಸಿ, ಆಕ್ಷೇಪಾರ್ಹ ದೃಶ್ಯಗಳಿದ್ದರೆ ಅವುಗಳನ್ನು ತೆಗೆದುಹಾಕಲು ನಾವು ಬಯಸುತ್ತೇವೆ’ ಎಂದು ಮಹಾಸಂಘ ಹೇಳಿದೆ.
ಇದನ್ನೂ ಓದಿ: ‘ರಾಮಾಯಣ’ ಟ್ರೇಲರ್ ಬೆನ್ನಲ್ಲೇ ರಾವಣನ ಪ್ರತಿಮೆ ಎದುರು ಪೋಸ್ ಕೊಟ್ಟ ರಾಧಿಕಾ ಪಂಡಿತ್
ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಸಿನಿಮಾ ಈ ವರ್ಷದ ದೀಪಾವಳಿಗೆ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ಚಿತ್ರದ ಆಧುನಿಕ ಕಾಸ್ಟ್ಯೂಮ್ಗಳ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಅಪಸ್ವರ ಎತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
