ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದ ಟೀಮ್ ಇಂಡಿಯಾ, ಇದೀಗ ವಿದೇಶದಲ್ಲಿ ಸತತ ಸೋಲುಗಳ ಸುಳಿಗೆ ಸಿಲುಕಿದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಲ್ಲಿ ಅನುಭವಿಸಿದ ಭಾರಿ ಹಿನ್ನಡೆ, ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 76 ರನ್ಗಳಿಗೆ ಆಲೌಟ್ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಚರ್ಚೆಗಳ ನಡುವೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ನಮ್ದು ಕೆಟ್ಟ ತಂಡವಲ್ಲ, ಇದು ಬದಲಾವಣೆಯ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್, ಅಭಿಮಾನಿಗಳು ಮತ್ತು ವಿಮರ್ಶಕರಲ್ಲಿ ತಾಳ್ಮೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಜಸ್ಪ್ರಿತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಪ್ರಮುಖ ಮ್ಯಾಚ್ ವಿನ್ನರ್ಗಳು ಸದ್ಯದ ಆಡುವ ಹನ್ನೊಂದರ ಬಳಗದಲ್ಲಿ ಇಲ್ಲ.
ಭವಿಷ್ಯದ ದೃಷ್ಟಿಯಿಂದ 15 ವರ್ಷದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಮತ್ತು ತಮ್ಮ ಎರಡನೇ ಟಿ20 ಪಂದ್ಯವಾಡುತ್ತಿರುವ ವೇಗಿ ಪ್ರಿನ್ಸ್ ಯಾದವ್ ಅವರಂತಹ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ.
ತಂಡವು ದೊಡ್ಡ ಸ್ಕೋರ್ ಕಲೆಹಾಕುವ ನಿಟ್ಟಿನಲ್ಲಿ ಭಯವಿಲ್ಲದ, ಹೆಚ್ಚಿನ ರಿಸ್ಕ್ ಒಳಗೊಂಡ ಆಟದ ಶೈಲಿಯನ್ನು ಅಳವಡಿಸಿಕೊಂಡಿದೆ. ಇಂತಹ ಶೈಲಿಯಲ್ಲಿ ಆರಂಭದಲ್ಲಿ ವೈಫಲ್ಯಗಳು ಸಹಜ ಎಂದು ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದಾರೆ.
ಐರ್ಲೆಂಡ್ ಪ್ರವಾಸದಿಂದಲೂ ತಂಡವು ಪಿಚ್ ಪರಿಸ್ಥಿತಿ ಮತ್ತು ಮೈದಾನದ ಆಯಾಮಗಳನ್ನು ಸರಿಯಾಗಿ ಗ್ರಹಿಸುವಲ್ಲಿ ತಪ್ಪು ಮಾಡಿದೆ ಎಂಬುದನ್ನು ಒಪ್ಪಿಕೊಂಡ ಗಂಭೀರ್, ಮುಂಬರುವ ದಿನಗಳಲ್ಲಿ ಇದನ್ನು ಸುಧಾರಿಸುವುದಾಗಿ ಹೇಳಿದ್ದಾರೆ.
ಪರಿವರ್ತನೆಯ ಹಂತ!
ಕೋಚ್ ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಈ ಸೋಲನ್ನು ಪರಿವರ್ತನೆಯ ಹಂತ ಎಂದು ವಿಶ್ಲೇಷಿಸಿದ್ದಾರೆ. ಇದಾಗ್ಯೂ ಭಾರತ ತಂಡದ ಒಳಗೆ ಮತ್ತು ಹೊರಗೆ ಪರಿಸ್ಥಿತಿ ಅಂದುಕೊಂಡಂತೆ ಇಲ್ಲ ಎಂಬುದೇ ಸತ್ಯ.
ಏಕೆಂದರೆ ಕೋಚ್ ಅವರ ಶಾಂತ ಹೇಳಿಕೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಿರುವ ಟಿ20 ನಾಯಕ ಶ್ರೇಯಸ್ ಅಯ್ಯರ್, ತಂಡದ ಸತತ ಬ್ಯಾಟಿಂಗ್ ಕುಸಿತವನ್ನು “ಅತಿ ಘೋರ ಮತ್ತು ಒಪ್ಪಿಕೊಳ್ಳಲು ಅಸಾಧ್ಯ” ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಈ ವ್ಯತಿರಿಕ್ತ ಹೇಳಿಕೆಗಳು ಕೂಡ ಚರ್ಚೆಗೆ ಕಾರಣವಾಗಿದ್ದು, ಇಲ್ಲಿ ಕೋಚ್ ಹಾಗೂ ನಾಯಕನ ನಡುವೆ ಹೊಂದಾಣಿಕೆ ಇಲ್ಲವಾ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: 6,6,6,6,6,6,6,4: ದಾಖಲೆಯ ಹಾಫ್ ಸೆಂಚುರಿ ಸಿಡಿಸಿದ ವೈದ್ಯಕೀಯ ವಿದ್ಯಾರ್ಥಿ!
ಒಟ್ಟಾರೆಯಾಗಿ, ಗೌತಮ್ ಗಂಭೀರ್ ಅವರ ಈ ‘ಮರು ನಿರ್ಮಾಣ’ ಪ್ರಯೋಗವು ಸದ್ಯಕ್ಕೆ ದೊಡ್ಡ ಟೀಕೆಗಳಿಗೆ ಗುರಿಯಾಗಿದ್ದರೂ, ಭಾರತೀಯ ಕ್ರಿಕೆಟ್ನ ಭವಿಷ್ಯದ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದೆ. ಯುವ ಆಟಗಾರರ ಸಾಮರ್ಥ್ಯದ ಮೇಲಿಟ್ಟಿರುವ ಈ ಭರವಸೆ ನಿಜವಾಗುತ್ತದೆಯೇ ಅಥವಾ ಬಿಸಿಸಿಐನ ಕಠಿಣ ನಿರ್ಧಾರಗಳಿಗೆ ಹಾದಿ ಮಾಡಿಕೊಡುತ್ತದೆಯೇ ಎಂಬುದನ್ನು ಮುಂಬರುವ ಪಂದ್ಯಗಳೇ ನಿರ್ಧರಿಸಲಿವೆ. ಅಲ್ಲಿಯವರೆಗೆ, ಟೀಮ್ ಇಂಡಿಯಾ ಈ ಕಠಿಣ ಪರಿಸ್ಥಿತಿಯಿಂದ ಹೇಗೆ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.