ಉದ್ಯಮಿ ಮೋಹನ್ ದಾಸ್ ಪೈ ಆಕ್ರೋಶImage Credit source: Tv9 Kannada
ಬೆಂಗಳೂರು, ಫೆಬ್ರವರಿ 25: ರಾಜ್ಯ ರಾಜಧಾನಿಯಲ್ಲಿನ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಒಂದಲ್ಲ ಒಂದು ವಿಚಾರಕ್ಕೆ ಧ್ವನಿ ಎತ್ತುತಲೇ ಬಂದಿರುವ ಉದ್ಯಮಿ ಮೋಹನ್ ದಾಸ್ ಪೈ ಇದೀಗ ನಮ್ಮ ಮೆಟ್ರೋ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪಿಂಕ್ ಲೈನ್ನಲ್ಲಿ ಪಿಲ್ಲರ್ ಕಾಮಗಾರಿ ಹಿನ್ನೆಲೆ ಕಿಲೋ ಮೀಟರ್ ಗಟ್ಟಲೆ ದೂರದ ವರೆಗೆ ಬಿಎಂಆರ್ಸಿಎಲ್ ಬ್ಯಾರಿಕೇಡ್ ಅಳವಡಿಸಿತ್ತು. ಆದರೀಗ ಕಾಮಗಾರಿ ಮುಗಿದಿದ್ದರೂ, ಅವುಗಳನ್ನು ತೆರವು ಮಾಡದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಬಿಎಂಆರ್ಸಿಎಲ್ಗೆ ಈ ಬಗ್ಗೆ ಯಾವುದೇ ಕಾಳಜಿಯಿಲ್ಲ ಎಂದು ಮೋಹನ್ ದಾಸ್ ಪೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಳೇನ ಅಗ್ರಹಾರ-ನಾಗವಾರವರೆಗೆ ಪಿಂಕ್ ಲೈನ್ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಆದರೆ ಈ ಮಾರ್ಗದ ಪಿಲ್ಲರ್ ಕಾಮಗಾರಿ ಮುಗಿದು 6 ತಿಂಗಳಾಗಿವೆ. ಹೀಗಿದ್ದರೂ ಪಿಲ್ಲರ್ ಅಕ್ಕಪಕ್ಕದಲ್ಲಿ ಅಳವಡಿಸಿರುವ ಬ್ಯಾರಿಕೇಡ್ಗಳನ್ನು ಇನ್ನೂ ತೆರವು ಮಾಡಲಾಗಿಲ್ಲ. ಹೀಗಾಗಿ ವಾಹನ ಸವಾರರು ಪರದಾಡುತ್ತಿದ್ದು, ಹೊಸೂರು ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗ್ತಿದೆ. ಅಲ್ಲದೆ ಮೆಟ್ರೋ ಕಾಮಗಾರಿ ಹಿನ್ನೆಲೆ ತೆಗೆಯಲಾಗಿದ್ದ ಗುಂಡಿಗಳನ್ನು ಮುಚ್ಚುವ ಕೆಲಸ ಈವರೆಗೂ ನಡೆದಿಲ್ಲ ಎಂದು ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ಬಿಎಂಆರ್ಸಿಎಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ: ಹಳಿ ತಪ್ಪಿದ ನಮ್ಮ ಮೆಟ್ರೋ ಡ್ರೈವರ್ಲೆಸ್ ರೈಲು!
ಏಪ್ರಿಲ್ನಿಂದ ಪಿಂಕ್ ಲೈನ್ ಮೆಟ್ರೋ ಆರಂಭ?
ಒಟ್ಟು 21.26 ಕಿಲೋಮೀಟರ್ ಉದ್ದದ ಈ ಪಿಂಕ್ ಲೈನ್ ಮಾರ್ಗದಲ್ಲಿ 7.5 ಕಿಲೋಮೀಟರ್ ಎಲಿವೇಟೆಡ್ ವಿಭಾಗವಿದ್ದು, ಈ ಭಾಗದಲ್ಲಿ ಈಗಾಗಲೇ ಪರೀಕ್ಷಾ ಕಾರ್ಯಗಳು ಆರಂಭವಾಗಿವೆ. ಎಲಿವೇಟೆಡ್ ಮಾರ್ಗದಲ್ಲಿ ಒಟ್ಟು ಆರು ಸ್ಟೇಷನ್ಗಳು ನಿರ್ಮಾಣವಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ರೈಲಿನ ತಾಂತ್ರಿಕ ಗುಣಮಟ್ಟ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸುತ್ತಿದೆ. ಈ ಮಾರ್ಗವನ್ನು ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ತೆರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
