ನಾನು ಮಗಳನ್ನು ಕಳೆದುಕೊಂಡಿದ್ದೇನೆ, ಮಮತಾ ಅಧಿಕಾರವನ್ನು, ಆರ್​ಜಿ ಕರ್ ಸಂತ್ರಸ್ತೆಯ ತಾಯಿಯ ಭಾವುಕ ಮಾತು – Kannada News | Mamata Defeat: RG Kar Victim’s Mother Calls It Justice’s First Step

ಕೋಲ್ಕತ್ತಾ, ಮೇ 26: ಪಶ್ಚಿಮ ಬಂಗಾಳ(West Bengal)ದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸರ್ಕಾರ ಪತನಗೊಂಡು, ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಇದರ ಬೆನ್ನಲ್ಲೇ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದ ವೈದ್ಯೆಯ ತಾಯಿ ಹಾಗೂ ಪ್ರಸ್ತುತ ಪಾಣಿಹಟಿ ಕ್ಷೇತ್ರದ ಬಿಜೆಪಿ ಶಾಸಕಿ ರತ್ನಾ ದೇಬ್ನಾಥ್ ಅವರು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ನಬನ್ನಾದ 14ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಭೇಟಿಯಾದ ನಂತರ ರತ್ನಾ ದೇಬ್ನಾಥ್ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಟ್ವಿಟರ್) ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರಾಮಾಣಿಕತೆಯ ಶಕ್ತಿ ಅಪಾರವಾಗಿದೆ. ಅನ್ಯಾಯದ ವಿರುದ್ಧ ತಾಳ್ಮೆಯಿಂದ ಹೋರಾಡುವುದು ಮಾತ್ರ ನಮಗೆ ಅಗತ್ಯವಾಗಿತ್ತು ಎಂದು ಬರೆದಿರುವ ಅವರು, ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಚುನಾವಣಾ ಸೋಲನ್ನು ತಮ್ಮ ಮಗಳ ಸಾವಿಗೆ ಹೋಲಿಸಿದ್ದಾರೆ.

ರತ್ನಾ ದೇಬ್ನಾಥ್ ಅವರ ವರ್ಷದ ಮಗಳು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ಪಡೆಯುತ್ತಿದ್ದ ವೈದ್ಯೆಯಾಗಿದ್ದರು. 2024ರ ಆಗಸ್ಟ್ 8 ಮತ್ತು 9ರ ಮಧ್ಯರಾತ್ರಿ ಆಸ್ಪತ್ರೆಯ ಸೆಮಿನಾರ್ ಕೋಣೆಯೊಳಗೆ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಮತ್ತಷ್ಟು ಓದಿ: ಸುವೇಂದು ಆಪ್ತ ಸಹಾಯಕ ಚಂದ್ರನಾಥ್ ರಥ್ ಕೊಲೆಯಾಗಿದ್ದು ಹೇಗೆ? ಭೀಕರ ಕೃತ್ಯದ ವಿವರ ಇಲ್ಲಿದೆ

ಹಿಂದಿನ ಟಿಎಂಸಿ ಸರ್ಕಾರ ಮತ್ತು ಕೋಲ್ಕತ್ತಾ ಪೊಲೀಸರು ಆರೋಪಿಗಳನ್ನು ರಕ್ಷಿಸಲು ಸಾಕ್ಷ್ಯಗಳನ್ನು ತಿರುಚಿದ್ದಾರೆ ಎಂದು ಸಂತ್ರಸ್ತೆಯ ಪೋಷಕರು ಮೊದಲಿನಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಕೋಲ್ಕತ್ತಾ ಹೈಕೋರ್ಟ್​ ನಿರ್ದೇಶನದಂತೆ ಸದ್ಯ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದರ ತನಿಖೆ ನಡೆಸುತ್ತಿದ್ದು, ಕಳೆದ ವಾರವಷ್ಟೇ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.

ಅಧಿಕಾರಕ್ಕೆ ಬಂದ ತಕ್ಷಣವೇ ಆ್ಯಕ್ಷನ್‌ಗೆ ಇಳಿದಿರುವ ನೂತನ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಆರ್‌ಜಿ ಕರ್ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಹಾಗೂ ಪ್ರಮುಖ ಹುದ್ದೆಗಳಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿಗಳಾದ ವಿನೀತ್ ಗೋಯಲ್, ಇಂದಿರಾ ಮುಖರ್ಜಿ ಮತ್ತು ಅಭಿಷೇಕ್ ಗುಪ್ತಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಈ ಮೂವರ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶಿಸಿದ್ದಾರೆ.

ನಾನು ಇಂದು ಶಾಸಕಿಯಾಗಿರಬಹುದು, ಆದರೆ ನನ್ನ ಜೀವನದ ಎಲ್ಲಾ ಸಂತೋಷಗಳು ಮಗಳೊಂದಿಗೆ ಹೋಗಿವೆ. ನನ್ನ ಏಕೈಕ ಉದ್ದೇಶ ನನ್ನ ಮಗಳಿಗೆ ನ್ಯಾಯ ಸಿಗುವುದಾಗಿದೆ. ಈ ಹಿಂದೆ ತನಿಖಾಧಿಕಾರಿಗಳಿಗೆ ನೀಡಿದ್ದ ಪ್ರಮುಖ ಶಂಕಿತರ ಹೆಸರುಗಳ ಪಟ್ಟಿಯನ್ನು ಈಗ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರಿಗೂ ಸಲ್ಲಿಸಿದ್ದೇನೆ ಎಂದು ರತ್ನಾ ದೇಬ್ನಾಥ್ ಭಾವುಕರಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *