‘ನಾನು ಸತ್ತಿಲ್ಲ, ಟಿವಿ9 ನೋಡ್ತಾ ಆರಾಮಾಗಿದ್ದೇನೆ’; ದೊಡ್ಡಣ್ಣ ಸ್ಪಷ್ಟನೆ – Kannada News

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ  (Doddanna) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಕಿಡಿಗೇಡಿಗಳು ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ. ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಭಾವಪೂರ್ಣ ಶ್ರದ್ಧಾಂಜಲಿಯ ಪೋಸ್ಟರ್ ಮತ್ತು ಪೋಸ್ಟ್‌ಗಳು ಫೇಸ್‌ಬುಕ್ ಸೇರಿದಂತೆ ಹಲವು ಕಡೆ ಭಾರಿ ವೈರಲ್ ಆಗಿದ್ದವು. ಇದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ಆತ್ಮೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ, ಈ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ನಟ ದೊಡ್ಡಣ್ಣ ಸಿಟ್ಟಾಗಿದ್ದಾರೆ . ತಾವೇ ಸ್ಪಷ್ಟನೆ ಕೊಡುವ ಮೂಲಕ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.

‘ಪಬ್ಲಿಕ್ ಫ್ರೆಂಡ್​’ ಹೆಸರಿನ ಫೇಸ್​​ಬುಕ್​​ ಪೇಜ್​​​ನಲ್ಲಿ ಪೋಸ್ಟ್ ಒಂದನ್ನು ಹಾಕಲಾಗಿದೆ. ‘ದೊಡ್ಡಣ್ಣ ಇನ್ನಿಲ್ಲ’ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ. ಮರಣ ಎಂದು ಜೂನ್ 12ರ ಡೇಟ್ ಹಾಕಲಾಗಿದೆ. ‘ನಿಮ್ಮ ಅಭಿನಯ, ನಿಮ್ಮ ಸಾಧನೆ ಯಾವಾಗಲೂ ನಮ್ಮ ಜೊತೆ ಇರುತ್ತದೆ’ ಎಂದು ನೆನಪಿಸಿಕೊಳ್ಳಲಾಗಿದೆ. ಇದು ದೊಡ್ಡಣ್ಣ ಗಮನಕ್ಕೂ ಬಂದಿದೆ.

ಟಿವಿ9 ಕನ್ನಡದ ಜೊತೆ ಮಾತನಾಡಿದ ಅವರು, ‘ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಮನೆಯಲ್ಲಿ ಆರಾಮಾಗಿ ಟೀ ಕುಡಿಯುತ್ತಾ, ಟಿವಿ9 ಕನ್ನಡ ವಾಹಿನಿಯನ್ನೇ ನೋಡುತ್ತಾ ಕುಳಿತಿದ್ದೇನೆ. ನನಗೇನೂ ಆಗಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ದೊಡ್ಡಣ್ಣ ಎಂದರೆ ವಿಷ್ಣುವರ್ಧನ್​ಗೆ ಬಹಳ ಆತ್ಮೀಯತೆ: ಆ ದಿನಗಳ ಮೆಲುಕು ಹಾಕಿದ ನಟ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶ್ರದ್ಧಾಂಜಲಿಯ ಪೋಸ್ಟರ್ ಸಂಪೂರ್ಣವಾಗಿ ನಕಲಿ ಮತ್ತು ಎಡಿಟೆಡ್ ಆಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಮತ್ತು ಶೇರ್ ಮಾಡಬೇಡಿ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಹಿರಿಯ ನಟರ ಆರೋಗ್ಯದ ಬಗ್ಗೆ ಪದೇ ಪದೇ ಇಂತಹ ವಿಕೃತಿ ಮೆರೆಯುವ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *