ಬೆಂಗಳೂರು, ಮೇ,28: ರಾಜ್ಯದಲ್ಲಿ ದಿನದ ಅವಧಿಯಲ್ಲಿ ಬಿಸಿಲಿನ ಬೇಗೆ ಮುಂದುವರಿದಿದ್ದರೂ, ಮಧ್ಯಾಹ್ನದ ನಂತರ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು (ಮೇ 28) ನೀಡಿರುವ ವರದಿಗಳ ಪ್ರಕಾರ, ಮುಂದಿನ 7 ದಿನಗಳ ಅಧಿಕೃತ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ಮೇ 31 ರವರೆಗೆ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ (Squall) ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.
ದಕ್ಷಿಣ ಒಳನಾಡು: ಇಂದು ಆರೆಂಜ್ ಅಲರ್ಟ್!
ಮೇ 28 : ಅತ್ಯಂತ ಅಪಾಯಕಾರಿ ಹವಾಮಾನ ಇರಲಿದ್ದು, ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ. ಭಾರಿ ಗುಡುಗು, ಮಿಂಚು ಹಾಗೂ ಚಂಡಮಾರುತದ ಮಾದರಿ ತೀವ್ರ ಗಾಳಿ ಬೀಸಲಿದೆ.
ಮೇ 29 ರಿಂದ ಮೇ 31: ಮುಂದಿನ ಮೂರು ದಿನಗಳ ಕಾಲ ಈ ವಲಯಕ್ಕೆ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಜೂನ್ 1 ರಿಂದ ಜೂನ್ 3: ಯಾವುದೇ ಹವಾಮಾನ ಎಚ್ಚರಿಕೆಗಳು ಇರುವುದಿಲ್ಲ
ಉತ್ತರ ಒಳನಾಡು: ಮುಂದಿನ 2 ದಿನ ಹೈ ಅಲರ್ಟ್!
ಮೇ 28 ಮತ್ತು ಮೇ 29 (ಇಂದು ಮತ್ತು ನಾಳೆ): ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನ ತೀವ್ರಗೊಳ್ಳಲಿದ್ದು, ಆರಂಭದ ಎರಡು ದಿನಗಳ ಕಾಲ ‘ಆರೆಂಜ್ ಅಲರ್ಟ್’ ಜಾರಿಯಲ್ಲಿರಲಿದೆ. ತೀವ್ರ ಸಿಡಿಲು ಮತ್ತು ಬಿರುಗಾಳಿ ಅಪ್ಪಳಿಸುವ ಸಾಧ್ಯತೆಯಿದೆ.
ಮೇ 30 ಮತ್ತು ಮೇ 31: ವಾತಾವರಣದ ತೀವ್ರತೆ ಕೊಂಚ ತಗ್ಗಲಿದ್ದು, ‘ಯೆಲ್ಲೋ ಅಲರ್ಟ್’ ಇರಲಿದೆ.
ಜೂನ್ 1 ರಿಂದ ಜೂನ್ 3: ಮಳೆಯ ಅಬ್ಬರ ಸಂಪೂರ್ಣ ಶಾಂತವಾಗಲಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇವತ್ತು ಉಸಿರಾಡಲು ಯೋಗ್ಯವಾದ ಗಾಳಿ!
ಕರಾವಳಿ ಕರ್ನಾಟಕ : 4 ದಿನಗಳ ಕಾಲ ಯೆಲ್ಲೋ ಅಲರ್ಟ್!
ಮೇ 28 ರಿಂದ ಮೇ 31: ಕರಾವಳಿಯ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ನಿರಂತರವಾಗಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಜೂನ್ 1 ರಿಂದ ಜೂನ್ 3: ಹವಾಮಾನ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ಯಾವುದೇ ಮುನ್ನೆಚ್ಚರಿಕೆ ಇರುವುದಿಲ್ಲ.
ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಉಂಟಾಗಿ ಕ್ಷಣಾರ್ಧದಲ್ಲಿ ಭಾರಿ ಗಾಳಿ ಮಳೆ ಬರುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಸಿಡಿಲಿನ ಸಮಯದಲ್ಲಿ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಮುಚ್ಚಿಡಲು ಸೂಚಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
