ನಾಳೆಯ ಹವಾಮಾನ: ಮುಕ್ಕಾಲು ಕರ್ನಾಟಕದಲ್ಲಿ ಮಳೆ; ಉತ್ತರ ಒಳನಾಡಲ್ಲಿ ಉಷ್ಣಾಂಶ ಹೆಚ್ಚಳದ ಎಚ್ಚರಿಕೆ – Kannada News | Karnataka Weather: Rain Alert Across Most of Karnataka Tomorrow; North Interior Region Braces for Heat Surge

ಮಳೆ (ಸಾಂದರ್ಭಿಕ ಚಿತ್ರ)Image Credit source: news.lankasri.com

ಬೆಂಗಳೂರು, ಮೇ 13: ಉತ್ತರ ಒಳನಾಡಿನ ಜಿಲ್ಲೆಗಳಲ್ಲಿನ ತಾಪಮಾನ ಏರಿಕೆ ಎಚ್ಚರಿಕೆಯ ನಡುವೆಯೂ ಮುಕ್ಕಾಲು ಕರ್ನಾಟಕದಲ್ಲಿ ನಾಳೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮಂಡ್ಯ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಡೆ ವರುಣನ ಆಗಮನದ ನಿರೀಕ್ಷೆ ಇದೆ. ಹಲವೆಡೆ ಗುಡುಗು, ಮಿಂಚಿನ ಜೊತೆ ಭಾರಿ ಗಾಳಿ ಒಳಗೊಂಡ ಮಳೆ ಸುರಿಯಲಿದೆ ಎಂದು ಎಚ್ಚರಿಸಲಾಗಿದೆ.

ಮುಖ್ಯಾಂಶಗಳು

  • ಉತ್ತರ ಒಳನಾಡಿನ ಜಿಲ್ಲೆಗಳಲ್ಲಿನ ತಾಪಮಾನ ಏರಿಕೆ ಎಚ್ಚರಿಕೆ
  • ಈ ನಡುವೆಯೂ ಮುಕ್ಕಾಲು ಕರ್ನಾಟಕದಲ್ಲಿ ಮಳೆ ಸಾಧ್ಯತೆ
  • ಗುಡುಗು, ಮಿಂಚಿನ ಜೊತೆ ವರುಣನ ಆಗಮನದ ನಿರೀಕ್ಷೆ

ಎಲ್ಲೆಲ್ಲಿ ಮಳೆ?

ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಾಧಾರಣ ಅಥವಾ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಭಾಗದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲೂ ವರುಣನ ಆಗಮನದ ನಿರೀಕ್ಷೆ ಇದೆ. ಹಾಗೆಯೇ ದಕ್ಷಿಣ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ.

ಇದನ್ನೂ ಓದಿ: ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ

ತಾಪಮಾನ ಹೆಚ್ಚಳದ ಎಚ್ಚರಿಕೆ

ಉಳಿದಂತೆ ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಮಂಡ್ಯ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಜೊತೆಗೆ ಮುಂದಿನ ಐದು ದಿನಗಳಕಾಲ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿನ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್​​ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಬೆಂಗಳೂರಲ್ಲೂ ಮಳೆ ಸಾಧ್ಯತೆ

ಬೆಂಗಳೂರು ನಗರದಲ್ಲಿಯೂ ನಾಳೆ ಮಳೆ ಸಾಧ್ಯತೆ ಇರೋದಾಗಿ ಎಚ್ಚರಿಸಲಾಗಿದೆ. ನಗರದ ತಾಪಮಾನ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಗಾಳಿಯ ವೇಗ ಗಂಟೆಗೆ ಸುಮಾರು 10 ಕಿಲೋ ಮೀಟರ್​​ನಷ್ಟು ಇರಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.
​​

Published On – 5:36 pm, Wed, 13 May 26

Source link

Leave a Reply

Your email address will not be published. Required fields are marked *