ನಾವು ರೈತರ ಹಿತ ಕಾಪಾಡಬೇಕು, ಕೋರ್ಟ್ ಆದೇಶ ಪಾಲಿಸಬೇಕು: ಕಾವೇರಿ ನದಿ ನೀರಿನ ಬಗ್ಗೆ ಸಿಎಂ ಹೇಳಿದ್ದಿಷ್ಟು – Kannada News | Karnataka’s Legal Battle for Cauvery Water: CM, Minister Respond to TN Release Order

ಬೆಂಗಳೂರು, ಆ.11: ನೆರೆ ರಾಜ್ಯ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ಸ್ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವ ಬೆನ್ನಲ್ಲೇ, ರಾಜ್ಯದ ರೈತರ ಹಿತರಕ್ಷಣೆ ಹಾಗೂ ಮುಂದಿನ ಕಾನೂನಾತ್ಮಕ ಹೋರಾಟದ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ರೈತರ ಹಿತ ಕಾಪಾಡುತ್ತೇವೆ, ಕೋರ್ಟ್ ಆದೇಶವನ್ನೂ ಪಾಲಿಸಬೇಕು:

CWRC ಆದೇಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಲಾಶಯಗಳ ಒಳಹರಿವು ಹಾಗೂ ನೀರಿನ ಲಭ್ಯತೆಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. “ತಮಿಳುನಾಡಿಗೆ 12,000 ಕ್ಯೂಸೆಕ್ಸ್ ನೀರು ಬಿಡಲು ಆದೇಶ ಬಂದಿದೆ. ನಮ್ಮ ಜಲಾಶಯಗಳ ಒಳಹರಿವು ಎಷ್ಟಿದೆ ಎಂಬುದನ್ನು ಸತತವಾಗಿ ಗಮನಿಸುತ್ತಿದ್ದೇನೆ. ಡ್ಯಾಮ್‌ನಲ್ಲಿರುವ ನೀರಿನ ಲಭ್ಯತೆಯನ್ನು ಇಟ್ಟುಕೊಂಡೇ ತೀರ್ಮಾನ ಮಾಡುತ್ತೇವೆ. ನೀರು ಬಿಡುವ ಆದೇಶದಿಂದ ರೈತರು ಆಕ್ರೋಶಗೊಳ್ಳುವ ಅಗತ್ಯವಿಲ್ಲ. ರೈತರು ತಾಳ್ಮೆಯಿಂದ ಹಾಗೂ ಸೌಹಾರ್ದತೆಯಿಂದ ಇರಿ. ನಮಗೆ ಅಧಿಕಾರ ಕೊಟ್ಟಿದ್ದೇ ನಿಮಗಾಗಿ ಸೇವೆ ಸಲ್ಲಿಸಲು. ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಮಾಡುವುದು ನಮಗೆ ಇಷ್ಟವಿಲ್ಲ. ಪ್ರಕೃತಿ ನಮ್ಮನ್ನು ಉಳಿಸುತ್ತದೆ, ನಾವು ನಮ್ಮ ರಾಜ್ಯದ ರೈತರನ್ನು ಬದುಕಿಸುತ್ತೇವೆ.” ಎಂದು ಹೇಳಿದ್ದಾರೆ.

“ನೀರಾವರಿ ವಿಷಯದಲ್ಲಿ ನಾನು ಅತ್ಯಂತ ಪಾರದರ್ಶಕವಾಗಿ ನಡೆದುಕೊಳ್ಳುತ್ತೇನೆ. ಈ ವಿಷಯದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಕೋರ್ಟ್ ಆದೇಶವನ್ನು ಗೌರವಿಸುವುದರ ಜೊತೆಗೆ ನಮ್ಮ ರೈತರ ಬೆಳೆಗಳನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ನಾಳೆ ಹಿರಿಯ ಮಂತ್ರಿಗಳು, ಪಕ್ಷದ ನಾಯಕರು ಹಾಗೂ ಮರುದಿನ ಸಚಿವ ಸಂಪುಟ (Cabinet) ಸಭೆಯನ್ನು ಕರೆಯಲಾಗಿದ್ದು, ಈ ವಿಷಯವನ್ನು ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಲಾಗುವುದು” ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಮುಂಗಾರು ಮಳೆ ಬರಲು ಸಾಧ್ಯವಿಲ್ಲ: ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರದ ತೀರ್ಮಾನ

CWMA ಮತ್ತು ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಕಾಯುತ್ತಿದ್ದೇವೆ: ರಾಮಲಿಂಗಾರೆಡ್ಡಿ

ಇತ್ತ ಕೋಲಾರದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, “CWRC ಮುಂದಿನ 15 ದಿನ ದಿನಕ್ಕೆ 12,000 ಕ್ಯೂಸೆಕ್ ನೀರು ಬಿಡಲು ಹೇಳಿದೆ. ಅಂದರೆ ಬರೋಬ್ಬರಿ 15 ಟಿಎಂಸಿಗೂ ಹೆಚ್ಚು ನೀರು ಬಿಡಬೇಕಾಗುತ್ತದೆ. ನಮ್ಮ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನೀರಾವರಿ ತಜ್ಞರು ಹಾಗೂ ಕಳೆದ 20 ವರ್ಷಗಳಿಂದ ಕಾವೇರಿ ವಿಷಯದಲ್ಲಿ ವಾದ ಮಂಡಿಸುತ್ತಿರುವ ಸುಪ್ರೀಂ ಕೋರ್ಟ್ ವಕೀಲರ ತಂಡ ದೆಹಲಿಯಲ್ಲಿದೆ. ಮೇ, ಜೂನ್, ಜುಲೈ ತಿಂಗಳಲ್ಲಿ ಸುಮಾರು 3.5 ಟಿಎಂಸಿ ನೀರು ಹರಿದುಹೋಗಿದೆ. ಕಬಿನಿ ಜಲಾಶಯ ತುಂಬಿದ್ದರಿಂದ ಅದನ್ನು ಸ್ಟೋರೇಜ್ ಮಾಡಲು ಸಾಧ್ಯವಾಗದೆ 7.5 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿದಿದೆ. ನಮಗೆ ಮುಂಗಾರು ಮಳೆ ಕಡಿಮೆಯಾಗುತ್ತಿದ್ದು, ಆಗಸ್ಟ್ ಮಳೆಯನ್ನು ನಂಬಲು ಸಾಧ್ಯವಿಲ್ಲ. ಆದರೆ ತಮಿಳುನಾಡಿಗೆ ಹಿಂಗಾರು ಮಳೆಯ ಅವಕಾಶವಿದೆ.” ಎಂದು ಹೇಳಿದರು. CWMA ಸಭೆ ಹಾಗೂ ಸುಪ್ರೀಂ ಕೋರ್ಟ್‌ ವಿಚಾರಣೆಯ ತೀರ್ಮಾನಗಳನ್ನು ನೋಡಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *