ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ – Kannada News | Assam Follows Bihar, Announces Withdrawal of Cases Against NEET Protesters

ಗುವಾಹಟಿ, ಜುಲೈ 28: ನೀಟ್(NEET) ಪರೀಕ್ಷಾ ಅಕ್ರಮ ಹಾಗೂ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಹಾಗೂ ಬಂಧಿತರನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಅಸ್ಸಾಂ ಸರ್ಕಾರ ಅಧಿಕೃತವಾಗಿ ಹೇಳಿದೆ. ಅಸ್ಸಾಂ ಗೃಹ ಮತ್ತು ರಾಜಕೀಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಪ್ರತಿಭಟನೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ದಾಖಲಾಗಿದ್ದ 5 ಪ್ರಕರಣಗಳು ಹಾಗೂ ಬಂಧಿಸಲಾಗಿದ್ದ 13 ಜನರನ್ನು ಕಾನೂನು ಪ್ರಕ್ರಿಯೆಗೊಳಪಟ್ಟು ಬಿಡುಗಡೆ ಮಾಡಲಾಗುವುದು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರತಿಕೂಲ ಅಥವಾ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಪ್ರಕರಣಗಳು ರದ್ದು: ಜುಲೈ 26 ರ ಸಂಜೆ 6 ಗಂಟೆಗೆ ಮುಂಚಿತವಾಗಿ ದಾಖಲಾದ ಎಲ್ಲಾ ಎಫ್‌ಐಆರ್ (FIR) ಹಾಗೂ ಕಾನೂನು ಕ್ರಮಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ತ್ವರಿತವಾಗಿ ಪ್ರಾರಂಭಿಸಲಾಗುತ್ತದೆ.  ಈಗಾಗಲೇ ಬಂಧನಕ್ಕೊಳಗಾಗಿರುವ ಪ್ರತಿಭಟನಾಕಾರರ ಪ್ರಕರಣಗಳನ್ನು ಮರುಪರಿಶೀಲಿಸಿ ಅವರನ್ನು ಶೀಘ್ರವೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಬಿಹಾರ ಸರ್ಕಾರದ ಹಾದಿಯಲ್ಲಿ ಅಸ್ಸಾಂ: ಈ ಮುಂಚೆಯಷ್ಟೇ ಬಿಹಾರ ಸರ್ಕಾರವು ಜುಲೈ 25 ರಂದು ಬಂಧಿಸಲಾಗಿದ್ದ 694 ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಿ, ಎಲ್ಲಾ ಪ್ರಕರಣಗಳಿಗೆ ‘ಸಂಪೂರ್ಣ ಕ್ಷಮಾದಾನ’ ಘೋಷಿಸಿತ್ತು. ಈಗ ಅಸ್ಸಾಂ ಕೂಡ ಅದೇ ಹಾದಿ ತುಳಿದಿದೆ.

ಮತ್ತಷ್ಟು ಓದಿ: ನೀಟ್ ಮರುಪರೀಕ್ಷೆಯಲ್ಲಿ ಹಾವೇರಿ ವಿದ್ಯಾರ್ಥಿಗೆ ಅನ್ಯಾಯ: ಕಾನೂನು ಹೋರಾಟಕ್ಕಿಳಿದ ಪೋಷಕರು, ಆಗಿದ್ದೇನು?

ಸಿಜೆಪಿ (CJP) ನಾಯಕರ ಪ್ರತಿಕ್ರಿಯೆ ಮತ್ತು ಸರ್ಕಾರದ ಮಾತುಕತೆ: ಕಾಕ್ರೋಚ್ ಜನತಾ ಪಾರ್ಟಿ (CJP) ಮುಖ್ಯ ವಕ್ತಾರ ಸೌರವ್ ದಾಸ್ ಅವರು ಅಸ್ಸಾಂ ಸರ್ಕಾರದ ಆದೇಶದ ಪ್ರತಿಯನ್ನು ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ರಾಜಸ್ಥಾನ ಮತ್ತು ಇತರ ರಾಜ್ಯಗಳ ಅಭಯ: ಬಿಹಾರ ಮತ್ತು ಅಸ್ಸಾಂ ಅಧಿಸೂಚನೆಗಳ ಬೆನ್ನಲ್ಲೇ ರಾಜಸ್ಥಾನದಲ್ಲೂ ಪ್ರತಿಭಟನಾಕಾರರ ವಿರುದ್ಧ ಯಾವುದೇ ಎಫ್‌ಐಆರ್ ಅಥವಾ ಪ್ರತಿಕೂಲ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಲಾಗಿದೆ.

ಸರ್ಕಾರದ ಪ್ರತಿನಿಧಿಗಳ ಜೊತೆ ಸಭೆ: ಕೇಂದ್ರ ಸರ್ಕಾರದ ಪ್ರತಿನಿಧಿಗಳು ಹಾಗೂ ದೆಹಲಿ ಪೊಲೀಸರ ಮಧ್ಯಸ್ಥಿಕೆದಾರರು ಸಿಜೆಪಿ ನಾಯಕರೊಂದಿಗೆ 2-3 ಗಂಟೆಗಳ ಕಾಲ ವಿಸ್ತೃತ ಸಭೆ ನಡೆಸಿದ್ದಾರೆ. ಈ ವೇಳೆ ಅಸ್ಸಾಂ ಮತ್ತು ಬಿಹಾರದ ಅಧಿಸೂಚನೆಗಳ ಪ್ರತಿಗಳನ್ನು ಹಂಚಿಕೊಳ್ಳಲಾಗಿದೆ.

ಕೇಂದ್ರದ ಭರವಸೆ: ಇತರ ಬಿಜೆಪಿ, ಎನ್‌ಡಿಎ ಆಡಳಿತದ ರಾಜ್ಯಗಳಲ್ಲೂ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಕುರಿತು ಕೇಂದ್ರ ಸರ್ಕಾರವು ಲಿಖಿತ ಗ್ಯಾರಂಟಿ-ಅಧಿಸೂಚನೆ ಹೊರಡಿಸುವ ಭರವಸೆ ನೀಡಿದೆ.
ಆಗಸ್ಟ್ ಪರೀಕ್ಷಾ ಸುಧಾರಣೆ ಕಾಯ್ದೆ ತರುವುದು, ಪೊಲೀಸರ ಬೆದರಿಕೆ ತಡೆಯುವುದು ಮತ್ತು ಪ್ರಕರಣಗಳನ್ನು ರದ್ದುಗೊಳಿಸುವ ಕುರಿತು ಕೇಂದ್ರ ಸರ್ಕಾರವು ಸಿಜೆಪಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *