ನಿಷೇಧವಾಗಿರುವ ‘ಸತ್ಲಜ್’ ಸಿನಿಮಾಕ್ಕೆ ದಿಲ್ಜೀತ್ ಪಡೆದ ಸಂಭಾವನೆ 1 ರೂಪಾಯಿ ಮಾತ್ರ – Kannada News | Diljit Dosanjh only took 1 rs for Satluj movie says director

ದಿಲ್ಜಿತ್ ದುಸ್ಸಾಂಜ್ (diljit dosanjh), ಬಾಲಿವುಡ್​ ಮತ್ತು ಪಂಜಾಬಿ ಚಿತ್ರರಂಗದ ಬಲು ಜನಪ್ರಿಯ ನಟ, ಜೊತೆಗೆ ವಿಶ್ವಮಟ್ಟದಲ್ಲಿ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಗಾಯಕ ಸಹ. ಅವರ ಲೈವ್ ಕಾನ್ಸರ್ಟ್​​ಗಳಿಗೆ ಲಕ್ಷಾಂತರ ರೂಪಾಯಿ ಟಿಕೆಟ್ ಕೊಟ್ಟು, ಲಕ್ಷಾಂತರ ಜನ ಭಾಗವಹಿಸುತ್ತಾರೆ. ಇತ್ತೀಚೆಗಷ್ಟೆ ಅವರ ನಟನೆಯ ‘ಸತ್ಲಜ್’ ಚಿತ್ರ ವಿವಾದಕ್ಕೆ ಸಿಲುಕಿಕೊಂಡಿದೆ. ಸಿನಿಮಾಕ್ಕೆ ಸಿಬಿಎಫ್​​ಸಿ, ಪ್ರಮಾಣ ಪತ್ರ ನೀಡುವುದನ್ನೇ ನಿರಾಕರಿಸಿದೆ. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಯ್ತಾದರೂ ಕೇವಲ ಎರಡು ದಿನದ ಒಳಗೆ ಅಲ್ಲಿಂದಲೂ ಅದನ್ನು ತೆಗೆದು ಹಾಕಲಾಗಿದೆ. ಬಂಡವಾಳ ಹೂಡಿ, ವರ್ಷಗಟ್ಟಲೆ ಚಿತ್ರೀಕರಣ ಮಾಡಿದ ಸಿನಿಮಾ, ಈಗ ರಾಜಕೀಯ ಕಾರಣಗಳಿಂದಲ ಬಿಡುಗಡೆಯೇ ಆಗುತ್ತಿಲ್ಲ.

ದಿಲ್ಜಿತ್ ದೋಸಾಂಜ್ ಮೊದಲ ದಿನದಿಂದಲೇ ಈ ಚಿತ್ರಕ್ಕೆ ಸಂಪೂರ್ಣ ಬದ್ಧರಾಗಿದ್ದರು. ಸಿನಿಮಾ ಚೆನ್ನಾಗಿ ಮೂಡಿ ಬರಬೇಕು, ಎಲ್ಲರಿಗೂ ಸಿನಿಮಾದ ಮೂಲಕ ತಾವು ಹೇಳುತ್ತಿರುವ ಸತ್ಯ ತಿಳಿಯಬೇಕು ಎಂಬುದು ದಿಲ್ಜಿತ್ ದೊಸ್ಸಾಂಜ್ ಆಸೆ ಆಗಿತ್ತು. ಇತ್ತೀಚಿನ ಸಂವಾದವೊಂದರಲ್ಲಿ ಮಾತನಾಡಿರುವ ಚಿತ್ರದ ನಿರ್ದೇಶಕ ಹನಿ ತೆಹ್ರಾನ್, ನಟ ದಿಲ್ಜಿತ್ ಬದ್ಧತೆಯ ಬಗ್ಗೆ ಮಾತನಾಡುತ್ತಾ, ದಿಲ್ಜಿತ್ ಈ ಚಿತ್ರಕ್ಕಾಗಿ ಕೇವಲ 1 ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಅಂಶ ಬಹಿರಂಗಪಡಿಸಿದ್ದಾರೆ.

ದಿಲ್ಜಿತ್ ಅವರ ಬಗ್ಗೆ ಮಾತನಾಡುತ್ತಾ ನಿರ್ದೇಶಕ ತೆಹ್ರಾನ್, ‘ದಿಲ್ಜಿತ್ ಇಲ್ಲದೆ ಈ ಚಿತ್ರ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ. ಆ ಜಗತ್ತನ್ನು ಅರ್ಥಮಾಡಿಕೊಂಡಿರುವ ನಟನ ಅಗತ್ಯವಿತ್ತು. ನಾನು ಸಿಖ್ ನಟನನ್ನೇ ಹಾಕಬೇಕೆಂದು ಬಯಸಿದ್ದೆ, ಏಕೆಂದರೆ ನಾನು ಬಾಲಿವುಡ್‌ನ ಬೇರೆ ನಟನನ್ನು ಈ ಪಾತ್ರಕ್ಕೆ ಹಾಕಿದ್ದರೆ, ಅದು ಈ ನಟ ಸಿಖ್ ವ್ಯಕ್ತಿಯಾಗಿ ನಟಿಸುತ್ತಿದ್ದಾರೆ ಎಂಬ ಚರ್ಚೆಗೆ ದಾರಿ ಮಾಡಿಕೊಡುತ್ತಿತ್ತು. ಅದು ಖಲ್ರಾ ಸಾಹೇಬರ ಪ್ರಯಾಣಕ್ಕೆ ಮತ್ತು ಈ ಕಥೆಯು ಹೊತ್ತಿರುವ ಜನರ ನೋವಿಗೆ ಮಾಡಿದ ಅನ್ಯಾಯವಾಗುತ್ತಿತ್ತು’ ಎಂದಿದ್ದಾರೆ.

‘ಸತ್ಲಜ್’ ಚಿತ್ರವು ಜಶ್ವಂತ್ ಸಿಂಗ್ ಖಲ್ರಾ ಅವರ ಜೀವನದ ಮೇಲೆ ಆಧಾರಿತವಾಗಿದೆ. ಅವರು 1990ರ ದಶಕದ ಮಧ್ಯಭಾಗದಲ್ಲಿ ಪಂಜಾಬ್‌ನಲ್ಲಿ ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು, ಬ್ಯಾಂಕ್ ಕ್ಲರ್ಕ್ ಆಗಿದ್ದುಕೊಂಡು ಅವರು ಮಾನವಕ ಹಕ್ಕುಗಳ ಪರವಾಗಿ ಹೋರಾಡಿದ್ದರು. 1984 ಮತ್ತು 1994ರ ನಡುವೆ ಪಂಜಾಬ್‌ನಲ್ಲಿ 25,000 ಜನರ ಶವಸಂಸ್ಕಾರದ ಬಗ್ಗೆ ಅವರು ನಡೆಸಿದ ತನಿಖೆಯ ಬಗೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ, 1995ರಲ್ಲಿ ಖಲ್ರಾ ಅವರನ್ನು ಅಪಹರಿಸಿ ಪೊಲೀಸ್ ಕಸ್ಟಡಿಯಲ್ಲಿಯೇ ಹತ್ಯೆ ಮಾಡಲಾಗಿತ್ತು.

ಇದನ್ನೂ ಓದಿ:26 ವರ್ಷಗಳ ಬಳಿಕ ದಕ್ಷಿಣಕ್ಕೆ ಬರುತ್ತಿದ್ದಾರೆ ಬಾಲಿವುಡ್​​ ಹಿರಿಯ ನಟ

ಖಲ್ರಾ ಅವರ ಪಾತ್ರದ ಬಗ್ಗೆ ಯೋಚಿಸಿದಾಗ ತಕ್ಷಣಕ್ಕೆ ದಿಲ್ಜಿತ್ ಅವರ ಮುಖವೇ ನೆನಪಿಗೆ ಬಂದಿತು ಎಂದು ತೆಹ್ರಾನ್ ಹಂಚಿಕೊಂಡಿದ್ದಾರೆ. 2021ರಲ್ಲಿ ಅವರು ದಿಲ್ಜಿತ್ ಅವರನ್ನು ಭೇಟಿಯಾಗಿ, 30 ನಿಮಿಷಗಳ ಕಾಲ ಸಿನಿಮಾದ ಬಗ್ಗೆ ಮಾತನಾಡಿದ್ದರಂತೆ ನಿರ್ದೇಶಕ, ಆಗ ಖಲ್ರಾ ಬಗ್ಗೆ ತಾವು ನಡೆಸಿರುವ ಅಧ್ಯಯನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರಂತೆ. ಜೊತೆಗೆ ಖಲ್ರಾ ಅವರ ಛಾಯಾಚಿತ್ರವನ್ನು ದಿಲ್ಜಿತ್ ತೋರಿಸಿದ್ದರಂತೆ. ಆ ಛಾಯಾಚಿತ್ರ ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದ ದಿಲ್ಜಿತ್, ಅಂದೇ ನಿರ್ಧರಿಸಿದರಂತೆ ಈ ಸಿನಿಮಾನಲ್ಲಿ ತಾವು ನಟಿಸಬೇಕು, ಹಾಗೂ ಈ ಸಿನಿಮಾ ಹೆಚ್ಚು ಜನರನ್ನು ತಲುಪಬೇಕು ಎಂದು. ‘ಅವರು ತಮ್ಮ ಕುರ್ಚಿಯಿಂದ ಎದ್ದು, ಸ್ಕ್ರಿಪ್ಟ್ ಅನ್ನು ತಮ್ಮ ಹಣೆಗೆ ಮುಟ್ಟಿ ‘ವಾಹೇಗುರು’ ಎಂದರು. ‘ಖಲ್ರಾ ಅವರಂತಹ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಲು ನಾನು ಹೇಗೆ ಹಣ ಪಡೆಯಲಿ? ಅದು ನಾಚಿಕೆಗೇಡಿನ ವಿಷಯ’ ಎಂದು ಹೇಳಿದರು.” ನಂತರ ನಿರ್ದೇಶಕರು ಒತ್ತಾಯಿಸಿದಾಗ, ಒಪ್ಪಂದಕ್ಕಾಗಿ ಏನಾದರೂ ಪಾವತಿಸಬೇಕೆಂದಿದ್ದರೆ ಕೇವಲ 1 ರೂಪಾಯಿ ಕೊಡಿ ಎಂದು ನಟ ಸರಳವಾಗಿ ಹೇಳಿದರು’ ಎಂದು ನಿರ್ದೇಶಕ ತೆಹ್ರಾನ್ ಈಗ ಹೇಳಿದ್ದಾರೆ.

‘ಸತ್ಲಜ್’ ಚಿತ್ರದ ಚಿತ್ರೀಕರಣದುದ್ದಕ್ಕೂ ದಿಲ್ಜಿತ್ ಅದ್ಭುತವಾಗಿ ಬೆಂಬಲ ನೀಡಿದರು ಎಂದು ತೆಹ್ರಾನ್ ಹಂಚಿಕೊಂಡಿದ್ದಾರೆ. “ಕೆಲವು ದಿನಗಳವರೆಗೆ ಅವರು ಬೆಳಿಗ್ಗೆ ಆರು ಗಂಟೆಗೆ ಬಂದು ಹಾಜರಾಗುತ್ತಿದ್ದರು, ಆದರೆ ವೇಳಾಪಟ್ಟಿ ಏರುಪೇರಾದ ಕಾರಣ ಸಂಜೆ ನಾಲ್ಕು ಗಂಟೆಯವರೆಗೆ ಅವರ ಮೊದಲ ಶಾಟ್ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಾನು ಪದೇ ಪದೇ ಕ್ಷಮೆಯಾಚಿಸುತ್ತಿದ್ದೆ. ಆದರೆ ಪ್ರತಿ ಬಾರಿಯೂ ಅವರು, ‘ಪಾಜಿ, ತೊಂದರೆಯಿಲ್ಲ. ನೀವು ಏನೇ ಮಾಡುತ್ತಿದ್ದರೂ ಚಿತ್ರಕ್ಕಾಗಿ ಮಾಡುತ್ತಿದ್ದೀರಿ. ಚಿತ್ರವನ್ನು ಬೆಂಬಲಿಸಲು ನಾನು ಇಲ್ಲಿದ್ದೇನೆ’ ಎಂದು ಹೇಳುತ್ತಿದ್ದರು,” ಎಂದು ನಿರ್ದೇಶಕರು ನೆನಪಿಸಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *