ನೀಟ್ ಪೇಪರ್ ಲೀಕ್ ಪ್ರತಿಭಟನೆಗೆ ಸಲ್ಮಾನ್ ಖಾನ್ ಬೆಂಬಲ; ಹಿಂಸಾಚಾರಕ್ಕೆ ಸಲ್ಲು ಬೇಸರ – Kannada News | NEET Paper Leak: Salman Khan Supports Protesting Students, Urges Govt Action

ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ಬೆಂಬಲಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಈ ಕುರಿತು ಸುದೀರ್ಘ ಟ್ವೀಟ್ ಮಾಡಿರುವ ಅವರು, ವಿದ್ಯಾರ್ಥಿಗಳ ಧೈರ್ಯವನ್ನು ಶ್ಲಾಘಿಸುವುದರ ಜೊತೆಗೆ, ಈ ಹೋರಾಟವನ್ನು ಯಾವುದೇ ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಬೇಸರ ತಂದಿದೆ

‘ಇದು ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟವಾಗಿತ್ತು. ಆದರೆ ಇದು ಹಿಂಸಾತ್ಮಕ ರೂಪ ಪಡೆದುಕೊಂಡಿದ್ದನ್ನು ನೋಡಿ ನನಗೆ ತೀವ್ರ ಬೇಸರವಾಗಿದೆ. ಈ ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ’ ಎಂದು ಸಲ್ಮಾನ್ ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳ ಬೆನ್ನಿಗೆ ನಿಂತ ಸಲ್ಲು

‘ಪ್ರಶ್ನೆ ಪತ್ರಿಕೆ ಸೋರಿಕೆಯು ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ದೇಶದ ಮಕ್ಕಳೆಲ್ಲರೂ ಒಂದಾಗಿರುವುದನ್ನು ಮತ್ತು ಅವರಿಗೆ ಪೋಷಕರು ಬೆಂಬಲ ನೀಡುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಕಷ್ಟಪಟ್ಟು ಓದಿ ಉತ್ತಮ ಭವಿಷ್ಯವನ್ನು ಹಾಗೂ ಸುಶಿಕ್ಷಿತ ಭಾರತವನ್ನು ಕಟ್ಟಲು ವಿದ್ಯಾರ್ಥಿಗಳು ತೋರಿಸುತ್ತಿರುವ ಸಮರ್ಪಣಾ ಭಾವ ಮತ್ತು ಪ್ರಾಮಾಣಿಕತೆಯನ್ನು ನಾನು ಪ್ರಶಂಸಿಸುತ್ತೇನೆ. ಈ ತಲೆಮಾರು ಭಾರತ ಹೆಮ್ಮೆ ಪಡುವಂತೆ ಮಾಡುತ್ತದೆ’ ಎಂದು ವಿದ್ಯಾರ್ಥಿಗಳ ಧೈರ್ಯವನ್ನು ಕೊಂಡಾಡಿದ್ದಾರೆ.

ಸಲ್ಮಾನ್ ಖಾನ್ ಟ್ವೀಟ್

ಇದು ವಿದ್ಯಾರ್ಥಿಗಳ ಹೋರಾಟ, ರಾಜಕೀಯ ಬಣ್ಣ ಬಳಿಯಬೇಡಿ

‘ಈ ಸಮಸ್ಯೆ ಇರುವುದು ವಿದ್ಯಾರ್ಥಿಗಳು ಮತ್ತು ಶಿಕ್ಷಣ ವ್ಯವಸ್ಥೆಯ ನಡುವೆ. ಇದನ್ನು ಯಾರೂ ರಾಜಕೀಯವಾಗಿ ಬಳಸಿಕೊಳ್ಳಬಾರದು. ಇದರ ಸಂಪೂರ್ಣ ಕ್ರೆಡಿಟ್ ನಮ್ಮ ದೇಶದ ವಿದ್ಯಾರ್ಥಿಗಳಿಗೆ ಮಾತ್ರ ಸಲ್ಲಬೇಕು. ಸರ್ಕಾರ ಕೂಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ, ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ನಂಬಿಕೆ ನನಗಿದೆ. ಒಂದು ಸಕಾರಾತ್ಮಕ ತೀರ್ಮಾನ ಬರಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಭಾರತ ಜಾಗತಿಕ ಶಿಕ್ಷಣದ ಕೇಂದ್ರವಾಗಲಿ

‘ಶಿಕ್ಷಣವೇ ಮುಂದಿನ ದಿನಗಳಲ್ಲಿ ದೇಶದ ದೊಡ್ಡ ಟ್ರೆಂಡ್ ಆಗಬೇಕು. ಅದು ವರ್ಷದಿಂದ ವರ್ಷಕ್ಕೆ ಎಷ್ಟು ಜನಪ್ರಿಯವಾಗಬೇಕೆಂದರೆ, ವಿದೇಶಗಳಿಂದಲೂ ಜನರು ಓದಲು ಭಾರತಕ್ಕೆ ಬರುವಂತಾಗಬೇಕು. ಆ ಮೂಲಕ ಭಾರತವು ಜಾಗತಿಕ ಶಿಕ್ಷಣದ ಪ್ರಮುಖ ಕೇಂದ್ರವಾಗಬೇಕು’ ಎಂದು ಸಲ್ಮಾನ್ ಖಾನ್ ತಮ್ಮ ಟ್ವೀಟ್‌ನಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಸಲ್ಮಾನ್ ಫಾರ್ಮ್‌ಹೌಸ್‌ಗೆ ಹೋಗೋದು ಸುಲಭ, ಆದ್ರೆ ವಾಪಸ್ ಬರೋದು ಭಾಯ್ ಇಷ್ಟ’

ಸದ್ಯ ಸಲ್ಮಾನ್ ಖಾನ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ನ್ಯಾಯಕ್ಕಾಗಿ ಬೀದಿಗಿಳಿದಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ದೊಡ್ಡ ನೈತಿಕ ಬೆಂಬಲ ಸಿಕ್ಕಂತಾಗಿದೆ.

ಪ್ರಶ್ನೆ: ದೆಹಲಿಯಲ್ಲಿ ಪ್ರತಿಭಟನೆ ಏಕೆ?
ಉತ್ತರ: ನೀಟ ಪೇಪರ್ ಲೀಕ್ ವಿರೋಧಿಸಿ ಪ್ರತಿಭಟನೆ

ಪ್ರಶ್ನೆ: ಯಾರೆಲ್ಲ ಬೆಂಬಲ?
ಉತ್ತರ:
ಸಿಜೆಪಿ, ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್

ಪ್ರಶ್ನೆ: ಯಾವ ಚಿತ್ರರಂಗದ ಬೆಂಬಲ
ಉತ್ತರ:
ಕನ್ನಡ, ಹಿಂದಿ, ತಮಿಳು ಸೇರಿದಂತೆ ಎಲ್ಲ ರಂಗದವರ ಬೆಂಬಲ

Source link

Leave a Reply

Your email address will not be published. Required fields are marked *