ಜಮ್ಮು ಮತ್ತು ಕಾಶ್ಮೀರ, ಜುಲೈ 7: ಕಳೆದೊಂದು ವಾರದಿಂದ ಪಾಕಿಸ್ತಾನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು (Indus Agreement) ರದ್ದುಗೊಳಿಸಿದ್ದಕ್ಕೆ ಭಾರತದ ವಿರುದ್ಧ ಆಕ್ರೋಶ ಹೊರಹಾಕುತ್ತಿತ್ತು. ಪಾಕಿಸ್ತಾನದ ಪಾಲಿನ ನೀರನ್ನು ಭಾರತ ಕಸಿದುಕೊಂಡಿದೆ ಎಂದು ರೋದಿಸಿತ್ತು. 2 ದಿನಗಳ ಹಿಂದಿನವರೆಗೂ ನೀರಿಲ್ಲ ಎಂದು ಗೋಗರೆಯುತ್ತಿದ್ದ ಪಾಕಿಸ್ತಾನದಲ್ಲಿ ಈಗ ಪ್ರವಾಹದ ಆತಂಕ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಡೋಡಾ-ಕಿಶ್ತ್ವಾರ್ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೆನಾಬ್ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿರುವ ಬಾಗ್ಲಿಹಾರ್ ಅಣೆಕಟ್ಟಿನ (Baglihar Dam) 3 ಗೇಟ್ಗಳನ್ನು ಸೋಮವಾರ ಭಾರತ ತೆರೆದಿದೆ.
ಚೆನಾಬ್ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಡ್ಯಾಂ ಗೇಟ್ ತೆರೆದರೆ ಪಾಕಿಸ್ತಾನಕ್ಕೆ ಯಥೇಚ್ಛವಾಗಿ ನೀರು ನುಗ್ಗುತ್ತದೆ. ಹೀಗಾಗಿ, ಪಾಕಿಸ್ತಾನದ ನದಿ ತೀರದ ಗ್ರಾಮಗಳ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಇಸ್ಲಾಮಾಬಾದ್ ಸಂಪೂರ್ಣವಾಗಿ ನಿಲ್ಲಿಸುವವರೆಗೆ ಸಿಂಧೂ ಜಲ ಒಪ್ಪಂದದ ಬಗ್ಗೆ ಯಾವುದೇ ಮೃದು ಧೋರಣೆ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದ ಬೆನ್ನಲ್ಲೇ ಈ ನೀರು ಬಿಡುಗಡೆ ನಡೆದಿದೆ.
1960ರ ಸಿಂಧು ನದಿ ನೀರು ಒಪ್ಪಂದದ ಪ್ರಕಾರ, ಚೆನಾಬ್ ನದಿಯ ನೀರು ಪಾಕಿಸ್ತಾನಕ್ಕೆ ಹರಿಯುತ್ತದೆ. ಆದರೆ ಭಾರತವು ಇಲ್ಲಿ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸುವ ಹಕ್ಕನ್ನು ಹೊಂದಿದೆ. ಬಾಗ್ಲಿಹಾರ್ ಅಣೆಕಟ್ಟಿನಿಂದ ನೀರು ಬಿಟ್ಟಿರುವುದರಿಂದ ಪಾಕಿಸ್ತಾನದ ಕಡೆಗೆ ನೀರಿನ ಹರಿವು ಹೆಚ್ಚಾಗಲಿದೆ.
(Video Source: IANS)
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
