ನೇಪಾಳ ಗಡಿಯಲ್ಲಿ ಭಾರತದೊಳಗೆ ನುಸುಳುವ ಯತ್ನ ವಿಫಲ: ಅಮೆರಿಕದ ಪ್ರಜೆ, ಖಲಿಸ್ತಾನಿ ಉಗ್ರ ಸೇರಿ ಐವರ ಬಂಧನ – Kannada News | India Nepal Border: American, Khalistani Militant Among Five Arrested in Infiltration Bid

ನವದೆಹಲಿ, ಜುಲೈ 24: ಉತ್ತರ ಪ್ರದೇಶದ ಭಾರತ-ನೇಪಾಳ ಗಡಿಯಲ್ಲಿ ಭದ್ರತಾ ಪಡೆಗಳು ಭಾರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಭಾರತ ಪ್ರವೇಶಿಸಲು ಯತ್ನಿಸುತ್ತಿದ್ದ ಅಮೆರಿಕದ ಪ್ರಜೆ ಹಾಗೂ ಖಲಿಸ್ತಾನ್(Khalistan) ಪರ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ವಾಂಟೆಡ್ ಉಗ್ರ ಸೇರಿದಂತೆ ಐವರನ್ನು ಬಂಧಿಸಿವೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ರುಪೈದಿಹಾ ಗಡಿ ಪೋಸ್ಟ್ ಬಳಿ ಸಶಸ್ತ್ರ ಸೀಮಾ ಬಲ್ (SSB) ಹಾಗೂ ಯುಪಿ ಪೊಲೀಸರು ಜಂಟಿಯಾಗಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಸಿಕ್ಕಿಬಿದ್ದ ಪ್ರಮುಖ ಆರೋಪಿಗಳು ಯಾರು?
ವಿಕ್ರಮ್‌ಜಿತ್ ಸಿಂಗ್: ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಸಕ್ರಿಯ ಸದಸ್ಯ. 2023 ರಲ್ಲಿ ಪಂಜಾಬ್‌ನ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ ಮುಖ್ಯ ವಾಂಟೆಡ್ ಅಪರಾಧಿಯಾಗಿದ್ದ.

ಮನ್ವೀರ್ ಸಿಂಗ್ ಧಿಲ್ಲೋನ್: ಪಂಜಾಬ್‌ನ ಮೋಗಾ ಜಿಲ್ಲೆಯ ಮೂಲದ ಅಮೆರಿಕನ್ ಪ್ರಜೆ. ಕಾನೂನು ಜಾರಿ ಸಂಸ್ಥೆಗಳ ಕಣ್ಣು ತಪ್ಪಿಸಲು ವೀಸಾ ಇಲ್ಲದೇ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ.

ನೆರವು ನೀಡಿದ್ದ ಮೂವರ ಬಂಧನ

ಇಬ್ಬರು ಅಕ್ರಮವಾಗಿ ಗಡಿ ದಾಟಲು ವಾಹನ ಹಾಗೂ ಮಾರ್ಗದರ್ಶನ ನೀಡಿದ ಸ್ಥಳೀಯರಾದ ಸುರೇಶ್ ಕುಮಾರ್ ಪಾಠಕ್, ದಿಲೀಪ್ ಉಪಾಧ್ಯಾಯ ಹಾಗೂ ಚಾಲಕ ರಾಹುಲ್ ಕುಮಾರ್ ಅವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ.

ಮತ್ತಷ್ಟು ಓದಿ: ಜಮ್ಮು-ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಉಗ್ರರ ಗುಂಡಿನ ದಾಳಿ; ಪೋಲೀಸ್ ಕಾನ್​ಸ್ಟೆಬಲ್ ಹುತಾತ್ಮ

ತನಿಖೆಯಲ್ಲಿ ಬೆಳಕಿಗೆ ಬಂದ ಅಂಶಗಳು
ಬಹ್ರೈಚ್ ಪೊಲೀಸ್ ವರಿಷ್ಠಾಧಿಕಾರಿ (SP) ವಿಶ್ವಜೀತ್ ಶ್ರೀವಾಸ್ತವ ಮಾಹಿತಿ ನೀಡಿದ್ದು, ಯಾವುದೇ ಮಾನ್ಯ ಪ್ರಮಾಣಪತ್ರ ಹಾಗೂ ದಾಖಲೆಗಳಿಲ್ಲದೆ ಗಡಿ ದಾಟುತ್ತಿದ್ದ ಇಬ್ಬರು ಮುಖ್ಯ ಆರೋಪಿಗಳು ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇಬ್ಬರ ಮೇಲೆಯೂ ಪಂಜಾಬ್‌ನಲ್ಲಿ ಪ್ರತ್ಯೇಕ ಅಪರಾಧ ಪ್ರಕರಣಗಳಿದ್ದು, ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ರುಪೈದಿಹಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

‘ವಾರಿಸ್ ಪಂಜಾಬ್ ದೇ’ ಹಿನ್ನೆಲೆ
‘ವಾರಿಸ್ ಪಂಜಾಬ್ ದೇ’ ಸಂಸ್ಥೆಯನ್ನು 2021 ರಲ್ಲಿ ನಟ-ಕಾರ್ಯಕರ್ತ ದಿವಂಗತ ದೀಪ್ ಸಿಧು ಸ್ಥಾಪಿಸಿದ್ದರು. ತದನಂತರ ಈ ಸಂಘಟನೆಯು ಪಂಜಾಬ್‌ನಲ್ಲಿ ಧಾರ್ಮಿಕ-ರಾಜಕೀಯ ಪ್ರಚೋದನಕಾರಿ ಚಟುವಟಿಕೆಗಳು ಹಾಗೂ ಅಶಾಂತಿ ಸೃಷ್ಟಿಸುವ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಗಡಿಯಲ್ಲಿ ಜೋರ್ಡಾನ್ ಬ್ರೌನ್ ಎಂಬ ಕ್ಯಾಲಿಫೋರ್ನಿಯಾ ಮೂಲದ ಮತ್ತೊಬ್ಬ ಅಮೆರಿಕನ್ ಪ್ರಜೆಯನ್ನು ಮಾನ್ಯ ದಾಖಲೆಗಳಿಲ್ಲದೆ ನೇಪಾಳಕ್ಕೆ ಕದ್ದು ಮುಚ್ಚಿ ಹೋಗಲು ಯತ್ನಿಸುತ್ತಿದ್ದಾಗ ಎಸ್‌ಎಸ್‌ಬಿ ಪಡೆಗಳು ಬಂಧಿಸಿದ್ದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *