Headlines

 ನೋಡ್ತಾಯಿರಿ, ಇದು ಟರ್ನಿಂಗ್ ಪಾಯಿಂಟ್… ಹಾರ್ದಿಕ್ ಪಾಂಡ್ಯ ಉವಾಚ! – Kannada News | Hardik Pandya Post Match interview after GT vs MI

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 30ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆಲುವು ದಾಖಲಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 199 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 15.5 ಓವರ್​ಗಳಲ್ಲಿ 100 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 99 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಈ ಗೆಲುವು ಕೇವಲ ಎರಡು ಅಂಕಗಳಲ್ಲ, ಬದಲಿಗೆ ಇಡೀ ತಂಡದ ಆತ್ಮವಿಶ್ವಾಸವನ್ನು ಬದಲಿಸುವ ‘ಟರ್ನಿಂಗ್ ಪಾಯಿಂಟ್’. ನೋಡ್ತಾಯಿರಿ ಈ ಒಂದು ಗೆಲುವು ತಂಡದ ಆತ್ಮವಿಶ್ವಾಸವನ್ನು ಬದಲಿಸಲಿದೆ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಗೆಲುವಿನಲ್ಲಿ ಯುವ ಆಟಗಾರರ ಕೊಡುಗೆ ತುಂಬಾ ಮಹತ್ವದ್ದು, ವಿಶೇಷವಾಗಿ ತಿಲಕ್ ವರ್ಮಾ ಅವರ ಬ್ಯಾಟಿಂಗ್. ತಿಲಕ್ ಅದ್ಭುತ ಪ್ರತಿಭಾವಂತ. 14ನೇ ಓವರ್ ನಂತರ ನಾನು ಅವರಿಗೆ ನೀಡಿದ ಏಕೈಕ ಸಂದೇಶವೆಂದರೆ – ಚೆಂಡನ್ನು ನೋಡು, ಹೊಡಿ ಅಷ್ಟೇ. ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಹಾಗೆಯೇ  ಚೊಚ್ಚಲ ಪಂದ್ಯವಾಡಿದ ಕ್ರಿಶ್ ಮತ್ತು 4 ವಿಕೆಟ್ ಪಡೆದ ಅಶ್ವನಿ ಅವರ ಶಿಸ್ತಿನ ಬೌಲಿಂಗ್ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಹೀಗಾಗಿ ಈ ಗೆಲುವಿನ ಶ್ರೇಯಸ್ಸು ನಮ್ಮ ಯುವ ಆಟಗಾರರಿಗೆ ಸಲ್ಲಬೇಕು ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟರು.

ಇದೇ ವೇಳೆ ಜಸ್​ಪ್ರೀತ್ ಬುಮ್ರಾ ಅವರಿಗೆ ಮೊದಲ ಓವರ್ ನೀಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್, ಬುಮ್ರಾ ವಿಶೇಷ ಬೌಲರ್. ಅವರನ್ನು  ತಂಡಕ್ಕೆ ಯಾವಾಗ ಅಗತ್ಯವಿದೆಯೋ ಅಲ್ಲಿ ಬಳಸಿಕೊಳ್ಳುತ್ತೇವೆ. ಇಂದು ನಮಗೆ ಹೊಸ ಚೆಂಡಿನಲ್ಲಿ ಆರಂಭಿಕ ವಿಕೆಟ್ ಬೇಕಿತ್ತು, ಅದಕ್ಕಾಗಿ ಬುಮ್ರಾ ಅವರನ್ನೇ ಆರಿಸಿದೆವು. ಇದು ನನ್ನ ಒಬ್ಬನ ನಿರ್ಧಾರವಲ್ಲ. ಬದಲಾಗಿ ತಂಡದ ಅಗತ್ಯಕ್ಕೆ ತಕ್ಕಂತೆ ಮಾಡಿದ ಬದಲಾವಣೆ ಎಂದು ಸ್ಪಷ್ಟಪಡಿಸಿದರು.

ಇನ್ನು ಈ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ದಣಿದಂತೆ ಕಂಡು ಬಂದಿದ್ದರು. ಇದಕ್ಕೆ ಮುಖ್ಯ ಕಾರಣ ಅವರು ಪಂದ್ಯದುದ್ದಕ್ಕೂ ತೋರಿದ ರಣ ಉತ್ಸಾಹ.  ಈ ಬಗ್ಗೆ ಮಾತನಾಡಿದ ಪಾಂಡ್ಯ, ನಾನು ಎಷ್ಟು ಜೋರಾಗಿ ಕಿರುಚುತ್ತಿದ್ದೆ ಎಂದರೆ ನನಗೆ ತಲೆ ಸುತ್ತು ಬಂದಂತಾಗಿತ್ತು. ಆದರೆ ತಂಡದಲ್ಲಿ ಅಂತಹ ಎನರ್ಜಿ ತುಂಬುವುದು ಅನಿವಾರ್ಯವಾಗಿತ್ತು ಎಂದರು.

ಮುಂಬೈ ಇಂಡಿಯನ್ಸ್‌ಗೆ ಅಹಮದಾಬಾದ್ ಮೈದಾನದಲ್ಲಿ ಗೆಲುವು ದಾಖಲಿಸುವುದು ಯಾವಾಗಲೂ ಸವಾಲಿನ ಕೆಲಸ. ಅಂತಹ ಕಡೆ ಅಮೋಘ ಕ್ರಿಕೆಟ್ ಆಡಿ ಗೆದ್ದಿರುವುದು ತಂಡದ ಸೀಸನ್ ಅನ್ನು ಬದಲಿಸಲಿದೆ ಎಂಬ ದೃಢ ವಿಶ್ವಾಸವನ್ನು ಇದೇ ವೇಳೆ ಹಾರ್ದಿಕ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ್ ಸೂಪರ್ ಲೀಗ್​ನಿಂದ ಮೂವರು ಐಪಿಎಲ್ ಆಟಗಾರರು ಬ್ಯಾನ್..!

ಒಟ್ಟಾರೆಯಾಗಿ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಮತ್ತೆ ಗೆಲುವಿನ ಹಳಿಗೆ ಮರಳಿದ್ದು, ಇದೇ ರೀತಿಯ ಉತ್ಸಾಹದಲ್ಲಿ ಮುಂಬೈ ಇಂಡಿಯನ್ಸ್ ಮುಂಬರುವ ಪಂದ್ಯಗಳಲ್ಲೂ ಪ್ರದರ್ಶನ ನೀಡಲಿದೆಯಾ ಕಾದು ನೋಡಬೇಕಿದೆ.

Published On – 12:25 pm, Tue, 21 April 26

Source link

Leave a Reply

Your email address will not be published. Required fields are marked *