ಟೀಮ್ ಇಂಡಿಯಾದ ಯುವ ಬ್ಯಾಟರ್ ರಿಂಕು ಸಿಂಗ್ ಅವರು ಇಂದು (ಫೆ.28) ಕೋಲ್ಕತ್ತಾದಲ್ಲಿ ಭಾರತ ತಂಡವನ್ನು ಮತ್ತೆ ಕೂಡಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಅವರು ಟೀಮ್ ಇಂಡಿಯಾಗೆ ಮರಳಲಿದ್ದಾರೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ರಿಂಕು ಸಿಂಗ್ ಅವರ ತಂದೆ ಖಾನ್ಚಂದ್ ಸಿಂಗ್ (54 ವರ್ಷ) ಅವರು ಲಿವರ್ ಕ್ಯಾನ್ಸರ್ನಿಂದಾಗಿ ಫೆಬ್ರವರಿ 27, ಶುಕ್ರವಾರ ಮುಂಜಾನೆ ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹೀಗಾಗಿ ಅವರು ಶುಕ್ರವಾರವೇ ಅಲಿಗಢಕ್ಕೆ ತೆರಳಿ ತಮ್ಮ ತಂದೆಯ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದರು.
ತಂದೆಯ ಅಗಲಿಕೆಯ ನೋವಿನ ನಡುವೆಯೂ ರಿಂಕು ಸಿಂಗ್ ಭಾರತದ ಪರ ಆಡಲು ಮನಸ್ಸು ಮಾಡಿದ್ದಾರೆ. ಅದರಂತೆ ಇಂದು (ಫೆಬ್ರವರಿ 28) ಕೋಲ್ಕತ್ತಾಗೆ ತಲುಪಲಿದ್ದು, ಕೂಡಲೇ ಈಡನ್ ಗಾರ್ಡನ್ಸ್ನಲ್ಲಿ ತಂಡದ ಅಭ್ಯಾಸದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾರ್ಚ್ 1, 2026 ರಂದು ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗಲಿದೆ. ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್ನಲ್ಲಿ ಗೆಲ್ಲುವ ತಂಡವು ಸೆಮಿಫೈನಲ್ಗೇರಲಿದೆ.
ರಿಂಕು ಆಗಮನ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್:
ರಿಂಕು ಸಿಂಗ್ ಅವರ ವೈಯಕ್ತಿಕ ನಷ್ಟದ ಹೊರತಾಗಿಯೂ, ಟೂರ್ನಿಯ ಅಂತಿಮ ಹಂತದಲ್ಲಿ ಅವರ ಫಿನಿಶಿಂಗ್ ಸಾಮರ್ಥ್ಯವು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ. ಅದರಲ್ಲೂ ಭಾರತ ತಂಡವು ಕೊಲ್ಕತ್ತಾದಲ್ಲಿ ಪಂದ್ಯವಾಡುತ್ತಿರುವುದರಿಂದ ರಿಂಕು ಸಿಂಗ್ ಆಗಮನವು ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ.
ಏಕೆಂದರೆ ಐಪಿಎಲ್ನಲ್ಲಿ ಕಳೆದ ಕೆಲ ವರ್ಷಗಳಿಂದ ರಿಂಕು ಸಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಕೊಲ್ಕತ್ತಾ ಪಿಚ್ ರಿಂಕು ಪಾಲಿಗೆ ತವರು ಮೈದಾನ ಇದ್ದಂತೆ.
ಇದೀಗ ನಿರ್ಣಾಯಕ ಪಂದ್ಯಕ್ಕೂ ಮುನ್ನ ಅವರು ಭಾರತ ತಂಡವನ್ನು ಕೂಡಿಕೊಳ್ಳಲು ಮನಸ್ಸು ಮಾಡಿದ್ದಾರೆ. ಅದರಂತೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ರಿಂಕು ಸಿಂಗ್ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ. ಇದಾಗ್ಯೂ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಲಿದ್ದಾರಾ ಎಂಬುದೇ ಈಗ ಕುತೂಹಲ.
ಇದನ್ನೂ ಓದಿ: 12.4, 13.2, 13.5: ಹೀಗಿದೆ ಪಾಕಿಸ್ತಾನ್ ತಂಡದ ಸೆಮಿಫೈನಲ್ ಲೆಕ್ಕಾಚಾರ
ಏಕೆಂದರೆ ಕಳೆದ ಮ್ಯಾಚ್ನಲ್ಲಿ ರಿಂಕು ಸಿಂಗ್ ಸ್ಥಾನದಲ್ಲಿ ಫಿನಿಶರ್ ಆಗಿ ತಿಲಕ್ ವರ್ಮಾ ಕಣಕ್ಕಿಳಿದಿದ್ದರು. ಅಲ್ಲದೆ ಕೇವಲ 16 ಎಸೆತಗಳಲ್ಲಿ 44 ರನ್ ಬಾರಿಸಿದ್ದರು. ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ಗೆ ಅವಕಾಶ ಸಿಗಲಿದೆಯಾ ಎಂಬುದೇ ಪ್ರಶ್ನೆ.
Published On – 9:04 am, Sat, 28 February 26
