ಪಂಚರಾಜ್ಯ ಚುನಾವಣೆ ಫಲಿತಾಂಶ: ಪ್ರಧಾನಿ ಮೋದಿ ಸರಣಿ ಟ್ವೀಟ್ ಮೂಲಕ ಕಾರ್ಯಕರ್ತರು, ಮತದಾರರಿಗೆ ಧನ್ಯವಾದ – Kannada News | PM Narendra Modi series of tweets hailing NDA performance in five states assembly elections

ನವದೆಹಲಿ, ಮೇ 4: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಐದು ರಾಜ್ಯಗಳ ಪೈಕಿ ಎನ್​ಡಿಎ ಮೈತ್ರಿಕೂಟ ಮೂರರಲ್ಲಿ ಅಧಿಕಾರ ಪಡೆಯಲಿದೆ. ಪಶ್ಚಿಮ ಬಂಗಾಳ, ಅಸ್ಸಾಮ್ ಮತ್ತು ಪುದುಚೆರಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್​ಡಿಎ ನಿಚ್ಚಳ ಬಹುಮತ ಪಡೆಯುತ್ತಿದೆ. ಕೇರಳದಲ್ಲೂ 3 ಸ್ಥಾನ ಗೆದ್ದು ತನ್ನ ಇರುವಿಕೆಯನ್ನ ಬಲಪಡಿಸಿಕೊಂಡಿದೆ. ತಮಿಳುನಾಡಿನಲ್ಲಿ ಎನ್​ಡಿಎ ಒಂದಷ್ಟು ಸ್ಥಾನ ಕಳೆದುಕೊಂಡರೂ ಪ್ರಬಲ ಉಪಸ್ಥಿತಿ ಹೊಂದಿದೆ. ಬಹುಮತ ಪಡೆದಿರುವ ಮೂರು ರಾಜ್ಯಗಳ ಪೈಕಿ ಪಶ್ಚಿಮ ಬಂಗಾಳದ ಗೆಲುವು ಬಿಜೆಪಿಗೆ ಐತಿಹಾಸಿಕವಾದುದು. ಇಲ್ಲಿ ಅದರ ಚೊಚ್ಚಲ ಗೆಲುವು. ಅಸ್ಸಾಮ್ ಮತ್ತು ಪುದುಚೇರಿಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಯಶಸ್ವಿಯಾಗಿದೆ. ಒಟ್ಟಾರೆ ಈ ಪಂಚರಾಜ್ಯ ಚುನಾವಣೆಗಳು ಬಿಜೆಪಿಗೆ ಸಕಾರಾತ್ಮಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹಜವಾಗಿಯೇ ಎನ್​ಡಿಎ ಸಾಧನೆಯನ್ನು ಪ್ರಶಂಸಿಸಿ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ.

ಬಂಗಾಳದಲ್ಲಿ ಅರಳಿದ ಕಮಲ

‘ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಅವಿಸ್ಮರಣೀಯವಾಗಿ ಉಳಿಯಲಿದೆ. ಜನರ ಅಧಿಕಾರ ಉಳಿದಿದೆ. ಬಿಜೆಪಿಯ ಉತ್ತಮ ಆಡಳಿತದ ರಾಜಕಾರಣಕ್ಕೆ ಗೆಲುವಾಗಿದೆ. ಬಂಗಾಳದ ಪ್ರತಿಯೊಬ್ಬ ವ್ಯಕ್ತಿಗೂ ತಲೆಬಾಗುತ್ತೇನೆ. ಬಿಜೆಪಿಗೆ ಅದ್ಬುತ ಜನಾದೇಶ ಸಿಕ್ಕಿದೆ. ಜನರ ಆಶೋತ್ತರ ಈಡೇರಿಸಲು ಸಾಧ್ಯವಾದ ಎಲ್ಲವನ್ನೂ ನಮ್ಮ ಪಕ್ಷ ಮಾಡುತ್ತದೆ’ ಎಂದು ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್​ವೊಂದರಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Assam Assembly Election Results: ಅಸ್ಸಾಂನಲ್ಲಿ ಮತ್ತೆ ಅಧಿಕಾರಕ್ಕೇರಲಿರುವ ಬಿಜೆಪಿ ನೀಡಿದ ಭರವಸೆಗಳೇನು?

ತಮಿಳುನಾಡಿಲ್ಲಿ ಮತದಾರರಿಗೆ ಮೋದಿ ಧನ್ಯವಾದ

ತಮಿಳುನಾಡಿನಲ್ಲಿ ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆದರೂ ನರೇಂದ್ರ ಮೋದಿ ಅವರು ಎನ್​​ಡಿಎಗೆ ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಅತಿಹೆಚ್ಚು ಸ್ಥಾನ ಪಡೆದ ಟಿವಿಕೆ ಪಕ್ಷಕ್ಕೆ ಧನ್ಯವಾದಹೇಳಿದ್ದಾರೆ. ತಮಿಳುನಾಡನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಪ್ರಯತ್ನ ನಿಲ್ಲಿಸದು ಎಂದೂ ಅವರು ಭರವಸೆ ನೀಡಿದ್ದಾರೆ.

ಪುದುಚೇರಿಯಲ್ಲಿ ಎನ್​ಡಿಎ ಕಾರ್ಯಕರ್ತರ ಪರಿಶ್ರಮಕ್ಕೆ ಮೋದಿ ಮೆಚ್ಚುಗೆ

ತಮಿಳುನಾಡಿಗೆ ಅಂಟಿಕೊಂಡಿರುವ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಎನ್​ಡಿಎ ಅಧಿಕಾರ ಉಳಿಸಿಕೊಂಡಿದೆ. ಮೋದಿ ಈ ಸಂಬಂಧ ಟ್ವೀಟ್ ಮಾಡಿದ್ದು, ಪುದುಚೇರಿಯಲ್ಲಿ ಎನ್​ಡಿಎ ಕಾರ್ಯಕರ್ತರ ಪರಿಶ್ರಮವನ್ನು ಮೆಚ್ಚಿಕೊಂಡಿದ್ದಾರೆ.

ಕೇರಳದಲ್ಲಿ ಎನ್​ಡಿಎ ಬೆಂಬಲಿಸಿದ ಮತದಾರರಿಗೆ ಮೋದಿ ಧನ್ಯವಾದ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನ ಗೆಲ್ಲಲು ಯಶಸ್ವಿಯಾಗಿದೆ. ಕಳೆದ ಬಾರಿ ಶೂನ್ಯ ಇತ್ತು. ಈ ಬಾರಿ ಎನ್​ಡಿಎಗೆ ಮತ ಚಲಾಯಿಸಿ ಮತದಾರರಿಗೆ ಮೋದಿ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಬಹುಮತ ಪಡೆದ ಯುಡಿಎಫ್ ಅನ್ನೂ ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಜನನಾಯಗನ್ ‘ಸೇಡು’?; ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್?; ದಳಪತಿ ಮುಂದಿರುವ ಆಯ್ಕೆಗಳೇನು?

ಅಸ್ಸಾಮ್​ನಲ್ಲಿ ಬಿಜೆಪಿ ಗೆಲುವು; ಕಾರ್ಯಕರ್ತರಿಗೆ ಮೋದಿ ಧನ್ಯವಾದ

ಅಸ್ಸಾಮ್​ನಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ನಿಚ್ಚಳ ಬಹುಮತ ಪಡೆದಿದೆ. ಕಳೆದ ಬಾರಿಗಿಂತಲೂ ಹೆಚ್ಚಿನ ಸ್ಥಾನ ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎನ್​ಡಿಎ ಸಾಧನೆಯನ್ನು ಶ್ಲಾಘಿಸಿದ್ದಾರೆ. ಉತ್ತಮ ಆಡಳಿತವು ಜನರ ಬೆಂಬಲ ಪಡೆದಿದೆ ಎಂಬುದನ್ನು ಎತ್ತಿ ತೋರಿಸಿ ಟ್ವೀಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಪಂಚರಾಜ್ಯ ಚುನಾವಣೆಗಳು ಬಿಜೆಪಿ ಪಾಲಿಗೆ ಸಕಾರಾತ್ಮಕವಾಗಿವೆ. ಎಡಪಕ್ಷಗಳ ಕೈಯಲ್ಲಿದ್ದ ಇದ್ದ ಒಂದೇ ಒಂದು ರಾಜ್ಯವು ಕೈತಪ್ಪಿದೆ. ಕಾಂಗ್ರೆಸ್ ಅಧಿಕಾರದ ರಾಜ್ಯಗಳ ಸಂಖ್ಯೆಯಲ್ಲಿ ಒಂದು ಹೆಚ್ಚಿದೆ. ಬಿಜೆಪಿಯದ್ದೂ ಒಂದು ಹೆಚ್ಚಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *