ಬೆಂಗಳೂರು, (ಜುಲೈ 05): ಕರ್ನಾಟಕದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಆವರಿಸಿದ್ದು, ಇದರ ಮುಂದುವರೆದ ಭಾಗವಾಗಿ ಇದೀಗ ಸರ್ಕಾರಿ ಶಾಲೆಗಳಲ್ಲಿ ಉತ್ತರ ಪ್ರತಿಕೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ ಹಾಗೂ ವೇಗಗೊಳಿಸಲು ಎಐ (Artificial Intelligence (AI)) ತಂತ್ರಜ್ಞಾನ ಬಳಕೆ ಮಾಡಲು ಶಿಕ್ಷಣ ಇಲಾಖೆ (Karnataka Education Department) ಸಿದ್ದತೆ ನಡೆಸಿದೆ. ಹೌದು… ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕ್ಷೇತ್ರ ಮತ್ತೊಂದು ಡಿಜಿಟಲ್ ಹೆಜ್ಜೆ ಇಡುತ್ತಿದೆ. ಸ್ಮಾರ್ಟ್ ಕ್ಲಾಸ್, ಆನ್ಲೈನ್ ಬೋಧನೆಯ ನಂತರ ಇದೀಗ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನವೂ ಎಐ ಆಧಾರಿತವಾಗಲಿದೆ.
ಪ್ರಾಥಮಿಕ ಹಂತದಲ್ಲಿ 8ರಿಂದ 12ನೇ ತರಗತಿಯ ಪರೀಕ್ಷೆಗಳಲ್ಲಿ ಈ ವ್ಯವಸ್ಥೆ ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದುವರೆಗೆ ಪರೀಕ್ಷೆ ಮುಗಿದ ಬಳಿಕ ಸಾವಿರಾರು ಉತ್ತರ ಪತ್ರಿಕೆಗಳನ್ನು ತಿದ್ದುವುದು, ಅಂಕ ದಾಖಲಿಸುವುದು ಹಾಗೂ ದತ್ತಾಂಶ ಸಂಗ್ರಹಿಸುವ ಕೆಲಸ ಶಿಕ್ಷಕರಿಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಈ ಕಾರಣದಿಂದ ತರಗತಿ ಬೋಧನೆಯ ಮೇಲೂ ಪರಿಣಾಮ ಬೀಳುತ್ತಿತ್ತು. ಇದೀಗ ಆ ಹೊರೆ ಕಡಿಮೆ ಮಾಡಲು ಎಐ ತಂತ್ರಜ್ಞಾನ ನೆರವಾಗಲಿದೆ ಅಂತಿದ್ದಾರೆ ಆಯುಕ್ತರು.
ಇದನ್ನೂ ಓದಿ: SSLC ತೃತೀಯ ಭಾಷೆಗೆ ಅಂಕದ ಬದಲು ಗ್ರೇಡ್: ಶೈಕ್ಷಣಿಕ ವರ್ಷದ ಆರಂಭದಲ್ಲೇ ಗೊಂದಲ ತಪ್ಪಿಸಲು ಸಿದ್ಧತೆ
ಎಐಯಿಂದ ಉತ್ತರ ಪತ್ರಿಕೆ ಕರೆಕ್ಷನ್ ಹೇಗೆ?
ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಮೊಬೈಲ್ ಅಥವಾ ಸ್ಕ್ಯಾನರ್ ಮೂಲಕ ಡಿಜಿಟಲ್ ರೂಪದಲ್ಲಿ ಅಪ್ಲೋಡ್ ಮಾಡಲಿದ್ದಾರೆ. ನಂತರ ಎಐ ಉತ್ತರಗಳನ್ನು ವಿಶ್ಲೇಷಿಸಿ ಅಂಕಗಳನ್ನು ಸೂಚಿಸುತ್ತದೆ. ಜೊತೆಗೆ ವಿದ್ಯಾರ್ಥಿಗಳ ದತ್ತಾಂಶವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸುತ್ತದೆ. ಅಂತಿಮವಾಗಿ ಅಂಕಗಳ ನಿಖರತೆಯನ್ನು ಶಿಕ್ಷಕರೇ ಪರಿಶೀಲಿಸಿ ದೃಢೀಕರಿಸಲಿದ್ದಾರೆ. ಈ AI ವ್ಯವಸ್ಥೆ ಒಂದೇ ಬಾರಿಗೆ ಸುಮಾರು 15 ಲಕ್ಷ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯ ಹೊಂದಿದ್ದು. ಈ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಜಾರಿಗೊಳಿಸುವ ಗುರಿಯನ್ನ ಶಿಕ್ಷಣ ಇಲಾಖೆ ಹೊಂದಿದೆ.
ಒಂದೇ ಬಾರಿಗೆ 15 ಲಕ್ಷ ಉತ್ತರ ಪತ್ರಿಕ್ರ ಮೌಲ್ಯಮಾಪನ!
ಪ್ರತಿ ಪರೀಕ್ಷೆ ಬಳಿಕ ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಡೇಟಾ ಸಂಗ್ರಹಕ್ಕೆ ಶಿಕ್ಷಕರಿಗೆ ಸಾಕಷ್ಟು ಸಮಯ ಬೇಕಾಗುತ್ತಿದ್ದು, ಇದರಿಂದಾಗಿ ಈ ಸಮಯದಲ್ಲಿ ತರಗತಿಗಳ ಪಾಠ-ಪ್ರವಚನಕ್ಕೆ ಅಡೆತಡೆ ಎದುರಾಗದಂತೆ ಶೀಘ್ರ ಮೌಲ್ಯಮಾಪನ ನಡೆಸಲು ಎಐ ತಂತ್ರಜ್ಞಾನ ನೆರವಾಗಲಿದೆ. ಐಐಟಿ ಧಾರವಾಡದ ಮೂಲಕ ಮೌಲ್ಯಮಾಪನಕ್ಕೆ ಎಐ ಆಧಾರಿತ ತಂತ್ರಜ್ಞಾನ ಸಿದ್ಧಪಡಿಸುತ್ತಿರುವ ಶಿಕ್ಷಣ ಇಲಾಖೆ, ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಜಾರಿಗೆ ತರಲು ತಯಾರಿ ನಡೆಸಿದೆ.ಎಐ ತಂತ್ರಜ್ಞಾನದ ಮೂಲಕ ಒಂದೇ ಬಾರಿಗೆ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯವಿದೆ.
ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕೆಲಸಕ್ಕೂ ಎಐ ನೆರವಾಗಲಿದ್ದು. ಇದರಿಂದ ಮೌಲ್ಯಮಾಪನದಲ್ಲಿ ಪಾರದರ್ಶಕತೆ, ವೇಗ ಹಾಗೂ ನಿಖರತೆ ಹೆಚ್ಚುವ ನಿರೀಕ್ಷೆ ಶಿಕ್ಷಣ ಇಲಾಖೆಯದ್ದಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು. ಆದರೆ ಎಐ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಉತ್ತರ ಪತ್ರಿಕೆಗಳಿಗೆ ಎಐ ನೀಡುವ ಅಂಕಗಳನ್ನು ಶಿಕ್ಷಕರೇ ಪರಿಶೀಲಿಸಿ ಅಂತಿಮಗೊಳಿಸಲಿದ್ದಾರೆ. ಹೀಗಾಗಿ ತಂತ್ರಜ್ಞಾನ ಮತ್ತು ಶಿಕ್ಷಕರ ಅನುಭವ ಎರಡನ್ನೂ ಸಂಯೋಜಿಸಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಮತ್ತಷ್ಟು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ನಡೆಸುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದೆ.
