ಇತ್ತೀಚೆಗಷ್ಟೆ ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ಅವರಿಗೆ ಮುಂಬೈನ ಧೀರೂಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಪವನ್ ಕಲ್ಯಾಣ್ ಅವರಿಗೆ ಭುಜದ ಹಾಗೂ ತೋಳಿನ ಭಾಗದ ಮಾಂಸಖಂಡಗಳಲ್ಲಿ ಗಾಯಗಳು ಹಾಗೂ ಹರಿತ ಉಂಟಾಗಿತ್ತು. ತೋಳು ಹಾಗೂ ಭುಜದಲ್ಲಿ ಪದೇ ಪದೇ ನೋವುಗಳು ಕಾಣಿಸಿಕೊಳ್ಳುತ್ತಿದ್ದ ಕಾರಣ ಕೊನೆಗೆ ಇತ್ತೀಚೆಗಷ್ಟೆ ನಟ ಪವನ್ ಕಲ್ಯಾಣ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಇದೀಗ ಅವರದ್ದೇ ಕುಟುಂಬದ ಸ್ಟಾರ್ ನಟ ರಾಮ್ ಚರಣ್ ಸಹ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ನಟ ರಾಮ್ ಚರಣ್ ಸಹ ‘ಪೆದ್ದಿ’ ಸಿನಿಮಾದ ಪ್ರಚಾರದ ಸಮಯದಲ್ಲಿ ಕೈಗೆ ಪ್ಲಾಸ್ಟರ್ ಹಾಕಿಕೊಂಡು ಓಡಾಡುತ್ತಿದ್ದಿದ್ದನ್ನು ಅಭಿಮಾನಿಗಳು ಗಮನಿಸಿದ್ದರು. ‘ಪೆದ್ದಿ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ಬಿದ್ದು ರಾಮ್ ಚರಣ್ ಅವರಿಗೆ ಮಣಿಕಟ್ಟಿಗೆ ಗಾಯವಾಗಿತ್ತು. ಆದರೆ ಪ್ರಚಾರಕ್ಕೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ರಾಮ್ ಚರಣ್ ವೈದ್ಯರ ಸಲಹೆಯಂತೆ ಕೇವಲ ಪ್ಲಾಸ್ಟರ್ ಧರಿಸಿಕೊಂಡು ಓಡಾಡುತ್ತಿದ್ದರು. ಆದರೆ ದಿನೇ-ದಿನೇ ನೋವು ಉಲ್ಬಣಗೊಳ್ಳುತ್ತಿರುವ ಕಾರಣ, ಹಾಗೂ ಕಸರತ್ತು ಮಾಡುವ ವೇಳೆ ಮಣಿಕಟ್ಟಿನ ಮೇಲೆ ಹೆಚ್ಚು ಒತ್ತಡ ಬಿದ್ದು ನೋವು ತೀವ್ರವಾದ ಕಾರಣಕ್ಕೆ ಇದೀಗ ಭುಜದ ಶಸ್ತ್ರ ಚಿಕಿತ್ಸೆಗೆ ರಾಮ್ ಚರಣ್ ಒಳಗಾಗುತ್ತಿದ್ದಾರೆ.
‘ಪೆದ್ದಿ’ ಸಿನಿಮಾದ ಚಿತ್ರೀಕರಣದ ವೇಳೆ ಆಕ್ಷನ್ ದೃಶ್ಯದ ಶೂಟಿಂಗ್ ವೇಳೆ ರಾಮ್ ಚರಣ್ ಅವರ ಮಣಿಕಟ್ಟಿಗೆ ಗಾಯವಾಗಿತ್ತು. ಆಗಲೇ ಅವರು ಕೆಲ ಸಮಯ ಚಿತ್ರೀಕರಣದಿಂದ ವಿರಾಮ ಪಡೆದು ಚಿಕಿತ್ಸೆ ಪಡೆದಿದ್ದರು. ಬಳಿಕ ಮಣಿಕಟ್ಟಿಗೆ ಆರ್ಥೋ ಪ್ಲಾಸ್ಟರ್ ಅನ್ನು ಧರಿಸಿ ಓಡಾಡುತ್ತಿದ್ದರು. ಆದರೆ ಇತ್ತೀಚೆಗಿನ ಸ್ಕ್ಯಾನಿಂಗ್ ಗಮನಿಸಿದ ವೈದ್ಯರು, ಮಣಿಕಟ್ಟಿಗೆ ಮೈನರ್ ಶಸ್ತ್ರಚಿಕಿತ್ಸೆ ಮಾಡಿಸುವ ಸಲಹೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ರಾಮ್ ಚರಣ್ ಎದುರು ಹೊಸ ಬೇಡಿಕೆ ಇಟ್ಟ ಅಭಿಮಾನಿಗಳು
ಇದೇ ಕಾರಣಕ್ಕೆ ರಾಮ್ ಚರಣ್ ಅವರು, ಮೂಳೆ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಕೊಯಮತ್ತೂರಿನ ಪ್ರತಿಷ್ಠಿತ ಗಂಗಾ ಆಸ್ಪತ್ರೆಯಲ್ಲಿ ಶೀಘ್ರವೇ ಮಣಿಕಟ್ಟಿಗೆ ಶಸ್ತ್ರಚಿಕಿತ್ಸೆ ಒಳಗಾಗಲಿದ್ದಾರೆ. ಈ ಸಂದರ್ಭದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಸುರೇಕಾ, ಉಪಾಸನಾ ಮತ್ತು ಕುಟುಂಬದ ಇತ್ತೀಚಿನ ಇತರ ಸದಸ್ಯರು ಶಸ್ತ್ರಚಿಕಿತ್ಸೆಯ ಪೂರ್ತಿ ಅವಧಿಯಲ್ಲಿ ಅವರೊಂದಿಗೆ ಇರಲು ಮತ್ತು ಮಾನಸಿಕ ಧೈರ್ಯ ತುಂಬಲು ಕೊಯಮತ್ತೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಪ್ರಸಿದ್ಧ ಮೂಳೆ ತಜ್ಞ ಡಾ ರಾಜಶೇಖರ್ ಅವರ ನೇತೃತ್ವದಲ್ಲಿ, ಅತ್ಯಂತ ನುರಿತ ತಜ್ಞ ವೈದ್ಯರ ತಂಡವು ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲಿದೆ.
ರಾಮ್ ಚರಣ್ ಅವರು ‘ಪೆದ್ದಿ’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಇದೀಗ ಅವರ ಮುಂದಿನ ಸಿನಿಮಾ ಸುಕುಮಾರ್ ಅವರೊಟ್ಟಿಗೆ ಇರಲಿದೆ. ಸುಕುಮಾರ್ ಈಗಾಗಲೇ ಚಿತ್ರಕತೆ ರೆಡಿ ಮಾಡಿಟ್ಟುಕೊಂಡಿದ್ದು ಶೀಘ್ರವೇ ಪ್ರೀ ಪ್ರೊಡಕ್ಷನ್ ಶುರು ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
