ಕೊಲ್ಕತ್ತಾ, ಮೇ 7: ಪಶ್ಚಿಮ ಬಂಗಾಳದ (West Bengal) ರಾಜ್ಯಪಾಲ ಆರ್.ಎನ್. ರವಿ ಇಂದು ಪಶ್ಚಿಮ ಬಂಗಾಳದ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿದೆ. ಆದರೂ ಬಿಜೆಪಿ ಮತ ಕಳ್ಳತನ ಮಾಡಿದೆ ಎಂದು ಆರೋಪ ಹೊರಿಸಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದರು. ಈಗಾಗಲೇ ಮಮತಾ ಬ್ಯಾನರ್ಜಿ ಅವರ ಅಧಿಕಾರಾವಧಿ ಮುಗಿದಿರುವುದರಿಂದ ಕಾನೂನು ಸಲಹೆ ಪಡೆದ ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ ಬಂಗಾಳದ ಸಂಪುಟವನ್ನು ವಿಸರ್ಜಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾಗಿ, ಬಿಜೆಪಿ ಸರ್ಕಾರ ರಚನೆಯಾಗಲು ಅವಕಾಶ ಸಿಕ್ಕಂತಾಗಿದೆ. ಮೇ 9ರಂದು ಬಂಗಾಳದಲ್ಲಿ ಬಿಜೆಪಿಯ ಮೊದಲ ಸರ್ಕಾರ ರಚನೆಯಾಗಲಿದೆ ಎನ್ನಲಾಗುತ್ತಿದೆ. ಆದರೆ, ಇನ್ನೂ ಬಿಜೆಪಿ ಸರ್ಕಾರ ರಚನೆಗೆ ರಾಜ್ಯಪಾಲರಿಗೆ ಹಕ್ಕು ಮಂಡನೆ ಮಾಡಿಲ್ಲ.
ಭಾರತದ ಸಂವಿಧಾನದ 174ನೇ ವಿಧಿಯ ಷರತ್ತು (2)ರ ಉಪ-ಷರತ್ತು (ಬಿ) ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಬಂಗಾಳದ ರಾಜ್ಯಪಾಲರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸಲು ಆದೇಶಿಸಿದ್ದಾರೆ. ಈ ಘೋಷಣೆಯನ್ನು ಬುಧವಾರ, ಮೇ 6, 2026 ರಂದು ಪ್ರಕಟವಾದ ವಿಶೇಷ ಗೆಜೆಟ್ ಅಧಿಸೂಚನೆಯಲ್ಲಿ (ಅಧಿಸೂಚನೆ ಸಂಖ್ಯೆ: 275-PA/1L-03/2026) ಮಾಡಲಾಗಿದೆ. ಸರ್ಕಾರದ ಸಂಸದೀಯ ವ್ಯವಹಾರಗಳ ಇಲಾಖೆ ಹೊರಡಿಸಿದ ಈ ನಿರ್ದೇಶನದ ಪ್ರಕಾರ, ಪ್ರಸ್ತುತ ವಿಧಾನಸಭೆಯನ್ನು ಮೇ 7ರಿಂದ ಜಾರಿಗೆ ಬರುವಂತೆ ಔಪಚಾರಿಕವಾಗಿ ವಿಸರ್ಜಿಸಲಾಗಿದೆ.
Governor of West Bengal, RN Ravi, has issued an Order dissolving the West Bengal Legislative Assembly with effect from 07 May 2026. pic.twitter.com/IuEAylWege
— ANI (@ANI) May 7, 2026
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ಕೊಡದಿದ್ದರೆ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ?
ರಾಜ್ಯಪಾಲ ಆರ್.ಎನ್. ರವಿ ಅವರು ಸಹಿ ಮಾಡಿದ ಈ ಆದೇಶವನ್ನು ಸಾರ್ವಜನಿಕ ಹಿತಾಸಕ್ತಿಗಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ದುಶ್ಯಂತ ನರಿಯಾಲ (ಐಎಎಸ್) ಪ್ರಕಟಿಸಿದ್ದಾರೆ. ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವ ಮೊದಲು ಚುನಾವಣೆಯ ನಂತರ ಹಳೆಯ ವಿಧಾನಸಭೆಯನ್ನು ವಿಸರ್ಜಿಸುವುದು ಸಾಮಾನ್ಯವಾಗಿ ಸಾಂವಿಧಾನಿಕ ಪದ್ಧತಿಯಾಗಿದೆ. ಈ ಆದೇಶವು 17 ನೇ ವಿಧಾನಸಭೆಯ ಅವಧಿಯನ್ನು ಕೊನೆಗೊಳಿಸಲಿದ್ದು, ಹೊಸದಾಗಿ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ 18ನೇ ವಿಧಾನಸಭೆಯ ರಚನೆಗೆ ದಾರಿ ಮಾಡಿಕೊಡುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:47 pm, Thu, 7 May 26
