ವಿಮಲ್ ಇಲಾಯಚಿ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಬಾಲಿವುಡ್ ನಟರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್ ನೋಟಿಸ್ ನೀಡಿದೆ. ಈ ಪಟ್ಟಿಯಲ್ಲಿ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಇದ್ದಾರೆ. ಈ ಜಾಹೀರಾತುಗಳು ನಿಷೇಧಿತ ವಿಮಲ್ ಪಾನ್ ಮಸಾಲಾದ ಪರೋಕ್ಷ ಪ್ರಚಾರಕ್ಕೆ ನೆರವಾಗುತ್ತಿವೆ ಎಂಬುದು ಎಫ್ಡಿಎ ಆರೋಪವಾಗಿದೆ.
ಈ ವಿವಾದದ ಬೆನ್ನಲ್ಲೇ ನಟರ ಹಳೆಯ ಹೇಳಿಕೆಗಳು ಮತ್ತೆ ಸದ್ದು ಮಾಡುತ್ತಿವೆ. ಶಾರುಖ್ ಖಾನ್ ಹಿಂದೆ ಈ ಬಗ್ಗೆ ಸ್ಪಷ್ಟ ಉತ್ತರ ನೀಡಿದ್ದರು. ‘ಸರ್ಕಾರಕ್ಕೆ ಆದಾಯ ಕೊಡುವ ಉತ್ಪನ್ನಗಳನ್ನು ನಿಷೇಧಿಸುವುದಿಲ್ಲ. ಆದರೆ ನಟರ ಆದಾಯಕ್ಕೆ ಮಾತ್ರ ತಡೆ ನೀಡಲಾಗುತ್ತದೆ’ ಎಂಬುದು ಅವರ ವಾದವಾಗಿತ್ತು. ‘ಹಾನಿಕಾರಕ ಉತ್ಪನ್ನಗಳನ್ನು ದೇಶದಲ್ಲೇ ಪೂರ್ಣವಾಗಿ ನಿಷೇಧಿಸಿ’ ಎಂದು ಅವರು ಸವಾಲು ಹಾಕಿದ್ದರು.
ಅಜಯ್ ದೇವಗನ್ ಕೂಡ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ತಾವು ಕೇವಲ ಇಲಾಯಿಚಿ ಜಾಹೀರಾತಿನಲ್ಲಿ ಮಾತ್ರ ಅಭಿನಯಿಸಿರುವುದಾಗಿ ಹೇಳಿದ್ದರು. ಉತ್ಪನ್ನ ಹಾನಿಕಾರಕವಾಗಿದ್ದರೆ ಅದರ ತಯಾರಿಕೆಯನ್ನೇ ಬಂದ್ ಮಾಡಬೇಕು ಎಂದಿದ್ದರು. ಜನರ ವೈಯಕ್ತಿಕ ಆಯ್ಕೆ ಕೂಡ ಇಲ್ಲಿ ಮುಖ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
ಟೈಗರ್ ಶ್ರಾಫ್ ಈ ವಿವಾದದ ಬಗ್ಗೆ ಇನ್ನು ಮಾತನಾಡಿಲ್ಲ. ಈ ಹಿಂದೆ ಅಕ್ಷಯ್ ಕುಮಾರ್ ಈ ಬ್ರ್ಯಾಂಡ್ನಿಂದ ಹೊರಬಂದಿದ್ದರು. ಸಾರ್ವಜನಿಕರ ತೀವ್ರ ಆಕ್ರೋಶದ ನಂತರ ಅಕ್ಷಯ್ ಕ್ಷಮೆ ಕೇಳಿದ್ದರು. ಜಾಹೀರಾತಿನಿಂದ ಬಂದ ಹಣವನ್ನು ಸತ್ಕಾರ್ಯಕ್ಕೆ ನೀಡುವುದಾಗಿ ಘೋಷಿಸಿದ್ದರು. ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಇಂತಹ ಬ್ರ್ಯಾಂಡ್ಗಳಿಂದ ದೂರ ಸರಿದಿದ್ದರು.
ಇದನ್ನೂ ಓದಿ: ಗುಟ್ಕಾ ಪ್ರಚಾರ: ಶಾರುಖ್, ಅಜಯ್, ಟೈಗರ್ ಶ್ರಾಫ್ಗೆ ನೊಟೀಸ್
ಸರ್ಕಾರಕ್ಕೆ ಆದಾಯ ತರುವ ಉತ್ಪನ್ನಗಳನ್ನು ನಟರು ಪ್ರಚಾರ ಮಾಡುವುದು ತಪ್ಪೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ. ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳ ಮಾರಾಟ ಬಂದ್ ಆಗದ ಹೊರತು ಈ ವಿವಾದ ಮುಗಿಯುವುದಿಲ್ಲ. ಈಗ ಈ ವಿವಾದಕ್ಕೆ ನಟರು ಯಾವ ರೀತಿ ಸ್ಪಷ್ಟನೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
