ಪಾಳು ಬೀಳುತ್ತಿರುವ ಅಂಡರ್ ಗ್ರೌಂಡ್ ಮಾರುಕಟ್ಟೆImage Credit source: Tv9 Kannada
ಬೆಂಗಳೂರು, ಜುಲೈ 12: ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಬೆಂಗಳೂರಿನ (Bengaluru) ವಿಜಯನಗರದಲ್ಲಿ (Vijayanagara) ನಿಮರ್ಮಸಲಾಗಿದ್ದ ಅಂಡರ್ ಗ್ರೌಂಡ್ ಮಾರುಕಟ್ಟೆ (Underground Market) ಉದ್ಘಾಟನೆಯಾಗಿ ಬರೋಬ್ಬರಿ 2 ವರ್ಷಗಳೇ ಕಳೆದರೂ ವ್ಯಾಪಾರಿಗಳ ಬಳಕೆಗೆ ಮಾತ್ರ ಇನ್ನೂ ಲಭ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆ ಮುಗಿದಿರುವ ಕಾರಣ 80ಕ್ಕೂ ಹೆಚ್ಚು ಸುಸಜ್ಜಿತ ಮಳಿಗೆಗಳು ಪಾಳು ಬೀಳುತ್ತಿವೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಗೆ ವ್ಯಾಪಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ
ದೆಹಲಿಯ ಪಾಲಿಕಾ ಬಜಾರ್ ಮಾದರಿಯಲ್ಲಿ ಹೈಟೆಕ್ ಭೂಗತ ಮಾರುಕಟ್ಟೆ ಮಾಡುತ್ತೇವೆ ಎಂದು ಬರೋಬ್ಬರಿ 13 ಕೋಟಿ ರೂಪಾಯಿ ಹಣವನ್ನ ಬಳಸಿ ಈ ಭೂಗತ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಉದ್ಘಾಟನೆಯೂ ನಡೆದಿರುವ ಕಾರಣ ಮಾರ್ಕೆಟ್ ವ್ಯಾಪಾರಿಗಳ ಬಳಕೆಗೆ ಲಭ್ಯವಾಗಬೇಕಿತ್ತು. ಆದರೆ ಕಮಿಷನ್ ದಂಧೆಯೋ ಅಥವಾ ಅಧಿಕಾರಿಗಳ ಜಡ್ಡುಗಟ್ಟಿದ ಜಿಡ್ಡುತನವೋ ಗೊತ್ತಿಲ್ಲ, ಇಷ್ಟೂ ದಿನವಾದ್ರೂ ಒಂದು ಟೆಂಡರ್ ಪ್ರಕ್ರಿಯೆಯನ್ನು ಮುಗಿಸಲು ಈ ಮಹಾಶಯರಿಗೆ ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ
ವ್ಯಾಪಾರಿಗಳ ಆಕ್ರೋಶ
ನಗರದಲ್ಲಿ ಸದ್ಯ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ದೊಡ್ಡ ಮಟ್ಟದಲ್ಲಿ ನಡೀತಿದೆ. ಹೊಟ್ಟೆಪಾಡಿಗೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡಿರೋ ಬಡವರ ಅಂಗಡಿಗಳನ್ನು ಕಿತ್ತೆಸೆಯಲಾಗುತ್ತಿದೆ. ಆದರೆ, ಅದೇ ವ್ಯಾಪಾರಿಗಳಿಗೆ ಆಸರೆಯಾಗಬೇಕಿದ್ದ ವಿಜಯನಗರದಲ್ಲಿ ನಿರ್ಮಿಸಿರುವ ಅಂಡರ್ ಗ್ರೌಂಡ್ ಮಾರ್ಕೆಟ್ನ ಸುಸಜ್ಜಿತ ಮಳಿಗೆಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಉಪಯೋಗಕ್ಕೆ ಬಾರದಂತೆ ಬಿದ್ದಿವೆ. ಮಾರುಕಟ್ಟೆಯ ಒಳಗಿರುವ ಲಿಫ್ಟ್, ಎಸ್ಕಲೇಟರ್ಗಳು ಉದ್ಘಾಟನೆಯಾದದಿನದಿಂದ ಬಂದ್ ಆಗಿವೆ. ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಕಾರಣ ಇಡೀ ಮಾರುಕಟ್ಟೆ ಈಗ ಪಾಳುಬೀಳುವ ಸ್ಥಿತಿಗೆ ತಲುಪಿದ್ದು, ವ್ಯಾಪಾರಿಗಳು ಆಡಳಿತ ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಹೀಗಾಗಿ ಇನ್ನಾದರೂ ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳು ಎಚ್ಚೆತ್ತುಕೊಂಡು ಟೆಂಡರ್ ಪ್ರಕ್ರಿಯೆ ಮುಗಿಸುತ್ತಾರಾ? ಅಥವಾ ಈ 13 ಕೋಟಿ ವೆಚ್ಚದ ಮಾರುಕಟ್ಟೆ ಕೇವಲ ಧೂಳು ತಿನ್ನುವ ಶೋಕೇಸ್ ಆಗಿ ಉಳಿಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
