
ಕಡೂರು, ಮಾ.14 : “ಗಂಡು ಮಕ್ಕಳಿದ್ದರೆ ಮಾತ್ರ ಮುಕ್ತಿ” ಎಂಬ ಹಳೆಯ ಸಂಪ್ರದಾಯದ ನಂಬಿಕೆಯನ್ನು ಬದಿಗೊತ್ತಿ, ಇಬ್ಬರು ಹೆಣ್ಣು ಮಕ್ಕಳು ತಮ್ಮ ತಂದೆಯ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿದಾಯ ಹೇಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಬೀರೂರು ಪಟ್ಟಣದ ನಿವಾಸಿ ವಿಶ್ವನಾಥ್ ಅವರು ನಿನ್ನೆ ನಿಧನರಾಗಿದ್ದರು. ಇವರಿಗೆ ಗಂಡು ಮಕ್ಕಳಿರಲಿಲ್ಲ, ಕೇವಲ ಇಬ್ಬರು ಹೆಣ್ಣು ಮಕ್ಕಳಿದ್ದರು. ತಂದೆಯ ಸಾವಿನಿಂದ ಕಂಗಾಲಾಗಿದ್ದ ಪುತ್ರಿಯರು, ತಂದೆಯ ಮೇಲಿನ ಗೌರವ ಮತ್ತು ಪ್ರೀತಿಯಿಂದ ತಾವೇ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದರು. ಭಾವಸಾರ ಕ್ಷತ್ರಿಯ ಸಮಾಜದ ಸಂಪ್ರದಾಯದಂತೆ ಎಲ್ಲಾ ಧಾರ್ಮಿಕ ವಿಧಿವಿಧಾನಗಳನ್ನು ಇಬ್ಬರು ಪುತ್ರಿಯರು ಅತ್ಯಂತ ಶ್ರದ್ಧೆಯಿಂದ ನೆರವೇರಿಸಿದರು. ಮೃತ ವಿಶ್ವನಾಥ್ ಅವರ ಪುತ್ರಿ ಐಶ್ವರ್ಯ ಮತ್ತು ಅವರ ಸೋದರಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ