ಆರ್. ಅಶೋಕ್, ಪ್ರಿಯಾಂಕ್ ಖರ್ಗೆImage Credit source: tv9 kannada
ಬೆಂಗಳೂರು, ಆಗಸ್ಟ್ 02: ರಾಜ್ಯಾದ್ಯಂತ ಇಂದು ಬಹುನಿರೀಕ್ಷಿತ 3 ಸಾವಿರದ 991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆ (Police Constable Exam) ಅಂತ್ಯವಾಗಿದೆ. ಆದರೆ ಒಂದೆಡೆ OMR ಶೀಟ್ ಅದಲು ಬದಲು, ಮತ್ತೊಂದೆಡೆ ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಅಭ್ಯರ್ಥಿಗಳು ರೊಚ್ಚಿಗೆದ್ದಿದ್ದರು. ಇದೇ ವಿಚಾರವಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka), ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದಿದ್ದಾರೆ. ಅಷ್ಟೇ ಅಲ್ಲದೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಆರ್.ಅಶೋಕ್ ವಾಗ್ದಾಳಿ
ಈ ಕುರಿತಾಗಿ ಟ್ವೀಟ್ ಮಾಡಿರುವ ಆರ್.ಅಶೋಕ್, ‘ಮತ್ತೊಂದು ನೇಮಕಾತಿ ಪರೀಕ್ಷೆ, ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವೈಫಲ್ಯ. ಮಗದೊಮ್ಮೆ ರಾಜ್ಯದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡಿದ ರಾಜ್ಯ ಕಾಂಗ್ರೆಸ್ ಸರ್ಕಾರ’ ಎಂದು ಕಿಡಿಕಾರಿದ್ದಾರೆ.
ಆರ್.ಅಶೋಕ್ ಟ್ವೀಟ್
ಮತ್ತೊಂದು ನೇಮಕಾತಿ ಪರೀಕ್ಷೆ,
ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ವೈಫಲ್ಯ.
ಮಗದೊಮ್ಮೆ ರಾಜ್ಯದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡಿದ ರಾಜ್ಯ ಕಾಂಗ್ರೆಸ್ ಸರ್ಕಾರ.ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ, OMR ಶೀಟ್ಗಳ ಗೊಂದಲ ಹಾಗೂ ಅಭ್ಯರ್ಥಿಗಳು ಪರೀಕ್ಷೆಯಿಂದ… pic.twitter.com/c5tsWflB59
— R. Ashoka (@RAshokaBJP) August 2, 2026
‘ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ವಿಳಂಬ, OMR ಶೀಟ್ಗಳ ಗೊಂದಲ ಹಾಗೂ ಅಭ್ಯರ್ಥಿಗಳು ಪರೀಕ್ಷೆಯಿಂದ ಹೊರನಡೆಯುವಂತಾದ ಘಟನೆ ಆಡಳಿತದ ಸಂಪೂರ್ಣ ವೈಫಲ್ಯ ಮತ್ತು ಕ್ಷಮಿಸಲಾಗದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ’ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ತಕ್ಷಣ ರಾಜೀನಾಮೆ ನೀಡಬೇಕು
‘ಸಾವಿರಾರು ಅಭ್ಯರ್ಥಿಗಳು ವರ್ಷಗಳ ಕಾಲ ಶ್ರಮಪಟ್ಟು ಈ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆ ನೀಡಿದ್ದು ಗೊಂದಲ, ಅಸಮರ್ಥ ಆಡಳಿತ ಮತ್ತು ಭಗ್ನಗೊಂಡ ಕನಸುಗಳ ಗುಚ್ಛವನ್ನ. ಈ ವೈಫಲ್ಯದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಗೊಂದಲವಾದ ಪರೀಕ್ಷೆಯನ್ನು ಸಂಬಂಧಿತ ಕೇಂದ್ರದಲ್ಲಿ ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕು. ಜೊತೆಗೆ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಇನ್ನು ಯುವಕರ ಭವಿಷ್ಯ ಹಾಳು ಮಾಡಿದ ಸರ್ಕಾರಕ್ಕೆ ಉತ್ತರದಾಯಿತ್ವ ಯಾರು? ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಗೃಹ ಸಚಿವರಿಂದ ತಕ್ಷಣವೇ ರಾಜೀನಾಮೆ ಪಡೆಯಿರಿ’ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.
ಹಾಸನದಲ್ಲೂ ಎಡವಟ್ಟು: ನೇಮಕಾತಿ ಪರೀಕ್ಷೆಯ ಅವ್ಯವಸ್ಥೆಗೆ ಮತ್ತೊಂದು ಸಾಕ್ಷಿ!
‘ವಿಜಯಪುರ, ಹಾವೇರಿ ಬಳಿಕ ಹಾಸನದಲ್ಲೂ OMR ಶೀಟ್ ಮತ್ತು ಪ್ರಶ್ನೆಪತ್ರಿಕೆ ಬದಲಾವಣೆ ಕುರಿತು ಗಂಭೀರ ಗೊಂದಲ ನಡೆದಿದೆ ಎಂಬುದನ್ನು ಮಾಧ್ಯಮಗಳು ಸಾಕ್ಷಿ ಸಮೇತ ವರದಿ ಮಾಡುತ್ತಿವೆ. ಒಂದರ ಹಿಂದೆ ಒಂದರಂತೆ ಬೆಳಕಿಗೆ ಬರುತ್ತಿರುವ ಈ ಅವ್ಯವಸ್ಥೆಗಳ ನಡುವೆಯೂ ಗೃಹ ಸಚಿವರು ಕಣ್ಮುಚ್ಚಿ ಕುಳಿತಿರುವುದು ಅತ್ಯಂತ ಖಂಡನೀಯ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ
‘ರಾಜ್ಯದ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವ ಈ ಸಂಪೂರ್ಣ ವೈಫಲ್ಯದ ನೈತಿಕ ಹೊಣೆ ಹೊತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಕ್ಷಣ ರಾಜೀನಾಮೆ ನೀಡಬೇಕು. ಸಿಎಂ ಡಿಕೆ ಶಿವಕುಮಾರ್ ಅವರೇ ಯುವಕರಿಗೆ ನ್ಯಾಯ ದೊರಕಿಸಿಕೊಡಿ. ರಾಜ್ಯ ಸರ್ಕಾರ ಕೂಡಲೇ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 8:22 pm, Sun, 2 August 26
