ಬೆಂಗಳೂರು, (ಫೆಬ್ರವರಿ 18): ವಿವಿಧ ಬೇಡಿಕೆ ಈಡೇರಿಕೆಗಾಗಿ ಕರ್ನಾಟಕ ಸಾರಿಗೆ ನೌಕರರು (Karnataka Transport employees) ನಾಳೆ (ಫೆಬ್ರವರಿ 18) ಬೆಂಗಳೂರು ಚಲೋ (Bengaluru Chalo) ಕೈಗೊಂಡಿದ್ದು, ಈ ಬಾರಿ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ, ನೌಕರರ ಬೇಡಿಕೆ ಈಡೇರಿಸಲು ಮುಂದಾಗಿದೆ. ಹೌದು…ಈವರೆಗೂ ಸಾರಿಗೆ ನೌಕರರ ಹಿಂಬಾಕಿ ನೀಡುವಲ್ಲಿ ವಿಳಂಬ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಬಾಕಿ ಪಾವತಿಗಾಗಿ ಬರೋಬ್ಬರಿ 1,239 ಕೋಟಿ ರೂಪಾಯಿ ಬಿಡುಗಡೆ ನಿರ್ಧರಿಸಿದೆ. ಜೊತೆಗೆ ವೇತನ ಪರಿಷ್ಕರಣೆಗೂ ಆದೇಶಿಸಿದೆ.
ನಾಳೆ(ಫೆಬ್ರವರಿ 18) ಪ್ರತಿಭಟನೆ ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಸಿಎಂ ಹಾಗೂ ಹಣಕಾಸು ಇಲಾಖೆ ಜೊತೆ ಸುದೀರ್ಘ ಚರ್ಚೆ ನಡೆಸಿದ್ದು, ಅಂತಿಮವಾಗಿ ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸಲು ಮುಂದಾಗಿದೆ.
ಇದನ್ನೂ ನೋಡಿ: KSRTC BMTC Employees Strike: ನಾಳೆ ಸಾರಿಗೆ ಬಸ್ ಇರೋದಿಲ್ವಾ? ಹೇಗಿರುತ್ತೆ ಮುಷ್ಕರ?
ಸಾರಿಗೆ ನಿಗಮಗಳ ಸಿಬ್ಬಂದಿಗೆ 26 ತಿಂಗಳ ಹಿಂಬಾಕಿ ನೀಡಲು ನಿರ್ಧಾರ ಮಾಡಿದೆ. ಹಾಗೇ 38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಿದೆ. ಇನ್ನು 2024ರ ಜನವರಿ 1ರಿಂದ ವೇತನ ಪರಿಷ್ಕೃತ ಆಗಬೇಕಿತ್ತು. ಆದ್ರೆ, 2025ರ ಮಾರ್ಚ್ 1ರಿಂದ ವೇತನ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ 1271.92 ಕೋಟಿ ರೂಪಾಯಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಆದೇಶದಲ್ಲೇನಿದೆ?
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ 01.01.2021ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಿ ಆದೇಶಿಸಿದೆ. ಮುಂದುವರೆದು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳ (ಪೂರ್ವ ಕಿಂಕೋ ನೌಕರರು ಸೇರಿದಂತೆ) ಮೂಲವೇತನವನ್ನು ದಿನಾಂಕ 01.04.2025 ರಿಂದ ಜಾರಿಗೆ ಬರುವಂತೆ ಶೇಕಡಾವಾರು ಎಷ್ಟು ಪ್ರಮಾಣದಲ್ಲಿ ಪರಿಷ್ಕರಿಸುವ ಕುರಿತು ಕಾರ್ಮಿಕ ಸಂಘಟನೆಗಳ ಜೊತೆ ಚರ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಹ ಆದೇಶಿಸಿದೆ. ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ:ಆಇ 135 ವೆಚ್ಚ-11/2023, ದಿನಾಂಕ:18.02.2026 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 9:55 pm, Wed, 18 February 26
