ಪ್ರತಿ ಚುನಾವಣೆಯಲ್ಲೂ ಮಹಿಳೆಯರ ಕೋಪ ಎದುರಿಸುತ್ತೀರಿ; ವಿರೋಧ ಪಕ್ಷಗಳಿಗೆ ಅಮಿತ್ ಶಾ ಎಚ್ಚರಿಕೆ – Kannada News | Womens anger will come Amit Shah warns opposition after womens reservation bill rejected

ನವದೆಹಲಿ, ಏಪ್ರಿಲ್ 17: ಇಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣದಿಂದ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಇದು ವಿರೋಧ ಪಕ್ಷದ ವಿರುದ್ಧ ಬಿಜೆಪಿ ಸರ್ಕಾರದ ಆಕ್ರೋಶಕ್ಕೆ ಕಾರಣವಾಯಿತು. ಈ ಮಸೂದೆಯೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಪ್ರತಿಪಾದಿಸಿದ ಗೃಹ ಸಚಿವ ಅಮಿತ್ ಶಾ, ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಇಂದು ಲೋಕಸಭೆಯಲ್ಲಿ ನಡೆದಿದ್ದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯ ಆಗುತ್ತದೆ. ನಾರಿ ಶಕ್ತಿ ವಂದನ ಕಾಯ್ದೆಗೆ ಬೇಕಿದ್ದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳು ಸೇರಿ ಸೋಲಿಸಿಬಿಟ್ಟವು. ಮಹಿಳೆಯರಿಗೆ ಸಿಗಬೇಕಿದ್ದ ಶೇ. 33ರಷ್ಟು ಮೀಸಲಾತಿಗೆ ಅಡ್ಡಗಾಲು ಹಾಕಿದರು. ಆ ಮಸೂದೆ ಸೋಲುತ್ತಿದ್ದಂತೆ ಅದನ್ನು ಅವರು ಸಂಭ್ರಮಿಸಿದ್ದು, ಜೈಕಾರ ಹಾಕಿದ್ದು ನೋಡಿದರೆ ತುಂಬಾನೇ ಬೇಸರ ಆಗುತ್ತದೆ. ನಮ್ಮ ದೇಶದ ಮಹಿಳೆಯರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಸಿಗಬೇಕಿದ್ದ ಮೀಸಲಾತಿ ಹಕ್ಕು ಕೈತಪ್ಪಿ ಹೋಗಿದೆ. ಕಾಂಗ್ರೆಸ್ ಮತ್ತು ಅವರ ಮಿತ್ರಪಕ್ಷಗಳು ಈ ರೀತಿ ಮಾಡ್ತಿರೋದು ಇದೇ ಮೊದಲೇನಲ್ಲ. ಇವರ ಇಂಥ ಬುದ್ಧಿ ಮಹಿಳೆಯರಿಗೂ ಒಳ್ಳೆಯದಲ್ಲ, ದೇಶಕ್ಕೂ ಒಳ್ಳೆಯದಲ್ಲ. ವಿರೋಧ ಪಕ್ಷದವರ ವಿರುದ್ಧ ಮಹಿಳೆಯರ ಸಿಟ್ಟು ಹೇಗಿರುತ್ತದೆ ಎಂಬುದನ್ನು 2029ರ ಲೋಕಸಭೆ ಚುನಾವಣೆಯಲ್ಲಿ ಅಷ್ಟೇ ಅಲ್ಲ, ಮುಂದಿನ ಪ್ರತಿ ಚುನಾವಣೆಯಲ್ಲೂ ಅನುಭವಿಸಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಬಹುಮತ ಸಿಗದಿದ್ದಕ್ಕೆ ಸಂಸತ್ ಆವರಣದಲ್ಲಿ ಎನ್​ಡಿಎ ನಾಯಕರ ಪ್ರತಿಭಟನೆ

ವಿರೋಧ ಪಕ್ಷಗಳಿಂದಾಗಿ ದೇಶದ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33% ಮೀಸಲಾತಿ ಸಿಗುವುದಿಲ್ಲ. ಅದು ಅವರ ಹಕ್ಕಾಗಿತ್ತು. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಈ ರೀತಿ ಮೊದಲ ಬಾರಿಗೆ ಅಲ್ಲ, ಪದೇ ಪದೇ ಮಾಡಿವೆ. ನಾರಿ ಶಕ್ತಿಗೆ ಮಾಡಿದ ಈ ಅವಮಾನ ಇಲ್ಲಿಗೆ ನಿಲ್ಲುವುದಿಲ್ಲ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ವಿರೋಧ ಪಕ್ಷವು 2029ರ ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲದೆ, ಪ್ರತಿಯೊಂದು ಹಂತದಲ್ಲೂ, ಪ್ರತಿ ಚುನಾವಣೆಯಲ್ಲೂ ಮತ್ತು ಪ್ರತಿಯೊಂದು ಸ್ಥಳದಲ್ಲೂ ‘ಮಹಿಳೆಯರ ಕೋಪ’ವನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎನ್​ಡಿಎಗೆ ದೊಡ್ಡ ಸೋಲು; ಮಹಿಳಾ ಮೀಸಲಾತಿ ಮಸೂದೆಗೆ ಸಿಗದ ಬಹುಮತ

ಇಂದು ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿ 298 ಸದಸ್ಯರು ಮತ ಚಲಾಯಿಸಿದರೆ, 230 ಸದಸ್ಯರು ಮಸೂದೆಯ ವಿರುದ್ಧ ಮತ ಚಲಾಯಿಸಿದರು. “ಸದನದಲ್ಲಿ ಮತದಾನದ ಸಮಯದಲ್ಲಿ 2/3 ಬಹುಮತವನ್ನು ಸಾಧಿಸದ ಕಾರಣ ಸಂವಿಧಾನ (131 ನೇ ತಿದ್ದುಪಡಿ) ತಿದ್ದುಪಡಿ ಮಸೂದೆ ಅಂಗೀಕಾರವಾಗಲಿಲ್ಲ” ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *