ಪ್ರಭಾಸ್ ‘ಮಿಡ್ ರೇಂಜ್ ಹೀರೋ: ನಿರ್ದೇಶಕನ ಮಾತಿಗೆ ರೊಚ್ಚಿಗೆದ್ದ ಫ್ಯಾನ್ಸ್ – Kannada News | Director Maruthi said Prabhas was a medium range hero

ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಸ್ಟಾರ್ ನಟ. ಅವರ ಕೆಟ್ಟ ಸಿನಿಮಾಗಳು ಸಹ 200-300 ಕೋಟಿ ಹಣವನ್ನು ಸುಲಭವಾಗಿ ಬಾಕ್ಸ್ ಆಫೀಸ್​​ನಲ್ಲಿ ಗಳಿಕೆ ಮಾಡುತ್ತವೆ. ಪ್ರಭಾಸ್ ನಟನೆಯ ಕಳೆದ ಕೆಲ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸದೇ ಇದ್ದರೂ ಸಹ ಅವರ ಕೈಯಲ್ಲಿ ಕನಿಷ್ಟ ಐದು ಸಿನಿಮಾಗಳಂತೂ ಇದೆ. ತೆಲುಗು ಮಾತ್ರವಲ್ಲದೆ ಬಾಲಿವುಡ್​ನ ನಿರ್ಮಾಪಕರುಗಳು ಸಹ ಹಣದ ಥೈಲಿ ಹಿಡಿದುಕೊಂಡು ಪ್ರಭಾಸ್ ಕಾಲ್​​ಶೀಟ್​​ಗಾಗಿ ಕಾಯುತ್ತಿದ್ದಾರೆ. ಅಂಥಹಾ ನಟನನ್ನು ನಿರ್ದೇಶಕನೊಬ್ಬ ‘ಮಿಡ್ ರೇಂಜ್ ಹೀರೋ’ ಎಂದಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ನಿನ್ನೆ ಬಲು ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮದಲ್ಲಿ ಪ್ರಭಾಸ್ ಸೇರಿದಂತೆ ಸಿನಿಮಾನಲ್ಲಿ ನಟಿಸಿದ ಹಲವು ನಟ, ನಟಿಯರು ಭಾಗಿ ಆಗಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವ ಮಾರುತಿ ಅವರು ಸಹ ಕಾರ್ಯಕ್ರಮದಲ್ಲಿದ್ದು ವೇದಿಕೆ ಮೇಲೆ ಭಾವುಕವಾಗಿ ಮಾತನಾಡಿದ್ದಾರೆ. ಒಂದು ಹಂತದಲ್ಲಂತೂ ವೇದಿಕೆ ಮೇಲೆ ಕಣ್ಣೀರು ಸಹ ಹಾಕಿದ್ದಾರೆ ಮಾರುತಿ.

ಪ್ರಭಾಸ್ ಅನ್ನಂತೂ ಹೊಗಳಿ ಅಟ್ಟಕ್ಕೆ ಏರಿಸಿದರು ಮಾರುತಿ. ಆದರೆ ಅವರು ವೇದಿಕೆ ಮೇಲೆ ಮಾತು ಆರಂಭಿಸಿದಾಗ ಪ್ರಭಾಸ್ ಅವರನ್ನು ‘ಮೀಡಿಯಮ್ ರೇಂಜ್ ಹೀರೋ’ (ಸಾಧಾರಣ ನಾಯಕ ನಟ) ಎಂದು ಕರೆದರು.

ಇದನ್ನೂ ಓದಿ:ಪ್ರಭಾಸ್ ಅಭಿಮಾನಿಗಳಿಗೆ ತನ್ನ ಮನೆ ವಿಳಾಸ ಕೊಟ್ಟ ‘ರಾಜಾ ಸಾಬ್’ ನಿರ್ದೇಶಕ

ಆಗಿದ್ದಿಷ್ಟು, ಪ್ರಭಾಸ್ ಅವರ ಜನಪ್ರಿಯತೆ ಬಗ್ಗೆ ವೇದಿಕೆ ಮೇಲೆ ಮಾತನಾಡಿದ ಮಾರುತಿ, ‘ಕಾಶ್ಮೀರಕ್ಕೆ ಹೋಗಲಿ, ಎಲ್ಲೇ ಹೋಗಲಿ ಪ್ರಭಾಸ್ ಅಲ್ಲಿನ ಜನರಿಗೆ ಗೊತ್ತು. ನಾನು ಆಫ್ರಿಕಾದ ಮಸಾಯಿಮಾರಾಕ್ಕೆ ಶೂಟಿಂಗ್​​ಗೆ ಹೋಗಿದ್ದೆ ಅಲ್ಲಿಯ ಹಳ್ಳಿಯ ಜನರಿಗೂ ಪ್ರಭಾಸ್ ಎಂದರೆ ಗೊತ್ತು. ಇದಕ್ಕೆಲ್ಲ ನಾವು ರಾಜಮೌಳಿಗೆ ಧನ್ಯವಾದ ಹೇಳಬೇಕು, ನಾವೆಲ್ಲ ಇಂದು ಪ್ಯಾನ್ ಇಂಡಿಯಾ ಎಂದು ಕಾಲರ್ ಮೇಲೆತ್ತುಕೊಂಡು ಓಡಾತ್ತಿದ್ದೇವೆ, ಆದರೆ ತನ್ನ ಜೀವನವನ್ನೇ ಮುಡಿಪಾಗಿಟ್ಟು ಒಬ್ಬ ‘ಮೀಡಿಯಮ್ ರೇಂಜ್ ಹೀರೋ’ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿದವರು ರಾಜಮೌಳಿ’ ಎಂದು ಮಾರುತಿ ಹೇಳಿದರು.

ಮಾರುತಿ ಅವರು ಪ್ರಭಾಸ್ ಅವರನ್ನು ‘ಮೀಡಿಯಮ್ ರೇಂಜ್ ಹೀರೋ’ ಎಂದಿದ್ದು ಪ್ರಭಾಸ್ ಅಭಿಮಾನಿಗಳಿಗೆ ಬೇಸರ ತಂದಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಮಾರುತಿ ಅವರ ಭಾಷಣದ ತುಣುಕು ವೈರಲ್ ಆಗಿದ್ದು, ಸಖತ್ ಟ್ರೋಲ್ ಸಹ ಆಗುತ್ತಿದ್ದಾರೆ. ಆದರೆ ಮಾರುತಿ ತಮ್ಮ ಅದೇ ಭಾಷಣದಲ್ಲಿ ಪ್ರಭಾಸ್ ಅವರನ್ನು ನಾನಾ ರೀತಿಯಲ್ಲಿ ಕೊಂಡಾಡಿದ್ದಾರೆ. ಆದರೆ ರಾಜಮೌಳಿಯವರನ್ನು ಹೊಗಳುವ ಭರದಲ್ಲಿ ಪ್ರಭಾಸ್ ಅವರನ್ನು ಮೀಡಿಯಮ್ ರೇಂಜ್ ಹೀರೋ ಎಂದಿದ್ದಾರಷ್ಟೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಇದು ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾನಲ್ಲಿ ನಿಧಿ ಅಗರ್ವಾಲ್ ಸೇರಿದಂತೆ ಮೂವರು ನಾಯಕಿಯರು ಇದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *