ಲವರ್ ಮನೆಯಲ್ಲಿ ಬೆಂಕಿ ಹಚ್ಚಿಕೊಂಡ ಯುವಕ Image Credit source: Tv9 kannada
ಬೆಂಗಳೂರಿನ, ಏ.21: ರಾಜ್ಯದಲ್ಲಿ ಪ್ರೀತಿ-ಪ್ರೇಮಗಳಿಂದ ಉಂಟಾಗುವ ಅವಾಂತರಗಳು ಒಂದೆರಡಲ್ಲ, ಸಂಬಂಧಗಳ ನಡುವೆ ನಂಬಿಕೆಗಳು ಇಲ್ಲದಾಗ ಇಂತಹ ಘಟನೆಗಳು ಇದೆ. ಪ್ರೀತಿಗಾಗಿ ಗಂಡನನ್ನು ಕೊಲೆ ಮಾಡುವುದು, ಪ್ರೀತಿಸಿದವರು ಸಿಕ್ಕಿಲ್ಲ ಎಂದು ಪ್ರಾಣ ಕಳೆದುಕೊಳ್ಳುತ್ತಿರುವ ವರದಿಗಳು ಹೆಚ್ಚಾಗಿದೆ. ಇದೀಗ ಇಂತಹದೇ ಒಂದು ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನಾಪುರದಲ್ಲಿ ಪ್ರೇಮ ಪ್ರಕರಣವೊಂದು ದುರಂತ ಅಂತ್ಯ ಕಂಡಿದೆ. ಪ್ರೇಯಸಿಯ ಮನೆಗೆ ನುಗ್ಗಿದ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿಗೂ ಬೆಂಕಿ ಹಚ್ಚಲು ಯತ್ನಿಸಿದ ಭೀಕರ ಘಟನೆ ಮಂಗಳವಾರ (ಏಪ್ರಿಲ್ 21) ನಡೆದಿದೆ.
ಮೃತ ಯುವಕನನ್ನು ಕಿರಣ್ ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಮತ್ತು ಯುವತಿ ನಡುವೆ ಸ್ನೇಹವಾಗಿ, ಅದು ನಂತರ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ. ಇಂದು ಯುವತಿಯ ತಾಯಿ ಮತ್ತು ಅಣ್ಣ ಮನೆಯಲ್ಲಿ ಇಲ್ಲದ್ದನ್ನು ಗಮನಿಸಿದ ಕಿರಣ್, ಮಾತನಾಡಲೆಂದು ಆಕೆಯ ಮನೆಗೆ ತೆರಳಿದ್ದಾನೆ. ಮನೆಗೆ ಪೆಟ್ರೋಲ್ ಸಮೇತ ಬಂದಿದ್ದ ಕಿರಣ್, ಯುವತಿಯೊಂದಿಗೆ ಜೋರಾಗಿ ಗಲಾಟೆ ಮಾಡಿಕೊಂಡಿದ್ದಾನೆ. ಮಾತಿಗೆ ಮಾತು ಬೆಳೆದಾಗ ತಾನು ತಂದಿದ್ದ ಪೆಟ್ರೋಲ್ ಅನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಇದನ್ನೂ ಓದಿ: ಚಿಕ್ಕಮಗಳೂರು: ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ! ನಾಪತ್ತೆಯಾಗಿದ್ದ ಕೇರಳ ಕಾರ್ಮಿಕನ ಹತ್ಯೆ ಶಂಕೆ
ಅಷ್ಟಕ್ಕೇ ನಿಲ್ಲದ ಕಿರಣ್, ಪ್ರೇಯಸಿಗೂ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ವೇಳೆ ಕಿರುಚಾಡುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ ಯುವತಿ ಸಣ್ಣಪುಟ್ಟ ಸುಟ್ಟಗಾಯಗಳಾಗಿವೆ. ಬೆಂಕಿಯ ತೀವ್ರತೆಗೆ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರೀತಿಯಲ್ಲಿ ಮನಸ್ತಾಪವಾಗಿದೆ ಆ ಕಾರಣಕ್ಕೆ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
