ಗುರುಗ್ರಾಮ, ಜುಲೈ 06: ಮದುವೆ(Marriage)ಯಾಗಿ ಕೇವಲ ಮೂರೇ ತಿಂಗಳಾಗಿದ್ದ ನವವಿವಾಹಿತೆಯನ್ನು ಪತಿ ಹಾಗೂ ಆತನ ಪ್ರೇಯಸಿ ಸೇರಿ ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಮಾನೇಸರ್ನಲ್ಲಿ ನಡೆದಿದೆ. ಮೂರು ವರ್ಷಗಳ ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ ಪತ್ನಿಯನ್ನೇ ಮುಗಿಸಿದ ಪತಿ ಹಾಗೂ ಆತನ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೆಳತಿಯ ಮನೆಗೆ ಪತ್ನಿಯನ್ನು ಕರೆಸಿ ಅಲ್ಲೇ ಇಬ್ಬರು ಸೇರಿ ಆಕೆಯನ್ನು ಹತ್ಯೆಗೈದಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಫೆಬ್ರವರಿಯಲ್ಲಿ ಮಾನೇಸರ್ ನಿವಾಸಿ ಅಂಕಿತ್ (25) ಎಂಬಾತನೊಂದಿಗೆ 22 ವರ್ಷದ ಯುವತಿಯ ಮದುವೆಯಾಗಿತ್ತು. ಆದರೆ, ಮೇ 21 ರಂದು ಆಕೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಅತ್ತೆ ಮನೆಯವರಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಸಿಗದಿದ್ದಾಗ, ಗಾಬರಿಗೊಂಡ ಯುವತಿಯ ತಾಯಿ ಮೇ 22 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಮೇ 22 ರಂದೇ ಮಾನೇಸರ್ನ ಬಾಡಿಗೆ ಕೋಣೆಯೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ.
3 ವರ್ಷಗಳ ಅಕ್ರಮ ಸಂಬಂಧ: ತಂಬಾಕು ಅಂಗಡಿ ನಡೆಸುತ್ತಿದ್ದ ಅಂಕಿತ್ ಹಾಗೂ ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ರಜನಿ ದೇವಿ (38) ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದರು.
ಮತ್ತಷ್ಟು ಓದಿ: Chanakya Niti: ಇಂತವರನ್ನು ಮದುವೆಯಾದರೆ ಜೀವನ ತುಂಬಾನೇ ಕಷ್ಟ ಎಂದಿದ್ದಾರೆ ಚಾಣಕ್ಯ
ರೂಮ್ನಲ್ಲಿ ನಡೆದ ಹತ್ಯೆ: ರಜನಿಯ ಬಾಡಿಗೆ ಕೋಣೆಯಲ್ಲೇ ಇಬ್ಬರು ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು. ಇದಕ್ಕಾಗಿಯೇ ಎರಡು ತಿಂಗಳ ಮೊದಲೇ ಉತ್ತರ ಪ್ರದೇಶದಿಂದ ಗನ್ ಖರೀದಿಸಿದ್ದರು.ಮೇ 21 ರಂದು ಪತ್ನಿಯನ್ನ ನಂಬಿಸಿ ಗೆಳತಿ ರಜನಿಯ ಕೋಣೆಗೆ ಕರೆತಂದ ಅಂಕಿತ್, ಇಬ್ಬರೂ ಸೇರಿ ಆಕೆಯನ್ನು ಗುಂಡಿಟ್ಟು ಕೊಂದಿದ್ದಾರೆ.
ನೇಪಾಳಕ್ಕೆ ಪಲಾಯನ, ಕೊನೆಗೂ ಸಿಕ್ಕಿಬಿದ್ದರು
ಹತ್ಯೆಯ ನಂತರ ಸಿಕ್ಕಿಬೀಳುವ ಭಯದಿಂದ ಅಂಕಿತ್ ಮತ್ತು ರಜನಿ ಮೊದಲು ಹರಿದ್ವಾರಕ್ಕೆ ಓಡಿಹೋಗಿ, ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಿದ್ದರು. ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳು ಜೂನ್ 30 ರಂದು ಭಾರತಕ್ಕೆ ಮರಳಿದ್ದರು. ಈ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕ್ರೈಂ ಬ್ರಾಂಚ್ ಪೊಲೀಸರು ಇಬ್ಬರನ್ನೂ ಮಾನೇಸರ್ನಲ್ಲಿ ಬಂಧಿಸಿದ್ದಾರೆ.
ಸದ್ಯ ಕೋರ್ಟ್ ಆರೋಪಿಗಳನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 11:13 am, Mon, 6 July 26