ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ( SS Rajamouli) ಫ್ರಾನ್ಸ್ನ ಲಿಯಾನ್ನಲ್ಲಿರುವ ಲುಮಿಯೆರ್ ಮ್ಯೂಸಿಯಂನಲ್ಲಿ ದೊಡ್ಡ ಗೌರವ ಸಿಕ್ಕಿದೆ. ಮ್ಯೂಸಿಯಂನಲ್ಲಿರುವ ಪ್ರತಿಷ್ಠಿತ ವಾಲ್ ಆಫ್ ಫಿಲ್ಮ್ ಮೇಕರ್ಸ್ ಗೋಡೆಯ ಮೇಲೆ ರಾಜಮೌಳಿ ಅವರ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಲಾಗಿದೆ. ಇದಕ್ಕೂ ಮುನ್ನ ಮ್ಯೂಸಿಯಂನ ಚಿತ್ರಮಂದಿರದಲ್ಲಿ ಅವರ ‘ಈಗ’ ಮತ್ತು ‘ಆರ್ಆರ್ಆರ್’ ಸಿನಿಮಾಗಳನ್ನು ಪ್ರದರ್ಶಿಸಲಾಯಿತು. ಈ ಪ್ರದರ್ಶನಕ್ಕೆ ಭಾರಿ ಜನಸ್ತೋಮ ಹರಿದುಬಂದಿತ್ತು.
ಈ ಸಂತೋಷದ ಸುದ್ದಿಯನ್ನು ರಾಜಮೌಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ರಾನ್ಸ್ನ ಲಿಯಾನ್ನಲ್ಲಿ ‘ಈಗ’ ಮತ್ತು ‘ಆರ್ಆರ್ಆರ್’ ಸಿನಿಮಾಗಳ ಪ್ರದರ್ಶನ ವೀಕ್ಷಿಸಿದ್ದಾಗಿ ಅವರು ತಿಳಿಸಿದ್ದಾರೆ. ತಮಗೆ ಸಿಕ್ಕ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಲುಮಿಯೆರ್ ಇನ್ಸ್ಟಿಟ್ಯೂಟ್ ಮತ್ತು ಕಾನ್ ಚಲನಚಿತ್ರೋತ್ಸವದ ನಿರ್ದೇಶಕರಾದ ಥಿಯೆರಿ ಫ್ರೆಮಾಕ್ಸ್ ಅವರು ರಾಜಮೌಳಿ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸಿದರು. ನಂತರ ಅವರು ರಾಜಮೌಳಿ ಅವರನ್ನು ಸಿನಿಮಾ ಹುಟ್ಟಿದ ಐತಿಹಾಸಿಕ ಬೀದಿಗೆ ವಿಶೇಷ ಪ್ರವಾಸ ಕರೆದುಕೊಂಡು ಹೋದರು.
ಈ ನೆನಪನ್ನು ಹಂಚಿಕೊಂಡ ರಾಜಮೌಳಿ, ‘ಥಿಯೆರಿ ಫ್ರೆಮಾಕ್ಸ್ ಅವರು ನನಗೆ ಒಂದು ಸರ್ಪ್ರೈಸ್ ನೀಡಿದರು. ಸಿನಿಮಾ ಹುಟ್ಟಿದ ಬೀದಿಯಲ್ಲಿ ನನ್ನನ್ನು ನಡೆಸಿಕೊಂಡು ಹೋದರು. ಆ ಸಂದರ್ಭದಲ್ಲಿ ನಾನು ತುಂಬಾ ಭಾವುಕನಾಗಿದ್ದೆ’ ಎಂದು ಬರೆದುಕೊಂಡಿದ್ದಾರೆ.
Visited the Lumière Museum and the screening room where Eega and RRR was screened to a full house in Lyon, France.
Thierry Frémaux, the director of the Institut Lumière and the Cannes Film Festival, was gracious enough to introduce me. Then he said he had planned a surprise and… pic.twitter.com/2ZA8UT7Zxf
— rajamouli ss (@ssrajamouli) July 2, 2026
ಜಗತ್ತಿನ ಶ್ರೇಷ್ಠ ನಿರ್ದೇಶಕರ ಸಾಲಿನಲ್ಲಿ ತಮ್ಮ ಹೆಸರಿನ ಫಲಕ ನೋಡಿ ರಾಜಮೌಳಿ ಆಶ್ಚರ್ಯಚಕಿತರಾದರು. ‘ಅಲ್ಲಿ ಮಾರ್ಟಿನ್ ಸ್ಕಾರ್ಸೆಸೆ, ಕ್ಲಿಂಟ್ ಈಸ್ಟ್ವುಡ್, ಕ್ವೆಂಟಿನ್ ಟ್ಯಾರಂಟಿನೊ ಅವರಂತಹ ದಿಗ್ಗಜರ ಹೆಸರುಗಳಿದ್ದವು. ಅದರ ಪಕ್ಕದಲ್ಲೇ ಕೆಂಪು ಬಟ್ಟೆಯಿಂದ ಮುಚ್ಚಿದ ಫಲಕ ಇತ್ತು. ಅದನ್ನು ನೋಡಿದಾಗ ನನ್ನ ಮನಸ್ಸು ಶೂನ್ಯವಾಯಿತು’ ಎಂದು ಅವರು ಹೇಳಿದ್ದಾರೆ.
ವಿಶ್ವದ ಮಹಾನ್ ನಿರ್ದೇಶಕರ ಜೊತೆಗೆ ತಮ್ಮ ಹೆಸರನ್ನು ಶಾಶ್ವತವಾಗಿ ಇಟ್ಟಿರುವುದಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ. ‘ಈ ಗೌರವಕ್ಕೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಕೇವಲ ಕೃತಜ್ಞತೆಗಳು ಮಾತ್ರ. ನಾನು ತುಂಬಾ ವಿನಮ್ರನಾಗಿದ್ದೇನೆ’ ಎಂದು ರಾಜಮೌಳಿ ಬರೆದಿದ್ದಾರೆ.
ಇದೇ ಪ್ರವಾಸದಲ್ಲಿ ರಾಜಮೌಳಿ ಅವರು ತಮ್ಮ ಮುಂಬರುವ ಚಿತ್ರ ‘ವಾರಣಾಸಿ’ ಸಿನಿಮಾದ ಮೊದಲ ಗ್ಲಿಂಪ್ಸ್ ಅನ್ನು ಆನಿಮೇಟೆಡ್ ಹಬ್ಬದಲ್ಲಿ ಬಿಡುಗಡೆ ಮಾಡಿದ್ದರು. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ ಈಗಾಗಲೇ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ವಾರಣಾಸಿ ಚಿತ್ರದ ಬಿಗ್ ಅಪ್ಡೇಟ್ ನೀಡಿದ ರಾಜಮೌಳಿ: ಶೂಟಿಂಗ್ ಮುಗಿಯಲು ಇನ್ನು ಎಷ್ಟು ದಿನ ಬಾಕಿ?
ಕಳೆದ ವರ್ಷ ರಾಜಮೌಳಿ ಅವರು ಈ ಚಿತ್ರದ ಶೀರ್ಷಿಕೆಯನ್ನು ಪ್ರಕಟಿಸಿದ್ದರು. ಅದರಲ್ಲಿ ಮಹೇಶ್ ಬಾಬು ಕೈಯಲ್ಲಿ ತ್ರಿಶೂಲ ಹಿಡಿದು ಎತ್ತಿನ ಮೇಲೆ ಸವಾರಿ ಮಾಡುವ ಲುಕ್ ರಿಲೀಸ್ ಆಗಿತ್ತು. ಈ ಸಿನಿಮಾ 2027 ರ ಏಪ್ರಿಲ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
