ಅಮಿತ್ ಶಾ ಹಾಗೂ ಸುವೇಂದು ಅಧಿಕಾರಿImage Credit source: TV9 Network
ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ (West Bengal) ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಆರಂಭವಾಗುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಬಿಜೆಪಿ (BJP), ಮೊದಲ ಬಾರಿಗೆ ಬಂಗಾಳದ ಗದ್ದುಗೆ ಏರುತ್ತಿದೆ. ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ (Suvendu Adhikari) ಇಂದು ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನಂದಿಗ್ರಾಮದ ಹೋರಾಟದಿಂದ ಹಿಡಿದು ವಿಧಾನಸಭೆಯ ಅಂಗಳದವರೆಗೆ ಸುವೇಂದು ಅಧಿಕಾರಿ ನಡೆದು ಬಂದ ಹಾದಿ ಅತ್ಯಂತ ರೋಚಕವಾಗಿದೆ.
ಮುಖ್ಯಾಂಶಗಳು
- ಪಶ್ಚಿಮ ಬಂಗಾಳದ 293 ಸ್ಥಾನಗಳ ಪೈಕಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ.
- ರವೀಂದ್ರನಾಥ ಠಾಗೋರ್ ಅವರ 165ನೇ ಜನ್ಮದಿನದಂದೇ ಸುವೇಂದು ಅಧಿಕಾರಿ ಅವರ ಪ್ರಮಾಣವಚನ ಸ್ವೀಕಾರ ನಡೆಯುತ್ತಿದೆ.
- 2021ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ನಂದಿಗ್ರಾಮದಲ್ಲಿ ಸೋಲಿಸಿದ್ದ ಸುವೇಂದು ಅಧಿಕಾರಿ, ಈಗ ರಾಜ್ಯದ ಸಿಎಂ ಆಗುತ್ತಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ
ಕೋಲ್ಕತ್ತಾದಲ್ಲಿ ಕೇಂದ್ರ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ಸುವೇಂದು ಅಧಿಕಾರಿಯನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಮಿತ್ ಶಾ ಅವರು ಅಧಿಕಾರಿ ಅವರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ‘ಸುವೇಂದು ಅವರು ಸಂಘರ್ಷದ ಹಾದಿಯಲ್ಲಿ ಬಂದವರು. ಅವರಿಗೆ ಆಡಳಿತದ ಅನುಭವವಿದೆ. ಬಂಗಾಳದ ಜನತೆಯ ಆಸೆಗಳನ್ನು ಪೂರ್ಣಗೊಳಿಸಲು ಅವರು ಸಮರ್ಥರಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಠಾಗೋರ್ ಜಯಂತಿಯಂದೇ ಪ್ರಮಾಣ ವಚನ
ನಿಯೋಜಿತ ಸಿಎಂ ಸುವೇಂದು ಅಧಿಕಾರಿ ಅವರು ಈಗಾಗಲೇ ರಾಜ್ಯಪಾಲ ಆರ್.ಎನ್. ರವಿ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಇಂದು (ಮೇ 9) ವಿಶ್ವಕವಿ ರವೀಂದ್ರನಾಥ ಠಾಗೋರ್ ಅವರ 165ನೇ ಜನ್ಮದಿನವಾಗಿದ್ದು, ಬಂಗಾಳಿಗರ ಭಾವನೆಗಳಿಗೆ ಗೌರವ ನೀಡುವ ದೃಷ್ಟಿಯಿಂದ ಇದೇ ದಿನವನ್ನು ಅಧಿಕಾರ ಸ್ವೀಕಾರಕ್ಕೆ ನಿಗದಿಪಡಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಸುವೇಂದು ಅಧಿಕಾರಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸುವೇಂದು ಅಧಿಕಾರಿ ರಾಜಕೀಯ ಹಾದಿ
1995ರಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ ಸುವೇಂದು, ನಂತರ ತೃಣಮೂಲ ಕಾಂಗ್ರೆಸ್ ಸೇರಿದ್ದರು. ನಂದಿಗ್ರಾಮ ಮತ್ತು ಸಿಂಗೂರಿನ ಭೂಸ್ವಾಧೀನ ವಿರೋಧಿ ಚಳವಳಿಗಳ ಮೂಲಕ ಜನನಾಯಕನಾಗಿ ಬೆಳೆದರು. 2009 ಮತ್ತು 2014ರಲ್ಲಿ ಸಂಸದರಾಗಿದ್ದ ಅವರು, ಈ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದರು.
ಇದನ್ನೂ ಓದಿ: ಬಂಗಾಳದ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಆದರೆ, ಮಮತಾ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಉಂಟಾದ ಭಿನ್ನಮತದಿಂದಾಗಿ 2020ರಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. 2021ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು 1,956 ಮತಗಳಿಂದ ಸೋಲಿಸುವ ಮೂಲಕ ಇತಿಹಾಸ ಬರೆದಿದ್ದ ಅವರು, ರಾಜ್ಯದ ಪ್ರಬಲ ವಿರೋಧ ಪಕ್ಷದ ನಾಯಕರಾಗಿ ಗುರುತಿಸಿಕೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
