ಚಿಕ್ಕಮಗಳೂರು, ಜುಲೈ 07: ಮುಂಗಾರು ಮಳೆಯ ಅಬ್ಬರಕ್ಕೆ ಮೂಡಿಗೆರೆ ಮತ್ತು ಬೆಳ್ತಂಗಡಿ ಗಡಿಯಲ್ಲಿರುವ ಸುಂದರ ಬಂಡಾಜೆ ಜಲಪಾತವು ಮೈದುಂಬಿ ಹರಿಯುತ್ತಿದ್ದು, ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಈ ಪ್ರಶಾಂತ ವಾತಾವರಣದಲ್ಲಿ ಕೆಲವು ಪ್ರವಾಸಿಗರು ಅಪಾಯಕಾರಿ ಹುಚ್ಚಾಟಕ್ಕೆ ಮುಂದಾಗುತ್ತಿದ್ದಾರೆ. ನೂರಾರು ಅಡಿಗಳ ಎತ್ತರದಿಂದ ಭೋರ್ಗರೆಯುವ ಜಲಪಾತದ ಅಂಚಿನಲ್ಲಿ ನಿಂತು ಸಾಹಸ ಪ್ರದರ್ಶಿಸುತ್ತಿದ್ದಾರೆ. ಸ್ವಲ್ಪ ಕಾಲು ಜಾರಿದರೂ ಸಾವಿರಾರು ಅಡಿಗಳ ಆಳಕ್ಕೆ ಬಿದ್ದು ಪ್ರಾಣಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದ್ದರೂ ಪ್ರವಾಸಿಗರು ಎಚ್ಚರಿಕೆ ವಹಿಸುತ್ತಿಲ್ಲ. ಇಂತಹ ಅಪಾಯಕಾರಿ ಸ್ಥಳಗಳಲ್ಲಿ ಈ ರೀತಿಯ ಬೇಜವಾಬ್ದಾರಿಯುತ ವರ್ತನೆಗಳ ಬಗ್ಗೆ TV9 ಕನ್ನಡ ವರದಿ ಮಾಡಿದ್ದು, ಪ್ರವಾಸಿಗರು ತಮ್ಮ ಪ್ರಾಣಕ್ಕೆ ಬೆಲೆ ಕೊಟ್ಟು ಎಚ್ಚರಿಕೆಯಿಂದ ವರ್ತಿಸುವಂತೆ ಮನವಿ ಮಾಡಿದೆ.
ಸಾವಿರಾರು ಅಡಿ ಎತ್ತರದ ಈ ಕಡಿದಾದ ಪ್ರದೇಶದಲ್ಲಿ ಮಳೆಗಾಲದ ಕಾರಣ ಬಂಡೆಗಳು ತೀವ್ರವಾಗಿ ಜಾರುತ್ತಿರುತ್ತವೆ. ಸ್ವಲ್ಪ ಕಾಲು ಜಾರಿದರೂ ಪ್ರಾಣಕ್ಕೆ ಕಂಟಕ ಕಾಯಂ. ಪ್ರಕೃತಿಯ ಸೌಂದರ್ಯವನ್ನು ದೂರದಿಂದಲೇ ಆಸ್ವಾದಿಸಬೇಕೇ ಹೊರತು, ಕ್ಷಣಿಕ ಮೋಜು ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್ ಹುಚ್ಚಾಟಕ್ಕಾಗಿ ಜೀವವನ್ನು ಪಣಕ್ಕಿಡುವುದು ಜಾಣತನವಲ್ಲ. ಪ್ರವಾಸಿಗರು ಜವಾಬ್ದಾರಿಯಿಂದ ವರ್ತಿಸಿ, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ