ಬಂಡೀಪುರ ಸಫಾರಿ ವಿರುದ್ಧ ಮತ್ತೆ ಸಿಡಿದೆದ್ದ ರೈತರು: ನಾಳೆಯಿಂದ ಆಮರಣಾಂತ ಧರಣಿ, ಕಾರಣವೇನು?

ಬಂಡೀಪುರ ಸಫಾರಿ ವಿರುದ್ಧ ಮತ್ತೆ ಸಿಡಿದೆದ್ದ ರೈತರು: ನಾಳೆಯಿಂದ ಆಮರಣಾಂತ ಧರಣಿ, ಕಾರಣವೇನು?

ಚಾಮರಾಜನಗರ, ಏಪ್ರಿಲ್ 06: ಭಾರಿ ವಿರೋಧದ ನಡುವೆಯೂ ಬಂಡೀಪುರ ಸಫಾರಿಯನ್ನ (Bandipur Safari) ಸರ್ಕಾರ ರೀ ಓಪನ್ ಮಾಡಿತ್ತು. ಇದೀಗ ಸಫಾರಿ ಆರಂಭವಾದ ಬೆನ್ನಲ್ಲೇ ಮತ್ತೆ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ರೈತರು ಸಫಾರಿ ಬಂದ್​​ಗೆ ಆಗ್ರಹಿಸಿ ನಾಳೆಯಿಂದ ಅಂದರೆ ಏಪ್ರಿಲ್​ 07ರಿಂದ ಆಮರಣಾಂತ ಧರಣಿಗೆ ಸಜ್ಜಾಗಿದ್ದಾರೆ.

ಪ್ರತಿ ತಾಲೂಕಿನಲ್ಲಿ ಧರಣಿ

ಕಳೆದೊಂದು ವರ್ಷದಿಂದ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷಕ್ಕೆ ಸುದ್ದಿ ಆಗುತ್ತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಮತ್ತೆ ಹುಲಿ, ಚಿರತೆ ಹಾಗೂ ಕಾಡಾನೆ ದಾಳಿ ಹೆಚ್ಚಾಗಿದೆ. ಗುಂಡ್ಲುಪೇಟೆ ಭಾಗದಲ್ಲೇ ಅತಿ ಹೆಚ್ಚು ಮಾನವ ಹಾಗೂ ಕಾಡು ಪ್ರಾಣಿ ಸಂಘರ್ಷಕ್ಕೆ ಬಂಡೀಪುರ ಸಫಾರಿ ರೀ ಓಪನ್ ಆಗಿರುವುದೇ ಕಾರಣ ಎಂಬ ಕೂಗು ಇದೀಗ ಹೆಚ್ಚಾಗಿದೆ. ಏಪ್ರಿಲ್​ 07ರಿಂದ ರಾಜ್ಯ ರೈತ ಸಂಘದ ಹೊನ್ನೂರು ಪ್ರಕಾಶ್ ಬಣದಿಂದ ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲಿ ಆಮರಣಾಂತ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ: ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಕಾಡಾನೆ ಕಾಟ: ಬೆಳೆದ ಬೆಳೆ ಕೈಸೇರುವ ಮುನ್ನವೇ ಸರ್ವನಾಶ!

ಭೀಮನ ಬೀಡು ಬರ್ಗಿ ಪಡಗೂರಿನಲ್ಲಿ ಹುಲಿ ಉಪಟಳ ಮಿತಿಮೀರಿದೆ. ಗ್ರಾಮದ ಬಳಿಯ ಜಮೀನುಗಳಲ್ಲಿ ಹುಲಿಗಳು ಆಶ್ರಯ ಪಡೆದುಕೊಳ್ಳುತ್ತಿವೆ. ಹಸು, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಮೇಲೆ ದಾಳಿ ಹೆಚ್ಚುತ್ತಿವೆ. ಮಂಚಹಳ್ಳಿ ಗ್ರಾಮದ ಜಮೀನುಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿವೆ. ಬೆಳೆಗಳನ್ನ ತಿಂದು ತೇಗಿದ್ದು, ಅಲ್ಲದೆ ಶೆಡ್ ಹಾಗೂ ಮೋಟಾರು ಪೈಪ್​ಗಳನ್ನ ತುಳಿದು ನಾಶಪಡಿಸುತ್ತಿವೆ.’

ಸಫಾರಿ ಬಂದ್ ಒಂದೇ ಪರಿಹಾರ

ಈ ಎಲ್ಲಾ ಕಾರಣಗಳಿಗೆ ಶಾಶ್ವತ ಪರಿಹಾರ ಅಂತ ಹೇಳಿದರೆ ಆರಂಭವಾಗಿರುವ ಸಫಾರಿಯನ್ನ ಬಂದ್ ಮಾಡುವುದು. ಜೊತೆಗೆ ಕೇರಳಕ್ಕೆ ಅಕ್ರಮವಾಗಿ ಸಾಗಾಟ ಆಗುತ್ತಿರುವ ಮರಳು ಮತ್ತು ಖನಿಜ ಸಂಪನ್ಮೂಲಗಳನ್ನ ತಡೆ ಹಿಡಿಯಬೇಕೆಂಬ ಆಶಯಗಳೊಂದಿಗೆ ನಾಳೆಯಿಂದ ಹೊನ್ನೂರು ಪ್ರಕಾಶ್ ಬಣ ಪ್ರತಿ ತಾಲೂಕಿನಲ್ಲಿ ಒಂದೊಂದು ದಿನ ಪ್ರತಿಭಟನೆ ನಡೆಸುವುದಕ್ಕೆ ಮುಂದಾಗಿದೆ.

ಇದನ್ನೂ ಓದಿ: ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ

ಒಟ್ಟಿನಲ್ಲಿ ರೆಸಾರ್ಟ್ ಮಾಲೀಕರು ಕೆಲ ಹಾಲಿ, ಮಾಜಿ ಶಾಸಕರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಸಫಾರಿ ಮತ್ತೆ ಪುನರಾರಂಭ ಮಾಡಿದ್ದು, ಇದೀಗ ಮತ್ತೆ ಸರ್ಕಾರ ಸಫಾರಿ ಬಂದ್ ಮಾಡಿ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾ, ಇಲ್ಲವಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *