ಬಜೆಟ್ ಮಧ್ಯೆ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ: ಹೋರಾಟಕ್ಕೆ ಸಜ್ಜಾದ ಅತಿಥಿ ಉಪನ್ಯಾಸಕರು, ಬೇಡಿಕೆ ಏನು? – Kannada News | Hubballi: Guest Lecturers Renew Fight for Job Security and Recruitment

ಹುಬ್ಬಳ್ಳಿ, ಮಾರ್ಚ್​ 05: ರಾಜ್ಯದಲ್ಲಿ ಇತ್ತೀಚೆಗೆ ನೇಮಕಾತಿಗಾಗಿ ಆಗ್ರಹಿಸಿ ಧಾರವಾಡದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿದೆ. ನೇಮಕಾತಿ ಮಾಡಿಕೊಳ್ಳದಿದ್ದರೆ ಮತ್ತೊಂದು ಸುತ್ತಿನ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ಸಾಲು ಸಾಲು ಹೋರಾಟಗಳನ್ನು ನಡೆಸಲು ಅನೇಕರು ಮುಂದಾಗಿದ್ದಾರೆ. ಇದರ ನಡುವೆ ಕಾಲೇಜು ಅತಿಥಿ ಉಪನ್ಯಾಸಕರು (Guest lecturers) ಸರ್ಕಾರದ ವಿರುದ್ಧ ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ಮುಂದಾಗಿದ್ದಾರೆ. ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡದ ಎಚ್ಚರಿಕೆ ನೀಡಿದ್ದಾರೆ.

ಕಳೆದ ತಿಂಗಳಷ್ಟೇ ಧಾರವಾಡದಲ್ಲಿ ಸರ್ಕಾರಿ ನೇಮಕಾತಿಗಾಗಿ ಆಗ್ರಹಿಸಿ ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದರು. ಸರ್ಕಾರ ಆದಷ್ಟು ಬೇಗನೆ ನೇಮಕಾತಿ ಮಾಡಿಕೊಳ್ಳೋದಾಗಿ ಹೇಳಿದೆ. ಆದರೆ ನೇಮಕಾತಿಗಾಗಿ ನೋಟಿಫಿಕೇಶನ್ ಹೊರಡಿಸದಿದ್ದರೆ ಮತ್ತೊಂದು ಸುತ್ತಿನ ಹೋರಾಟ ಮಾಡೋದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆ ಸರ್ಕಾರಕ್ಕೆ ಮತ್ತೊಂದು ತಲೆಬಿಸಿ ಶುರುವಾಗುವ ಸಾಧ್ಯತೆಯಿದೆ.

ನಮ್ಮ ಬೇಡಿಕೆಗೆ ಸ್ಪಂದಿಸಬೇಕು: ಇಲ್ಲದಿದ್ದರೆ ಹೋರಾಟ

ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಸೇವಾಭದ್ರತೆಗಾಗಿ ಆಗ್ರಹಿಸಿ ಮತ್ತೊಂದು ಸುತ್ತಿನ ಹೋರಾಟ ನಡೆಸಲು ಮುಂದಾಗಿದ್ದಾರೆ. ಈ ವರ್ಷ ಯುಜಿಸಿ ನಿಯಮಗಳ ನೆಪ ಹೇಳಿ 6 ಸಾವಿರಕ್ಕೂ ಹೆಚ್ಚು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿಲ್ಲ. ಅವರು ಮೂರು ತಿಂಗಳಿಂದ ಕೆಲಸವಿಲ್ಲದೆ ಖಾಲಿ ಕೂತಿದ್ದಾರೆ. ಕೂಡಲೇ ಅವರನ್ನು ನೇಮಕಾತಿ ಮಾಡಿಕೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ಕಳೆದ 20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದೇವೆ. ಇದೀಗ ಯುಜಿಸಿ ನಿಯಮಗಳ ನೆಪದಲ್ಲಿ ತಮ್ಮನ್ನು ಕೆಲಸಕ್ಕೆ ತಗೆದುಕೊಂಡಿಲ್ಲ. ತಮ್ಮ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ಬದುಕು ಹೇಗೆ ನಡೆಸಬೇಕು. ಸರ್ಕಾರ ದಯವಿಟ್ಟು ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಬಜೆಟ್​ನಲ್ಲಿ ಸರ್ಕಾರ ನಮಗೆ ಸಿಹಿ ಸುದ್ದಿ ನೀಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಅಂತ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ ಹನುಮಂತಗೌಡ ಹೇಳಿದ್ದಾರೆ.

ಇದನ್ನೂ ಓದಿ: ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು!

ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ತುಮಕೂರಿನಿಂದ ಬೆಂಗಳೂರುವರಗೆ ಪಾದಯಾತ್ರೆ ಮಾಡುತ್ತೇವೆ. ಬೆಂಗಳೂರು ಫ್ರೀಡಂ ಪಾರ್ಕ್​ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡುತ್ತೇವೆ. ಕಳೆದ ವರ್ಷ ಕಾಲೇಜು ಬಹಿಷ್ಕರಿಸಿ ಹೋರಾಟ ಮಾಡಿದ್ದೆವು. ಈ ಬಾರಿ ಕೂಡ ತರಗತಿ ಬಹಿಷ್ಕಾರ ಮಾಡಿ ಎಲ್ಲಾ ಅತಿಥಿ ಉಪನ್ಯಾಸಕರು ಹೋರಾಟ ಮಾಡ್ತೇವೆ ಅಂತ ಹೇಳಿದ್ದಾರೆ.

ಇನ್ನು ನಮಗೆ ಯುಜಿಸಿ ವೇತನ ಬೇಡ, ರಾಜ್ಯ ವೇತನ ನೀಡಿದರೆ ಸಾಕು. ಆದರೆ ಕಳೆದ 20ರಿಂದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ನಮ್ಮನ್ನು ಕೈಬಿಡದೇ 60 ವರ್ಷಗಳ ಕಾಲ ಸೇವಾಭದ್ರತೆ ನೀಡಬೇಕು. ಅದಕ್ಕಾಗಿ ಸರ್ಕಾರ ನಿಯಮವನ್ನು ರೂಪಿಸಬೇಕು ಅಂತ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಯುವಕರಿಗಾಗುತ್ತಿರುವ ಅನ್ಯಾಯ ನೋಡುತ್ತ ನಾವು ಸುಮ್ಮನಿರಲ್ಲ’: ಉದ್ಯೋಗಾಕಾಂಕ್ಷಿಗಳ ಸಮಸ್ಯೆ ಕುರಿತು ಪ್ರಧಾನಿಗೆ ಅರವಿಂದ ಬೆಲ್ಲದ್ ಪತ್ರ

ಒಂದು ಕಡೆ ನೇಮಕಾತಿಗಾಗಿ ದೊಡ್ಡ ಮಟ್ಟದ ಹೋರಾಟ ನಡೆದಿದ್ದರೆ, ಇನ್ನೊಂದಡೆ ಮತ್ತೊಮ್ಮೆ ಸರ್ಕಾರದ ವಿರುದ್ದ ಹೋರಾಟಕ್ಕೆ ಅತಿಥಿ ಉಪನ್ಯಾಸಕರು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಸಾಧಕ ಭಾದಕಗಳನ್ನು ನೋಡಿಕೊಂಡು ಕ್ರಮಕೈಗೊಳ್ಳಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *