ನವದೆಹಲಿ, ಏಪ್ರಿಲ್ 20: 12ನೇ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಮಹಿಳೆಯರಿಗೆ ಮೀಸಲಾತಿ ಮತ್ತು ಸಮಾನ ಅವಕಾಶ ನೀಡಿದ ಮೊದಲಿಗರು. ಅವರ ಆಶಯದಂತೆ ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆಗೆ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದ ಬೆಂಬಲ ನೀಡಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ. ಬಸವ ಜಯಂತಿಯ ಸಂದರ್ಭದಲ್ಲಿ ದೆಹಲಿಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯ ಮತ್ತು ಸಾಮಾಜಿಕ ಮೀಸಲಾತಿ ಕಲ್ಪಿಸುವ ಭಾರತ ಸರ್ಕಾರದ ಪ್ರಯತ್ನಕ್ಕೆ ಕನ್ನಡಿಗರ ಸಂಪೂರ್ಣ ಬೆಂಬಲವಿದೆ. ಬಸವಣ್ಣನವರ ಹೋರಾಟಕ್ಕೆ ಗೌರವ ಸಲ್ಲಿಸಲು ಇದು ಸೂಕ್ತ ಸಮಯ ಎಂದು ತಿಳಿಸಿದರು.
ಇದೇ ವೇಳೆ, ತಮ್ಮ ಮೇಲೆ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಪ್ರಕರಣ ಈಗ ತನಿಖೆಯ ಹಂತದಲ್ಲಿದೆ, ಹಾಗಾಗಿ ಆ ಬಗ್ಗೆ ಹೆಚ್ಚು ಮಾತನಾಡಲ್ಲ. ಈಗಾಗಲೇ ಪೊಲೀಸರಿಗೆ ಈ ಬಗ್ಗೆ ದೂರು ನೀಡಲಾಗಿದೆ. ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭಿಸಿದ ನಂತರ ನನ್ನನ್ನು ಹತ್ತಿಕ್ಕಲು ಇಂತಹ ಪಿತೂರಿಗಳು ಮತ್ತು ಬೆದರಿಕೆಗಳು ನಿರಂತರವಾಗಿ ಬರುತ್ತಿವೆ ಎಂದು ಆರೋಪಿಸಿದರು.
ಸತ್ಯದ ಹಾದಿಯಲ್ಲಿ ನಡೆಯುವಾಗ ಇಂತಹ ಅಡೆತಡೆಗಳು ಸಹಜ. 12ನೇ ಶತಮಾನದಿಂದಲೂ ಸಮಾಜ ಸುಧಾರಕರ ವಿರುದ್ಧ ಇಂತಹ ಪಿತೂರಿಗಳು ನಡೆಯುತ್ತಲೇ ಬಂದಿವೆ. ಸದ್ಯ ಉತ್ತರ ಭಾರತದ ಧಾರ್ಮಿಕ ಪ್ರವಾಸದಲ್ಲಿರುವ ನಾನು, ಇಂತಹ ಬೆದರಿಕೆಗಳಿಗೆ ಮಣಿಯುವುದಿಲ್ಲ. ಪ್ರಕರಣದ ತನಿಖೆ ನಡೆಯಲಿ, ಸತ್ಯ ಹೊರಬರಲಿದೆ. ನನ್ನ ಮೀಸಲಾತಿ ಹೋರಾಟ ಮಾತ್ರ ಎಂದಿನಂತೆ ಮುಂದುವರಿಯಲಿದೆ ಎಂದು ಸ್ವಾಮೀಜಿ ದೆಹಲಿಯಲ್ಲಿ ದೃಢವಾಗಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ