ಬಹಳ ಹಿಂದೆಯೇ ನಿವೃತ್ತಿಯ ಮನಸ್ಸು ಮಾಡಿದ್ದರು ಅಣ್ಣಾವ್ರು ಆದರೆ ಸಾಧ್ಯವಾಗಲಿಲ್ಲ – Kannada News | Dr Rajkumar thought about retirement but it did not happen

ಐದು ದಶಕಗಳ ಕಾಲ ಬೆಳ್ಳಿ ಪರದೆಯ ಮೇಲೆ ರಾರಾಜಿಸಿದ, ಈಗಲೂ ಸಹ ಕನ್ನಡಿಗರ ಮನಸ್ಸುಗಳಲ್ಲಿ ಅಚ್ಚಳಿಯದೆ ನೆಲೆಸಿರುವ ನಟ ಡಾ ರಾಜ್​​ಕುಮಾರ್ (Dr Rajkumar). 1954ರಲ್ಲಿ ‘ಬೇಡರ ಕಣ್ಣಪ್ಪ’ ಸಿನಿಮಾ ಮೂಲಕ ನಾಯಕ ನಟನಾಗಿ ನಟಿಸಲು ಆರಂಭಿಸಿದ ರಾಜ್​ಕುಮಾರ್ ಅವರು 2000 ರಲ್ಲಿ ಬಿಡುಗಡೆ ಆದ ‘ಶಬ್ದವೇಧಿ’ ಸಿನಿಮಾದ ವರೆಗೂ ಸಹ ಸ್ಟಾರ್ ನಟನಾಗಿಯೇ ಉಳಿದುಕೊಂಡಿದ್ದರು. ಕೋಟ್ಯಂತರ ಸಿನಿಮಾ ಪ್ರೇಮಿಗಳನ್ನು ರಂಜಿಸಿದರು. ಆದರೆ ಡಾ ರಾಜ್​​ಕುಮಾರ್ ಅವರಿಗೆ ಒಂದು ಹಂತದಲ್ಲಿ ನಿವೃತ್ತಿಯ ಮನಸ್ಸಾಗಿತ್ತು. ಅವರು ಬಹುವಾಗಿ ಪ್ರೀತಿಸುತ್ತಿದ್ದ ನಟನೆಯಿಂದ ಹಿಂದೆ ಸರಿಯುವ ಮನಸ್ಸು ಮಾಡಿದ್ದರು. ಕೊನೆಯ ಸಿನಿಮಾನಲ್ಲಿ ನಟಿಸುವ ಹಲವು ವರ್ಷಗಳ ಹಿಂದೆಯೇ ಅವರು ನಿವೃತ್ತಿ ಪಡೆಯುವ ಆಸೆಯಾಗಿತ್ತು. ಆದರೆ ಅದು ಅವರ ಆಪ್ತರ ಕಾರಣದಿಂದಾಗಿ ಸಾಧ್ಯವಾಗಲಿಲ್ಲ.

ಡಾ ರಾಜ್​​ಕುಮಾರ್ ಅವರು ‘ಶಬ್ದವೇಧಿ’ ಸಿನಿಮಾನಲ್ಲಿ ನಟಿಸಿದಾಗ ಅವರಿಗೆ 71 ವರ್ಷ ವಯಸ್ಸು. ಆದರೂ ಸಹ ಆ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಅದ್ಭುತವಾಗಿ ನಟಿಸಿದ್ದಲ್ಲದೆ ಸಿನಿಮಾವನ್ನು ಸೂಪರ್ ಹಿಟ್ ಆಗುವಂತೆ ಮಾಡಿದ್ದರು. ಅಣ್ಣಾವ್ರು ಎಷ್ಟೇ ಅದ್ಭುತ ನಟನಾಗಿದ್ದರೂ, ನಟನೆಯನ್ನು ಅಪಾರವಾಗಿ ಪ್ರೀತಿಸಿದ್ದರೂ ಸಹ ಒಂದು ಹಂತದ ಬಳಿಕ ಅವರ ಮಾನಸಿಕ ಉತ್ಸಾಹಕ್ಕೆ ದೇಹ ಜೊತೆಗೊಡುತ್ತಿರಲಿಲ್ಲ. ಹಾಗಾಗಿ ಅವರು ನಿವೃತ್ತಿಯ ಮನಸ್ಸು ಮಾಡಿದ್ದರು. ಅದೂ ‘ಶಬ್ದವೇಧಿ’ ಸಿನಿಮಾ ಬಡುವ ಬಹಳ ಮುಂಚೆಯೇ ನಿವೃತ್ತಿಯ ಬಗ್ಗೆ ಆಲೋಚಿಸಿದ್ದರು.

ರಾಜ್​ಕುಮಾರ್ ಅವರು 90ರ ದಶಕದಲ್ಲಿ ಖ್ಯಾತ ಚಿತ್ರಸಾಹಿತಿ ಚಿ ಉದಯಶಂಕರ್ ಅವರಿಗೆ ಒಂದು ಸಂದರ್ಶನ ನೀಡಿದ್ದರು. ಸಂದರ್ಶನದಲ್ಲಿ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಉದಯಶಂಕರ್ ಅವರು, ಆಗಷ್ಟೆ ಬಿಡುಗಡೆ ಆಗಿದ್ದ ‘ಜೀವನ ಚೈತ್ರ’ ಸಿನಿಮಾದ ನಟನೆಯ ಬಗ್ಗೆ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸುತ್ತಾ ಮಾತನಾಡಿದ ರಾಜ್​​ಕುಮಾರ್ ಅವರು, ‘ನನಗೆ ಅದರ ರಹಸ್ಯವೆಲ್ಲ ಗೊತ್ತಿಲ್ಲ, ಹೇಗೋ ಜನರ ಅಪೇಕ್ಷೆ ನನ್ನ ಬಗ್ಗೆ, ನನ್ನ ನಟನೆ ಬಗ್ಗೆ ಇದೆ, ಜನರ ಅಪೇಕ್ಷೆ, ಪ್ರೀತಿ, ಗೌರವಗಳು ಇರುವಾಗಲೇ ಮೆಲ್ಲಗೆ ಪರದೆಯ ಹಿಂದೆ ಸರಿದುಬಿಡುವುದು ಉತ್ತಮ ಎಂದುಕೊಂಡಿದ್ದೆ’ ಎಂದಿದ್ದರು.

ಇದನ್ನೂ ಓದಿ:ಶೆಟ್ಟಿ ಗ್ಯಾಂಗ್ ಬಿಟ್ಟು ಕನ್ನಡದ ಕೆಲವರಿಗೆ ಮಾತ್ರ ಮದುವೆ ಆಹ್ವಾನ ನೀಡಿದ ರಶ್ಮಿಕಾ

‘ಆದರೆ ನೀವುಗಳು, ಇನ್ನೂ ಕೆಲವು ಆಪ್ತರು ನನ್ನ ಹುರಿದುಂಬಿಸಿ ಮತ್ತೆ ನಟಿಸುವಂತೆ ಮಾಡಿದಿರಿ. ನಿಮ್ಮಗಳ ಒತ್ತಾಸೆ ಮತ್ತು ಪ್ರೇಕ್ಷಕರ ಪ್ರಭುಗಳ ಒತ್ತಾಸೆಯಿಂದ ನಾನು ನಟಿಸಿದೆ. ಆದರೆ ಈ ಬಾರಿ (ಜೀವನ ಚೈತ್ರ ಸಿನಿಮಾ ಸಮಯದಲ್ಲಿ) ನಟಿಸುವಾಗ ಹೆಚ್ಚೇ ಭಯ ಆಗಿತ್ತು. ಏಕೆಂದರೆ ಎರಡು ವರ್ಷಗಳ ಕಾಲ ನಾನು ಕ್ಯಾಮೆರ ಎದುರು ನಿಂತಿರಲಿಲ್ಲ, ಹಾಗಾಗಿ ತುಸು ಹೆಚ್ಚೇ ಭಯ ಆಯ್ತು, ಆದರೆ ವೃತ್ತಿ ಬದುಕಿನ ಆರಂಭದಿಂದಲೂ ನನ್ನನ್ನು ಮುಂದೂಡಿಕೊಂಡು ಬರುತ್ತಿರುವ ಶಕ್ತಿಯೊಂದು ಈ ಸಿನಿಮಾದಲ್ಲಿಯೂ ನನಗೆ ಶಕ್ತಿ ತುಂಬಿ ನಟಿಸುವಂತೆ ಮಾಡಿತು’ ಎಂದಿದ್ದರು.

ಅಂದಹಾಗೆ ‘ಜೀವನ ಚೈತ್ರ’ ಸಿನಿಮಾ ಬಿಡುಗಡೆ ಆಗಿದ್ದು 1992 ರಲ್ಲಿ. ಆಗಲೇ ಅಣ್ಣಾವ್ರು ನಿವೃತ್ತಿಯ ಮನಸ್ಸು ಮಾಡಿದ್ದರು. ‘ಜೀವನ ಚೈತ್ರ’ ಸಿನಿಮಾನಲ್ಲಿ ನಟಿಸುವುದಕ್ಕೆ ಮುಂಚೆ ಬರೋಬ್ಬರಿ ಎರಡು ವರ್ಷ ಅವರು ಯಾವುದೇ ಸಿನಿಮಾನಲ್ಲಿ ನಟಿಸಿರಲಿಲ್ಲ. ‘ಜೀವನ ಚೈತ್ರ’ ಸಿನಿಮಾನಲ್ಲಿ ನಟಿಸಿದ ಬಳಿಕ ಅಣ್ಣಾವ್ರು ನಾಯಕನಾಗಿ ನಟಿಸಿದ್ದು ಮೂರೇ ಸಿನಿಮಾಗಳಲ್ಲಿ 1993 ರಲ್ಲಿ ಬಿಡುಗಡೆ ಆದ ‘ಆಕಸ್ಮಿಕ’, 1994ರಲ್ಲಿ ಬಿಡುಗಡೆ ಆದ ‘ಒಡಹುಟ್ಟಿದವರು’ ಮತ್ತು 2000 ರಲ್ಲಿ ಬಿಡುಗಡೆ ಆದ ಅವರ ಕೊನೆಯ ಸಿನಿಮಾ ‘ಶಬ್ದವೇಧಿ’.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *