ಬಹಿರಂಗವಾಗಿ ವಿಜಯ್, ತ್ರಿಷಾ ಬಗ್ಗೆ ಹಾಸ್ಯ ಮಾಡಿದ ಮಲಯಾಳಂ ನಟ; ವಿಡಿಯೋ ವೈರಲ್ – Kannada News | Dhyan Sreenivasan jokes on CM Vijay Trisha Krishnan Navya Nair in Visitor Movie promotion

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಹಾಗೂ ನಟಿ ತ್ರಿಷಾ ಕೃಷ್ಣನ್ ನಡುವಿನ ಸ್ನೇಹ ಮತ್ತು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದೀಗ ಮಲಯಾಳಂನ ಖ್ಯಾತ ನಟ ಧ್ಯಾನ್ ಶ್ರೀನಿವಾಸನ್ (Dhyan Sreenivasan) ಅವರು ಈ ಜೋಡಿಯ ಕಾಲೆಳೆಯುವ ಮೂಲಕ ಸಖತ್ ಸುದ್ದಿಯಾಗಿದ್ದಾರೆ. ತಮ್ಮ ಮುಂಬರುವ ‘ವಿಸಿಟರ್’ (Visitor) ಸಿನಿಮಾದ ಪ್ರಚಾರದ ವೇಳೆ ಧ್ಯಾನ್ ಮಾಡಿದ ತಮಾಷೆಯಿಂದಾಗಿ ಹಲವರಿಗೆ ಅಚ್ಚರಿ ಆಗಿದೆ.

‘ನಾನು ಕೇರಳದ ಮುಖ್ಯಮಂತ್ರಿ ಆಗ್ತೀನಿ’

ಕಾರ್ಯಕ್ರಮದಲ್ಲಿ ಮಾತನಾಡಿದ ಧ್ಯಾನ್, ‘ಇತ್ತೀಚೆಗೆ ನಾನು ಸಿನಿಮಾಗಳಿಗಿಂತ ಹೆಚ್ಚಾಗಿ ಸ್ಟೇಜ್ ಶೋಗಳು ಮತ್ತು ಜಾಹೀರಾತುಗಳ ಕಡೆ ಗಮನ ಹರಿಸುತ್ತಿದ್ದೇನೆ. ನಾನು ಆಸ್ಟ್ರೇಲಿಯಾದಲ್ಲಿ ಕಾರ್ಯಕ್ರಮವೊಂದನ್ನು ಮಾಡುತ್ತಿದ್ದಾಗ, ನಟ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದರು. ಅದನ್ನು ನೋಡಿ ನಾನು ಮುಂದಿನ 15 ವರ್ಷಗಳ ಕಾಲ ಅವರ ಹಾದಿಯನ್ನೇ ಅನುಸರಿಸಲು ನಿರ್ಧರಿಸಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಮುಂದುವರಿದು ಮಾತನಾಡಿದ ಅವರು, ‘ನನ್ನ ಗೆಳೆಯ ಅಜು ವರ್ಗೀಸ್ ನನಗೆ ಮೊದಲು ಕಲಾವಿದರ ಸಂಘದ ಪ್ರೆಸಿಡೆಂಟ್ ಆಗು, ಆಮೇಲೆ ಸಮಾಜ ಸೇವೆ ಮಾಡಿ ಜನರನ್ನು ಒಲಿಸಿಕೊಂಡು ಸಿಎಂ ಆಗು ಎಂದು ಸಲಹೆ ನೀಡಿದ್ದ. ಆದರೆ ಸ್ವಲ್ಪ ಸಮಯದ ನಂತರ ಮತ್ತೆ ಫೋನ್ ಮಾಡಿ, ಕಲಾವಿದರ ಸಂಘದಲ್ಲಿ ಭಾರಿ ವಿವಾದಗಳು ನಡೆಯುತ್ತಿವೆ. ನೀನು ಸಿಎಂ ಅಥವಾ ಪ್ರೆಸಿಡೆಂಟ್ ಯಾವುದೂ ಆಗಬೇಡ. ನಿನಗೆ ಗವರ್ನರ್ ಹುದ್ದೆಯೇ ಬೆಸ್ಟ್. ಅಲ್ಲಿ ಅಷ್ಟಾಗಿ ಕೆಲಸ ಇರಲ್ಲ ಅಂತ ಕಾಲೆಳೆದಿದ್ದ’ ಎಂದಾಗ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದರು.

ನವ್ಯಾ ನಾಯರ್ ಮುಂದಿನ ಸೀಟಿನಲ್ಲಿ ಕಣ್ಣೀರು ಹಾಕ್ತಾರೆ:

ಅಷ್ಟಕ್ಕೇ ನಿಲ್ಲಿಸದ ಧ್ಯಾನ್ ಶ್ರೀನಿವಾಸನ್, ತಮ್ಮ ‘ವಿಸಿಟರ್’ ಸಿನಿಮಾದ ನಾಯಕಿ ನವ್ಯಾ ನಾಯರ್ ಅವರ ಕಾಲೆಳೆದರು. ‘ನಾವು ತುಂಬಾ ವರ್ಷಗಳ ನಂತರ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ನವ್ಯಾಗೆ ಈಗ ಮದುವೆಯಾಗಿ ಒಬ್ಬ ಮಗನಿದ್ದಾನೆ. ಆದರೂ ಪರವಾಗಿಲ್ಲ, ನಾನು ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ನವ್ಯಾ ನಾಯರ್ ಮುಂದಿನ ಸಾಲಿನಲ್ಲಿ ಸೀರೆ ಧರಿಸಿ, ಕಣ್ಣಲ್ಲಿ ಆನಂದ ಬಾಷ್ಪ ಸುರಿಸುತ್ತಾ ಕುಳಿತುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ’ ಎಂದರು.

ಇದಕ್ಕೆ ನವ್ಯಾ ನಾಯರ್ ಕೂಡ ಅಷ್ಟೇ ತಮಾಷೆಯಾಗಿ ಪ್ರತಿಕ್ರಿಯಿಸಿ, ‘ಚಿಂತೆ ಮಾಡಬೇಡ ಧ್ಯಾನ್, ನೀನು ಸಿಎಂ ಆದಾಗ ನಿನ್ನ ಆಸೆಯಂತೆಯೇ ನಾನು ಗ್ರೀನ್ ಬಾರ್ಡರ್ ಇರುವ ಬಿಳಿ ಸೀರೆ ಮತ್ತು ವಜ್ರದ ಹಾರ ಧರಿಸಿ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ಕಣ್ಣೀರು ಹಾಕುತ್ತಾ ನಿನ್ನ ಪರವಾಗಿ ಜಯಘೋಷ ಕೂಗುತ್ತೇನೆ. ಆದರೆ ನನಗೆ ಮುಂಭಾಗದ ಸಾಲಿನಲ್ಲಿ ಸೀಟು ಬುಕ್ ಮಾಡ್ತೀಯಾ ತಾನೇ?’ ಎಂದು ಕಾಲೆಳೆದರು.

ಇದನ್ನೂ ಓದಿ: ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ವಿಜಯ್ ಅವರಲ್ಲಿ ಕ್ಷಮೆ ಕೇಳಿದ ಗೆಳೆಯ ಅಜು:

ಧ್ಯಾನ್ ಶ್ರೀನಿವಾಸನ್ ಅವರ ಈ ಮಾತುಗಳ ನಂತರ ಸ್ಟೇಜ್‌ಗೆ ಬಂದ ಅಜು ವರ್ಗೀಸ್ ಅವರು ತಮಿಳು ನಟ ವಿಜಯ್ ಅವರಲ್ಲಿ ನೇರವಾಗಿಯೇ ಕ್ಷಮೆ ಕೇಳಿದರು. ‘ಒಂದು ವಿಷಯಂತೂ ಗ್ಯಾರಂಟಿ, ಇನ್ಮುಂದೆ ನಾನು ತಮಿಳುನಾಡಿಗೆ ಕಾಲಿಡಲು ಸಾಧ್ಯವಿಲ್ಲ. ನನ್ನ ಪ್ರೀತಿಯ ಸಿಎಂ ವಿಜಯ್ ಸರ್, ನನ್ನ ಈ ಹುಚ್ಚು ಗೆಳೆಯನನ್ನು ದಯವಿಟ್ಟು ಕ್ಷಮಿಸಿ. ಅವನಿಗೆ ತಲೆ ಕೆಟ್ಟಿದೆ, ನಾನೇನೂ ಮಾಡಲು ಸಾಧ್ಯವಿಲ್ಲ’ ಎಂದು ಮನವಿ ಮಾಡಿಕೊಂಡರು.

ಈ ರೀತಿ ತಮಾಷೆ ಮಾಡಲು ಕಾರಣ ಏನು?

ಧ್ಯಾನ್ ಶ್ರೀನಿವಾಸನ್ ಅವರ ಈ ತಮಾಷೆಗೆ ಕಾರಣ ಇದೆ. ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವದಂತಿಗಳ ನಡುವೆಯೇ, ತ್ರಿಷಾ ಜೊತೆಗಿನ ವಿಜಯ್ ಸ್ನೇಹ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇತ್ತೀಚೆಗೆ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ, ತ್ರಿಷಾ ಅವರು ವಿಜಯ್ ಅವರ ತಂದೆ-ತಾಯಿಯ ಜೊತೆ ಮುಂಭಾಗದ ಸಾಲಿನಲ್ಲಿ ಕುಳಿತುಕೊಂಡು ಭಾವುಕರಾಗಿದ್ದರು. ಇದೇ ಘಟನೆಯನ್ನು ಧ್ಯಾನ್ ಶ್ರೀನಿವಾಸನ್ ಈಗ ತಮ್ಮದೇ ಶೈಲಿಯಲ್ಲಿ ಅಣಕಿಸಿದ್ದು, ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *