ಪ್ರಜ್ವಲ್ ದೇವರಾಜ್ (Prajwal Devaraj), ರಾಜ್ ಬಿ ಶೆಟ್ಟಿ ಸೇರಿದಂತೆ ಇನ್ನೂ ಅನೇಕ ಪ್ರತಿಭಾವಂತ ನಟರು ನಟಿಸಿ, ಗುರುದತ್ ಗಾಣಿಗ ನಿರ್ದೇಶನ ಮಾಡಿರುವ ‘ಕರಾವಳಿ’ ಸಿನಿಮಾ ಪ್ರಾರಂಭವಾದಾಗಿನಿಂತಲೂ ಒಂದಲ್ಲ ಒಂದು ಕಾರಣಕ್ಕೆ ಸದ್ದು, ಸುದ್ದಿ ಮಾಡುತ್ತಲೇ ಇದೆ. ಸಿನಿಮಾದ ಚಿತ್ರೀಕರಣ ಶುರುವಾಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಆದರೆ ಸಿನಿಮಾದ ಬಿಡುಗಡೆ ತಡವಾಗುತ್ತಲೇ ಬರುತ್ತಿತ್ತು. ಇದೀಗ ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಕಳೆದ ವರ್ಷ ‘ಸು ಫ್ರಂ ಸೋ’ ಸಿನಿಮಾ ಬಿಡುಗಡೆ ಆಗಿದ್ದ ದಿನದಂದೇ ಇದೀಗ ‘ಕರಾವಳಿ’ ಸಿನಿಮಾ ಸಹ ರಿಲೀಸ್ ಆಗಲಿದೆ.
‘ಕರಾವಳಿ’ ಸಿನಿಮಾವು ಇದೇ ಜುಲೈ 24ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ. ಹೆಸರೇ ಸೂಚಿಸುತ್ತಿರುವಂತೆ ಇದು ಕರಾವಳಿ ಭಾಗದ ಕತೆಯನ್ನು ಒಳಗೊಂಡಿದೆ. ಕರಾವಳಿಯ ಕಂಬಳ, ದೈವ ಇನ್ನೂ ಹಲವು ವಿಷಯಗಳನ್ನು ಸಿನಿಮಾ ಒಳಗೊಂಡಿರಲಿದೆ. ಸಿನಿಮಾದ ಪೋಸ್ಟರ್ಗಳು, ಟೀಸರ್ಗಳು ಈಗಾಗಲೇ ಬಹಳ ಗಮನ ಸೆಳೆದಿವೆ. ಇದೀಗ ಸಿನಿಮಾದ ಬಿಡುಗಡೆಯನ್ನು ಘೋಷಣೆ ಮಾಡುವ ಪ್ರೇಕ್ಷಕರನ್ನು ಒಂದೊಳ್ಳೆ ಸಿನಿಮಾ ಅನುಭೂತಿಗೆ ಚಿತ್ರತಂಡ ಅಣಿಗೊಳಿಸಿದೆ.
ಇದನ್ನೂ ಓದಿ:ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ನಟನೆಯ ‘ಕರಾವಳಿ’ ಸಿನಿಮಾಗೆ ಶೂಟಿಂಗ್ ಪೂರ್ಣ
‘ಕರಾವಳಿ’ ಸಿನಿಮಾನಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ಜೊತೆಗೆ ರಮೇಶ್ ಇಂದಿರಾ, ಮಿತ್ರ ಅವರುಗಳು ಸಹ ಪ್ರಮುಖವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಅವರು ಈ ಸಿನಿಮಾನಲ್ಲಿ ಮಾವೀರ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಸಣ್ಣ ಟೀಸರ್ನಲ್ಲಿ ಸಿನಿಮಾದ ಮೂಡ್ ಬಗ್ಗೆ ಸಣ್ಣ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿದ್ದು, ಈ ಸಿನಿಮಾ ಆಕ್ಷನ್, ಸಸ್ಪೆನ್ಸ್ ಜೊತೆಗೆ ದ್ವೇಷ, ಅಸೂಯೆ, ಸೇಡಿನ ಕತೆಯನ್ನೂ ಒಳಗೊಂಡಿರಲಿದೆ.
‘ಕರಾವಳಿ’ ಸಿನಿಮಾವನ್ನು ಗುರುದತ್ ಗಾಣಿಗಾ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. 2024 ಕ್ಕೆ ಸಿನಿಮಾದ ಮುಹೂರ್ತ ನೆರವೇರಿತ್ತು. ಸಿನಿಮಾ ಪ್ರಾರಂಭವಾದಾಗ ಇದು ಮನುಷ್ಯ ಮತ್ತು ಪ್ರಾಣಿಯ ನಡುವಿನ ಸಂಘರ್ಷದ ಕತೆ ಎನ್ನಲಾಗಿತ್ತು. ಇದೀಗ ಕೊನೆಗೂ ಎರಡು ವರ್ಷಗಳ ಬಳಿಕ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಚಿತ್ರತಂಡವು ಬಿಡುಗಡೆ ದಿನಾಂಕ ಘೋಷಿಸಿದೆ. ಸಿನಿಮಾ ಜುಲೈ 24ಕ್ಕೆ ತೆರೆಗೆ ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
