Headlines

ಬಾಂಗ್ಲಾ ಗಡಿಗೆ ಫೆನ್ಸಿಂಗ್​ನಿಂದ ಹಿಡಿದು ಬಿಎನ್​ಎಸ್ ಜಾರಿವರೆಗೆ ಸುವೇಂದು ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಧಾರಗಳಿವು – Kannada News | Bengal CM Suvendu Adhikari Announces Major Decisions After First Cabinet Meeting

ಕೋಲ್ಕತಾ, ಮೇ 11: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮೊನ್ನೆ ಅಧಿಕಾರ ಸ್ವೀಕರಿಸಿದ ಸುವೇಂದು ಅಧಿಕಾರಿ (Suvendu Adhikari) ಅವರು, ಇಂದು ತಮ್ಮ ಮೊದಲ ಸಚಿವ ಸಂಪುಟ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಎಲ್ಲರಿಗಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದು, ಬಂಗಾಳ ಚುನಾವಣೆಯಲ್ಲಿ (West Bengal Assembly Elections) ಇದೇ ಮೊದಲ ಬಾರಿಗೆ ಹಿಂಸಾಮುಕ್ತವಾಗಿ ನೆರವೇರಲು ನೆರವಾದ ಚುನಾವಣಾ ಆಯೋಗ, ಪೊಲೀಸ್, ಸಿಎಪಿಎಫ್ ಹಾಗೂ ಸಾರ್ವಜನಿಕರಿಗೆ ಧನ್ಯವಾದ ಕೂಡ ಅರ್ಪಿಸಿದ್ದಾರೆ.

ಬಾಂಗ್ಲಾ ಗಡಿಗೆ ಫೆನ್ಸಿಂಗ್ ಹಾಕುವ ಕಾರ್ಯ

ಸುವೇಂದು ಅಧಿಕಾರಿ ಅವರ ಕ್ಯಾಬಿನೆಟ್ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಲ್ಲಿ ಬಿಎಸ್​ಎಫ್​ಗೆ 600 ಎಕರೆ ಜಾಗವನ್ನು ಹಸ್ತಾಂತರಿಸಲು ಸಮ್ಮತಿಯೂ ಒಂದು. ‘45 ದಿನದಲ್ಲಿ ಬಿಎಸ್​ಎಫ್​ಗೆ ಜಮೀನು ನೀಡುತ್ತೇವೆ’ ಎಂದು ಅಧಿಕಾರಿ ಹೇಳಿದ್ದಾರೆ. ಬಾಂಗ್ಲಾದೇಶ ಗಡಿಭಾಗದಲ್ಲಿ ಫೆನ್ಸಿಂಗ್ ಹಾಕುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಈ ಕ್ರಮದಿಂದ ಅಕ್ರಮ ಬಾಂಗ್ಲಾದೇಶೀ ವಲಸೆಗಳನ್ನು ತಪ್ಪಿಸಬಹುದು.

ಇದನ್ನೂ ಓದಿ: ಚಿನ್ನ ಕೊಳ್ಳಬೇಡಿ, ವರ್ಕ್ ಫ್ರಂ ಹೋಮ್ ಮಾಡಿ, ಎಣ್ಣೆ ಹೆಚ್ಚು ಬಳಸದಿರಿ ಎಂದೆಲ್ಲಾ ಮೋದಿ ಅಂದಿದ್ದು ಯಾಕೆ? ಇಲ್ಲಿದೆ ನಿಜ ಕಾರಣ

ಸುವೇಂದು ಅಧಿಕಾರಿ ಕ್ಯಾಬಿನೆಟ್ ಕೈಗೊಂಡ ಪ್ರಮುಖ ನಿರ್ಧಾರಗಳಿವು

  1. ಆಯುಷ್ಮಾನ್ ಭಾರತ್ ಜಾರಿ: ಕೇಂದ್ರ ಸರ್ಕಾರದ ಪ್ರಮುಖ ಆರೋಗ್ಯ ಯೋಜನೆಯಾದ ‘ಆಯುಷ್ಮಾನ್ ಭಾರತ್’ ಅನ್ನು ಪಶ್ಚಿಮ ಬಂಗಾಳದಲ್ಲಿ ತಕ್ಷಣದಿಂದಲೇ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ಸೇವೆ ಲಭ್ಯವಾಗಲಿದೆ.
  2. ಪಿಎಂ ಕಿಸಾನ್ ಸಮ್ಮಾನ್ ನಿಧಿ: ಬಂಗಾಳದ ರೈತರಿಗೆ ತಲುಪಬೇಕಿದ್ದ ಪಿಎಂ ಕಿಸಾನ್ ಯೋಜನೆಯ ಬಾಕಿ ಹಣ ಮತ್ತು ಮುಂದಿನ ಕಂತುಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು.
  3. ಅನ್ನಪೂರ್ಣ ಯೋಜನೆ: ರಾಜ್ಯದ ಬಡವರಿಗೆ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಹೊಸ ಪಡಿತರ ಯೋಜನೆಯನ್ನು ಘೋಷಿಸಲಾಗಿದೆ.
  4. ಗಡಿ ಭದ್ರತೆ: ಬಾಂಗ್ಲಾದೇಶ ಗಡಿಯಲ್ಲಿ ಒಳನುಸುಳುವಿಕೆಯನ್ನು ತಡೆಯಲು ಫೆನ್ಸಿಂಗ್ ಸೇರಿದಂತೆ ಭದ್ರತೆ ಹೆಚ್ಚಿಸಲು ಕ್ರಮ.
  5. ಮಹಿಳಾ ಸುರಕ್ಷತೆ ಮತ್ತು ಸಬಲೀಕರಣ: ಮಹಿಳೆಯರ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲೂ ವಿಶೇಷ ಕಾರ್ಯಪಡೆ ರಚನೆ ಮತ್ತು ಉದ್ಯೋಗಾವಕಾಶಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
  6. ಭ್ರಷ್ಟಾಚಾರ ಮುಕ್ತ ಆಡಳಿತ: ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣಗಳ ಬಗ್ಗೆ ಸಮಗ್ರ ತನಿಖೆ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲು ಸಂಪುಟ ನಿರ್ಧರಿಸಿದೆ.
  7. ಕೈಗಾರಿಕಾ ಅಭಿವೃದ್ಧಿ: ರಾಜ್ಯಕ್ಕೆ ಹೊಸ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸಲು ಏಕಗವಾಕ್ಷಿ ಯೋಜನೆಯನ್ನು ಬಲಪಡಿಸುವುದು.
  8. ಸೆನ್ಸಸ್: ಪಶ್ಚಿಮ ಬಂಗಾಳದಲ್ಲಿ ಸೆನ್ಸಸ್ ಆಪರೇಶನ್ಸ್ ಅನ್ನು ಆರಂಭಿಸಲು ಆಡಳಿತಾತ್ಮಕ ಆದೇಶ ನೀಡಲಾಗಿದೆ.
  9. ಅಧಿಕಾರಿಗಳ ತರಬೇತಿ: ಐಎಎಸ್, ಐಪಿಎಸ್, ಡಬ್ಲ್ಯುಬಿಪಿಎಸ್ ಅದಿಕಾರಿಗಳನ್ನು ತರಬೇತಿಗಾಗಿ ಇತರ ರಾಜ್ಯಗಳಿಗೆ ಕಳುಹಿಸುವ ನೀತಿಯನ್ನು ಮರಳಿ ತರಲಾಗಿದೆ. ಹಿಂದಿನ ಸರ್ಕಾರವು ಅಧಿಕಾರಿಗಳನ್ನು ಹೊರರಾಜ್ಯಗಳಲ್ಲಿ ತರಬೇತಿ ನೀಡಲು ಅನುಮತಿಸಿರಲಿಲ್ಲ.
  10. ಉದ್ಯೋಗ ನೇಮಕಾತಿ: ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕಾತಿ ಅವಕಾಶಗಳಿಂದ ವಂಚಿತರಾದ ಅಭ್ಯರ್ಥಿಗಳಿಗೆ ಐದು ವರ್ಷ ವಯಸ್ಸಿನ ವಿನಾಯಿತಿಯನ್ನು ಘೋಷಿಸಲಾಗಿದೆ.
  11. ಬಿಎನ್​ಎಸ್ ಜಾರಿ: ಕೇಂದ್ರ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆಯನ್ನು ಹಿಂದಿನ ಸರ್ಕಾರ ಅಳವಡಿಸಿರಲಿಲ್ಲ. ಈಗ ಸುವೇಂದು ಅವರ ಕ್ಯಾಬಿನೆಟ್ ಬಿಎನ್​ಎಸ್ ಜಾರಿಗೆ ನಿರ್ದೇಶನ ನೀಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *