ಬಾಗಲಕೋಟೆಯಲ್ಲಿ ದಾಳಿಂಬೆ ಬೆಳೆಗೆ ಅಂಡಮಾರಿ ರೋಗದ ಕಂಟಕ
ಬಾಗಲಕೋಟೆ, ಜೂನ್ 27: ಒಂದು ಕಡೆ ಮುಂಗಾರು ಕೈಕೊಟ್ಟು ಬರದ ಛಾಯೆ ಆವರಿಸಿದ್ದರೆ, ಮತ್ತೊಂದೆಡೆ ದೇಶ-ವಿದೇಶಗಳಿಗೆ ರಫ್ತಾಗುವ ಬಾಗಲಕೋಟೆಯ (Bagalakot) ಹೆಮ್ಮೆಯ ದಾಳಿಂಬೆ ಬೆಳೆಗೆ ಭೀಕರ ‘ದುಂಡಾಣು ಅಂಡಮಾರಿ’ (ಬ್ಯಾಕ್ಟೀರಿಯಲ್ ಬ್ಲೈಟ್) ರೋಗದ ಕಂಟಕ ಎದುರಾಗಿದೆ. ತೀವ್ರ ಬರದ ನಡುವೆಯೂ ನೀರಾವರಿ ಮೂಲಕ ಕಷ್ಟಪಟ್ಟು ದಾಳಿಂಬೆ ಬೆಳೆದಿದ್ದ ಜಿಲ್ಲೆಯ ಅನ್ನದಾತರಿಗೆ ಈಗ ರೋಗದ ಬರೆ ಬಿದ್ದಂತಾಗಿದ್ದು, ಕಣ್ಣೆದುರೇ ಬೆಳೆ ನಾಶವಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
10 ಸಾವಿರಕ್ಕೂ ಅಧಿಕ ಎಕರೆ ನಾಶ
ವಿಶೇಷವಾಗಿ ದಾಳಿಂಬೆ ಬೆಳೆಗೆ ವಿಶ್ವಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ತಾಲೂಕಿನ ಕಲಾದಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಲಾದಗಿ ವ್ಯಾಪ್ತಿಯೊಂದರಲ್ಲೇ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದ್ದು, ಅದರಲ್ಲಿ ಈಗಾಗಲೇ 4 ಸಾವಿರಕ್ಕೂ ಅಧಿಕ ಎಕರೆ ತೋಟಗಳು ರೋಗಕ್ಕೆ ಬಲಿಯಾಗಿವೆ. ಕಲಾದಗಿ ಅಕ್ಕಪಕ್ಕದ ಹಳ್ಳಿಗಳು ಸೇರಿದಂತೆ ಒಟ್ಟು 15 ಸಾವಿರ ಎಕರೆ ದಾಳಿಂಬೆ ಪ್ರದೇಶದ ಪೈಕಿ 10 ಸಾವಿರಕ್ಕೂ ಹೆಚ್ಚು ಎಕರೆ ತೋಟಗಳು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಂಪೂರ್ಣ ಹಾನಿಗೊಳಗಾಗಿವೆ.
ದಾಳಿಂಬೆ ಬೆಳೆಗೆ ಪ್ರತಿ ಎಕರೆಗೆ ಕನಿಷ್ಠ 4 ರಿಂದ 5 ಲಕ್ಷ ರೂಪಾಯಿಗಳನ್ನು ರೈತರು ಖರ್ಚು ಮಾಡಿದ್ದಾರೆ. ಆದರೆ, ತೀವ್ರವಾಗಿ ಹರಡುತ್ತಿರುವ ಈ ರೋಗದ ಹಿನ್ನೆಲೆಯಲ್ಲಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ, ರೋಗ ತಗುಲಿದ ಹಣ್ಣುಗಳನ್ನು ಕಡಿದು ತೋಟದಿಂದ ಹೊರಗೆ ಹಾಕಿ, ಅವುಗಳನ್ನು ಸುಟ್ಟು ಹಾಕಬೇಕಾದ ದುಸ್ಥಿತಿ ರೈತರಿಗೆ ಎದುರಾಗಿದೆ.
ವಿಜ್ಞಾನಿಗಳ ವಿರುದ್ಧ ಆಕ್ರೋಶ
ವಿಷಾದದ ಸಂಗತಿಯೆಂದರೆ, ಬಾಗಲಕೋಟೆ ಜಿಲ್ಲೆಯಲ್ಲೇ ಪ್ರತಿಷ್ಠಿತ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವಿದೆ (UHS Bagalkot). ಈ ವಿಶ್ವವಿದ್ಯಾಲಯದಲ್ಲಿ ನೂರಾರು ಜನ ಕೃಷಿ ಹಾಗೂ ತೋಟಗಾರಿಕೆ ವಿಜ್ಞಾನಿಗಳಿದ್ದರೂ, ದಾಳಿಂಬೆ ಬೆಳೆಗಾರರನ್ನು ಹಲವು ವರ್ಷಗಳಿಂದ ಕಾಡುತ್ತಿರುವ ಈ ಅಂಡಮಾರಿ ರೋಗಕ್ಕೆ ಇಂದಿಗೂ ಸೂಕ್ತ ಮತ್ತು ಶಾಶ್ವತ ಔಷಧಿಯನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿಲ್ಲ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಣ್ಣೆದುರೇ ಒಣಗುತ್ತಿರುವ ತೋಟಗಳನ್ನು ಕಂಡು ಕಣ್ಣೀರು ಹಾಕುತ್ತಿರುವ ರೈತರು, ತೋಟಗಾರಿಕೆ ಇಲಾಖೆ ಹಾಗೂ ಸರ್ಕಾರ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಹಾನಿ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಮತ್ತು ಅಂಡಮಾರಿ ರೋಗಕ್ಕೆ ಶಾಶ್ವತ ಪರಿಹಾರ ಒದಗಿಸುವ ಔಷಧಿಯನ್ನು ವಿಜ್ಞಾನಿಗಳು ಶೀಘ್ರವಾಗಿ ಸಂಶೋಧಿಸಬೇಕು ಎಂದು ಬಲವಾಗಿ ಒತ್ತಾಯಿಸಿದ್ದಾರೆ.
ದಾಳಿಂಬೆ ಅಂಡಮಾರಿ ರೋಗವು ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಪೀಡಿತ ತೋಟದ ಹಣ್ಣು ಅಥವಾ ಗಿಡದ ಭಾಗಗಳನ್ನು ಹಾಗೇ ಬಿಡದೆ ತಕ್ಷಣ ಸುಟ್ಟು ಹಾಕುವುದರಿಂದ ಪಕ್ಕದ ತೋಟಗಳಿಗೆ ರೋಗ ಹರಡುವುದನ್ನು ತಕ್ಕಮಟ್ಟಿಗೆ ತಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
