
ಬಾಗಲಕೋಟೆ, ಮಾರ್ಚ್ 17: ಹೆಚ್.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ ಎಂದು ಆಯೋಗ ಘೋಷಿಸಿದ ಬೆನ್ನಲ್ಲೇ ಟಿಕೆಟ್ ಆಕಾಂಕ್ಷಿಗಳ ನಡುವಿನ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್ಗಾಗಿ ಲಾಬಿಯೂ ಜೋರಾಗಿದೆ. ಕಾಂಗ್ರೆಸ್ನಿಂದ ಸ್ಫರ್ಧೆಗಾಗಿ ದಿವಂಗತ ಶಾಸಕ ಮೇಟಿ ಕುಟುಂಬದಲ್ಲಿಯೇ ಗುದ್ದಾಟ ನಡೆಯುತ್ತಿದ್ದರೆ, ಇತ್ತ ಬಿಜೆಪಿಯಲ್ಲಿ ವಿವಿಧ ಸಮುದಾಯಗಳ ಮುಖಂಡರು ನಮಗೊಂದು ಅವಕಾಶ ಕೊಡಿ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ.
ಕಾಂಗ್ರೆಸ್ ಟಿಕೆಟ್ಗಾಗಿ ಮೇಟಿ ಮಗಳ ಪಟ್ಟು
ತಂದೆಯ ನಿಧನದ ಹಿನ್ನೆಲೆ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವ ಕಾರಣ ಕಾಂಗ್ರೆಸ್ ಟಿಕೆಟ್ಗಾಗಿ ಹೆಚ್. ವೈ. ಮೇಟಿ ಅವರ ಕಿರಿಯ ಮಗಳು ಮಹಾದೇವಿ ಮೇಟಿ ಪಟ್ಟು ಹಿಡಿದ್ದಾರೆ. ಈ ನಡುವೆ ಕುಟುಂಬದ ನಡುವೆಯೇ ನಡೆಯುತ್ತಿರುವ ಟಿಕೆಟ್ ಫೈಟ್ ವಿಚಾರವಾಗಿ ಮಾತುಕತೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಮೇಟಿ ಮಕ್ಕಳನ್ನು ಕರೆದಿದ್ದಾರೆ. ಮಲ್ಲಿಕಾರ್ಜುನ ಮೇಟಿ, ಬಾಯಕ್ಕ ಮೇಟಿ, ಉಮೇಶ್ ಮೇಟಿ ಸೇರಿದಂತೆ ಮಹಾದೇವಿ ಮೇಟಿ ಮುಖ್ಯಮಂತ್ರಿಗಳನ್ನು ನಾಳೆ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಈ ನಡುವೆಯೂ ಪ್ರತಿಕ್ರಿಯಿಸಿರುವ ಮಹಾದೇವಿ ಮೇಟಿ, ನನಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಬಂಡಾಯ ಸ್ಪರ್ಧೆ ಖಚಿತವಾಗಿದ್ದು, ಮಾರ್ಚ್ 20ರಂದು ನಾಮಪತ್ರ ಸಲ್ಲಿಸೋದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆಗೆ ಈಗಿಂದಲೇ ತಂತ್ರ, ಪ್ರತಿತಂತ್ರ ಶುರು; ಯಾರೆಲ್ಲಾ ಆಕಾಂಕ್ಷಿಗಳು ಗೊತ್ತಾ?
ಸಿಎಂ ಹಾಗೂ ಮೇಟಿ ಅವರ ಆಪ್ತ ಹೊಳೆಬಸು ಶೆಟ್ಟರ್ ಹೆಸರು ಹೇಳದೇ, ನಮ್ಮ ತಂದೆಯವರ ಆಪ್ತನಿಂದ ಕ್ಷೇತ್ರ ಹಾಳಾಗಿದೆ. ಆ ಆಪ್ತನನ್ನು ಮಟ್ಟ ಹಾಕಲು ನನ್ನಿಂದ ಸಾಧ್ಯ. ಆತ ನನ್ನ ಹೆಸರು ಕಡೆಗಣಿಸಿ ಮೇಟಿಯವರಿಗೆ ಮೂರು ಜನ ಮಕ್ಕಳು ಎಂದು ಸಿಎಂ ಸಿದ್ಧರಾಮಯ್ಯನವರಿಗೆ ಮಾಹಿತಿ ನೀಡಿದ್ದಾನೆ. ಕ್ಷೇತ್ರದಲ್ಲಿ ಆತನ ಹಸ್ತಕ್ಷೇಪ ಅತಿಯಾಗಿದ್ದು, ಆ ಕಾರಣ ನಾನು ಅಖಾಡಕ್ಕೆ ಇಳಿಯುತ್ತಿದ್ದೇನೆ. ಮೊನ್ನೆ ಸಿಎಂ ಮತ್ತು ಡಿಸಿಎಂ ಬಾಗಲಕೋಟೆಗೆ ಬಂದಾಗಲೂ ಅವರ ಜೊತೆ ಮಾತಾಡಿದ್ದೇನೆ. ನಾನು ಆಕಾಂಕ್ಷಿ ಎಂಬ ವಿಚಾರ ಅವರಿಗೆ ಅದಾಗಲೇ ತಿಳಿಸಿರೋದಾಗಿ ಮಹಾದೇವಿ ಮೇಟಿ ಹೇಳಿದ್ದಾರೆ.
ಬಿಜೆಪಿ ಟಿಕೆಟ್ಗೆ ಡಾ. ಶೇಖರ್ ಮಾನೆ ಡಿಮ್ಯಾಂಡ್
ಇತ್ತ ಬಿಜೆಪಿಯಲ್ಲೂ ಟಿಕೆಟ್ಗಾಗಿ ಪೈಪೋಟಿ ಜೋರಾಗಿದ್ದು, ಮರಾಠಾ ಸಮಾಜದ ರಾಜ್ಯ ಉಪಾಧ್ಯಕ್ಷ ಡಾ. ಶೇಖರ್ ಮಾನೆ ತಾನು ಕೂಡ ಆಕಾಂಕ್ಷಿ ಎಂದು ಘೋಷಿಸಿದ್ದಾರೆ. ಮರಾಠಾ ಸಮಾಜ ಬಿಜೆಪಿ ಪರ ಸದಾ ನಿಂತಿದೆ. ಹೀಗಾಗಿ ಈ ಸಮಾಜಕ್ಕೆ ಪ್ರಾತಿನಿಧ್ಯ ನೀಡಿ ತನಗೆ ಟಿಕೆಟ್ ಕೊಡಬೇಕು. ಈ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಾತನಾಡಿದ್ದೇನೆ. ಒಂದೊಮ್ಮೆ ತನಗೆ ಅವಕಾಶ ಸಿಗದಿದ್ದರೆ ಪಕ್ಷ ನಿರ್ಧರಿಸುವ ಅಭ್ಯರ್ಥಿ ಪರ ಪ್ರಚಾರ ಮಾಡಿ, ಗೆಲುವಿಗೆ ಶ್ರಮಿಸೋದಾಗಿ ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.