Headlines

ಬಾಲ್ಯ ವಿವಾಹ ತಡೆದದ್ದೇ ತಪ್ಪಾಯ್ತು!: ಕೋಲಾರದಲ್ಲಿ ಅಂಗನವಾಡಿ ಕಾರ್ಯಕರ್ತೆಯ ಕುತ್ತಿಗೆಗೆ ವೇಲ್ ಬಿಗಿದು ಕೊಲೆಗೆ ಯತ್ನಿಸಿದ ಅಪ್ರಾಪ್ತ ಬಾಲಕಿ – Kannada News | Mulbagal Child Marriage Revenge: Minor Girl Attacks Anganwadi Worker Padmavathi

ಕೋಲಾರ, ಜೂ.30: ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹವನ್ನು ತಡೆದು ಇಲಾಖೆಗೆ ಮಾಹಿತಿ ನೀಡಿದ್ದಕ್ಕಾಗಿ, ಆಕ್ರೋಶಗೊಂಡ ಅಪ್ರಾಪ್ತ ಬಾಲಕಿಯೊಬ್ಬಳು ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಯ ಕುತ್ತಿಗೆಗೆ ವೇಲ್ (ದುಪಟ್ಟಾ) ಬಿಗಿದು ಕೊಲೆ ಮಾಡಲು ಯತ್ನಿಸಿರುವ ಭೀಕರ ಘಟನೆ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮುಳಬಾಗಿಲು ತಾಲೂಕಿನ ಜೆ.ಕುರುಬರಹಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಹಲ್ಲೆಗೊಳಗಾದ ಮಹಿಳೆ, ಸದ್ಯ ತೀವ್ರ ಗಾಯಗೊಂಡಿದ್ದು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೆ.ಕುರುಬರಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಕೆಯ ತಂದೆ-ತಾಯಿ ಕೆಲವು ತಿಂಗಳುಗಳ ಹಿಂದೆ ಮದುವೆ ನಿಶ್ಚಯಿಸಿದ್ದರು. ಈ ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅವರು, 18 ವರ್ಷ ತುಂಬುವ ಮುನ್ನ ಮದುವೆ ಮಾಡುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧ ಎಂದು ಪೋಷಕರಿಗೆ ಬುದ್ಧಿವಾದ ಹೇಳಿದ್ದರು. ಅದರೂ ಪೋಷಕರು ಕೇಳದಿದ್ದಾಗ, ಪದ್ಮಾವತಿ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲಾಧಿಕಾರಿಗಳಿಗೆ ಅಧಿಕೃತ ಮಾಹಿತಿ ನೀಡಿದ್ದರು.

ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬಾಲ್ಯ ವಿವಾಹವನ್ನುತಡೆದು, ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿ ಕೆಜಿಎಫ್ (KGF) ಮಸ್ಕಾಂ ಬಳಿ ಇರುವ ಬಾಲ ಮಂದಿರಕ್ಕೆ ಸೇರಿಸಿದ್ದರು. ಬಾಲ ಮಂದಿರದಲ್ಲಿದ್ದ ಬಾಲಕಿಯನ್ನು ಇತ್ತೀಚೆಗಷ್ಟೇ ಪೋಷಕರು ವಾಪಸ್ ಮನೆಗೆ ಕರೆತಂದಿದ್ದರು. ತನ್ನ ಮದುವೆ ಮುರಿಯಲು ಅಂಗನವಾಡಿ ಕಾರ್ಯಕರ್ತೆಯೇ ಕಾರಣ ಎಂದು ದ್ವೇಷ ಸಾಧಿಸುತ್ತಿದ್ದ ಬಾಲಕಿ, ಪದ್ಮಾವತಿ ಅವರು ದೇವಸ್ಥಾನದಲ್ಲಿದ್ದ ವೇಳೆ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾಳೆ. ತನ್ನ ವೇಲ್‌ನಿಂದ ಪದ್ಮಾವತಿ ಅವರ ಕುತ್ತಿಗೆಯನ್ನು ಬಲವಾಗಿ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲದೆ ತಲೆಯನ್ನು ಗೋಡೆಗೆ ಚಚ್ಚಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಒಂದು ಗಿಡಕ್ಕೆ 3,300 ರೂ., ಗುಂಡಿ ತೋಡಲು 300 ರೂ.!: ನೀವು ಹಣ ದುರ್ಬಳಕೆ ಮಾಡ್ತಿದ್ದೀರಾ? ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ ಕೃಷ್ಣಭೈರೇಗೌಡ

ಈ ಹಲ್ಲೆಯ ಹಿಂದೆ ಬಾಲಕಿಯ ತಂದೆ ಮತ್ತು ತಾಯಿಯ ನೇರ ಕುಮ್ಮಕ್ಕಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ದಾಳಿಯಿಂದಾಗಿ ತೀವ್ರವಾಗಿ ಅಸ್ವಸ್ಥಗೊಂಡ ಪದ್ಮಾವತಿ ಅವರನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಸದ್ಯ ತೀವ್ರ ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಘಟನೆ ನಡೆದು ದೂರು ನೀಡಿದ್ದರೂ ಮುಳಬಾಗಿಲು ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ವಿವಿಧ ದಲಿತ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *