ನವದೆಹಲಿ, ಜುಲೈ 10: ಬಿಹಾರದ (Bihar) ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಅಭಿಷೇಕ್ ಸಿನ್ಹಾ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ ಕಾರಣದಿಂದಾಗಿ ಅವರ ಸ್ಥಾನಕ್ಕೆ ಇಂದು ಬಿಜೆಪಿ ನೀರಜ್ ಕುಮಾರ್ ಸಿನ್ಹಾ ಅವರನ್ನು ತನ್ನ ಹೊಸ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಜುಲೈ 30ರಂದು ಪಾಟ್ನಾದ ಈ ಹೈ-ಪ್ರೊಫೈಲ್ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿ, ಜನ್ ಸುರಾಜ್ ಪಾರ್ಟಿ ಮತ್ತು ರಾಷ್ಟ್ರೀಯ ಜನತಾ ದಳ (RJD) ನಡುವೆ ತ್ರಿಕೋನ ಸ್ಪರ್ಧೆ ಉಂಟಾಗಲಿದೆ.
“ಕೌಟುಂಬಿಕ ಕಾರಣಗಳಿಂದಾಗಿ, ನಾನು ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಪಕ್ಷದ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇನೆ” ಎಂದು ಅಭಿಷೇಕ್ ಸಿನ್ಹಾ ANI ಜೊತೆ ಮಾತನಾಡುತ್ತಾ ಹೇಳಿದ್ದರು.
ಇದನ್ನೂ ಓದಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ: ಮುಖ್ಯ ಚುನಾವಣಾ ಅಧಿಕಾರಿಗೆ ಬಿಜೆಪಿ, ಜೆಡಿಎಸ್ ದೂರು
ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯು ಜುಲೈ 30ರಂದು ನಡೆಯಲಿದ್ದು, ಆಗಸ್ಟ್ 3ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ ನಾಯಕ ನಿತಿನ್ ನವೀನ್ ಅವರು ರಾಜ್ಯಸಭೆಗೆ ಆಯ್ಕೆಯಾದ ನಂತರ ಈ ಕ್ಷೇತ್ರ ತೆರವಾಗಿದ್ದರಿಂದ ಉಪಚುನಾವಣೆ ಅನಿವಾರ್ಯವಾಗಿತ್ತು. ಈ ಕ್ಷೇತ್ರವು ಈಗ ಬಿಜೆಪಿ, ಜನ್ ಸುರಾಜ್ ಪಾರ್ಟಿ (JSP) ಮತ್ತು ರಾಷ್ಟ್ರೀಯ ಜನತಾ ದಳದ ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.
ಈ ಚುನಾವಣೆಯಲ್ಲಿ ಜನ್ ಸುರಾಜ್ ಪಾರ್ಟಿಯ ಸಂಸ್ಥಾಪಕ ಹಾಗೂ ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸ್ವತಃ ಕಣಕ್ಕಿಳಿದಿದ್ದರೆ, ರಾಷ್ಟ್ರೀಯ ಜನತಾ ದಳವು (ಆರ್ಜೆಡಿ) ರೇಖಾ ಗುಪ್ತಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಇದನ್ನೂ ಓದಿ: ಟಿಎಂಸಿ ಪಕ್ಷ ತೊರೆದಿದ್ದ ಮೂವರು ಮಾಜಿ ಸಂಸದರು ಬಿಜೆಪಿಗೆ ಸೇರ್ಪಡೆ
ಮಧ್ಯ ಪಾಟ್ನಾದ ಪ್ರಮುಖ ನಗರ ಪ್ರದೇಶವಾಗಿರುವ ಬಂಕಿಪುರವು ಸುಮಾರು 4 ಲಕ್ಷ ಮತದಾರರನ್ನು ಹೊಂದಿದೆ. ಇಲ್ಲಿ ಕಾಯಸ್ಥ ಮತ್ತು ವೈಶ್ಯ ಸಮುದಾಯಗಳ ಪ್ರಭಾವ ಹೆಚ್ಚಿರುವುದರಿಂದ ರಾಜಕೀಯವಾಗಿ ಇದು ಅತ್ಯಂತ ಮಹತ್ವದ ಕ್ಷೇತ್ರವಾಗಿದೆ. ಬಿಜೆಪಿ ಮತ್ತು ಜನ್ ಸುರಾಜ್ ಪಾರ್ಟಿಗಳು ಇಲ್ಲಿ ಭರ್ಜರಿ ಪ್ರಚಾರವನ್ನು ಕೈಗೊಂಡಿದೆ.
ಯಾರು ಈ ನೀರಜ್ ಕುಮಾರ್ ಸಿನ್ಹಾ?:
32 ವರ್ಷದ ನೀರಜ್ ಕುಮಾರ್ ಸಿನ್ಹಾ ಅವರು ಬಿಜೆಪಿಯ ಯುವ ಮುಖವಾಗಿದ್ದರೂ, ಹಲವು ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ತಳಮಟ್ಟದಿಂದ ಸಂಘಟನಾತ್ಮಕವಾಗಿ ಕೆಲಸ ಮಾಡಿ ಪಕ್ಷದ ಶ್ರೇಣಿಯಲ್ಲಿ ಬೆಳೆದಿದ್ದಾರೆ. ತಮ್ಮ ರಾಜಕೀಯ ಜೀವನದಲ್ಲಿ ಸಿನ್ಹಾ ಅವರು ಬೂತ್ ಅಧ್ಯಕ್ಷ, ಮಂಡಲ ಪ್ರಧಾನ ಕಾರ್ಯದರ್ಶಿ ಮತ್ತು ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನೀರಜ್ ಸಿನ್ಹಾ ಅವರ ಕುಟುಂಬವು ಜನಸಂಘದ ಕಾಲದಿಂದಲೂ ಬಿಜೆಪಿಯೊಂದಿಗೆ ಸುದೀರ್ಘ ನಂಟು ಹೊಂದಿದೆ. ಇವರ ಚಿಕ್ಕಪ್ಪ ನರೇಂದ್ರ ಭಾರತಿ ಜನಸಂಘದ ಸಕ್ರಿಯ ಕಾರ್ಯಕರ್ತರಾಗಿದ್ದರು. 1984ರಲ್ಲಿ ಮರಣ ಹೊಂದುವವರೆಗೂ ಅವರು ಬಿಜೆಪಿಯಲ್ಲಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
