ಬೀದರ್, ಆಗಸ್ಟ್ 12: 2025ರ ಜನವರಿ 16ರಂದು ಬೀದರ್ (bidar) ನಗರದಲ್ಲಿ ಹಾಡಹಗಲೇ ನಡೆದಿದ್ದ ಎಟಿಎಂ ದರೋಡೆ (ATM Robbery) ಮತ್ತು ಕೊಲೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ದರೋಡೆಕೋರರನ್ನು ಬೀದರ್ ಪೊಲೀಸರು ಬಂಧಿಸಿದ್ದಾರೆ. ಆ ಮೂಲಕ ಬರೋಬ್ಬರಿ 19 ತಿಂಗಳ ಬಳಿಕ ಖಾಕಿ ಪಡೆ ಪ್ರಕರಣವನ್ನು ಭೇದಿಸಿದೆ. ಅಲೋಕ್ ಹಾಗೂ ಅಮನ್ ಬಂಧಿತರು. ಸದ್ಯ ಬೀದರ್ ಪೊಲೀಸರು ಆರೋಪಿಗಳನ್ನು ಬಿಹಾರದಿಂದ ಕರೆತರುತ್ತಿದ್ದಾರೆ.
ಪಟಾಕಿ ಸಿಡಿಸಿ ಜನರ ಸಂಭ್ರಮಾಚರಣೆ
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ, 50 ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಪೊಲೀಸ್ ಪಡೆ ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಅತ್ತ ದರೋಡೆಕೋರರ ಬಂಧನವಾಗುತ್ತಿದ್ದಂತೆ ಇತ್ತ ನಗರದಲ್ಲಿ ಪಟಾಕಿ ಸಿಡಿಸಿ ಜನರು ಸಂಭ್ರಮಾಚರಣೆ ಮಾಡಿದರು.
ಪ್ರಕರಣ ಹಿನ್ನೆಲೆ
2025ರ ಜನವರಿ 16ರ ಬೆಳಿಗ್ಗೆ 11 ಗಂಟೆಗೆ ಹಾಡಹಗಲೇ ಬೀದರ್ನ ಶಿವಾಜಿ ವೃತ್ತದ ಬಳಿ ಇರುವ ಎಸ್ಬಿಐ ಎಟಿಎಂಗೆ ನಗದು ತುಂಬಿಸಲು ಸಿಬ್ಬಂದಿ ವಾಹನದಲ್ಲಿ ಬಂದಿದ್ದಾಗ, ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್ನಿಂದ ಗುಂಡಿನ ದಾಳಿ ನಡೆಸಿ 83 ಲಕ್ಷ ರೂಪಾಯಿ ನಗದನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು.
ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಬೀದರ್ ATM ದರೋಡೆ ಕೇಸ್ಗೆ 1 ವರ್ಷ: ಆರೋಪಿಗಳ ಸುಳಿವೇ ಇಲ್ಲ
ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ದರೋಡೆಕೋರರ ದಾಳಿಗೆ ಬೀದರ್ನ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಶಿವಕುಮಾರ್ ಎಂಬ ಮತ್ತೊಬ್ಬ ಸಿಬ್ಬಂದಿ ಗಾಯಗೊಂಡಿದ್ದರು. ದರೋಡೆಯಲ್ಲಿ ಭಾಗವಹಿಸಿದ ಗ್ಯಾಂಗ್ ದರೋಡೆಗೂ ಮುನ್ನ ಪಕ್ಕಾ ಪ್ಲ್ಯಾನ್ ಮಾಡಿತ್ತು. ದರೋಡೆ ಮಾಡುವ ಎರಡು ದಿನ ಮುನ್ನ ಬೀದರ್ನಲ್ಲಿ ದರೋಡೆಕೋರರು ಉಳಿದುಕೊಂಡಿದ್ದರು.
ಇದನ್ನೂ ಓದಿ: ಬೆನ್ನಟ್ಟಿದ್ದ ಪೊಲೀಸರ ಮೇಲೆಯೇ ಫೈರಿಂಗ್ ಮಾಡಿ ಬೀದರ್ ದರೋಡೆಕೋರರು ಎಸ್ಕೇಪ್
ದರೋಡೆ ಮಾಡಿಕೊಂಡು ಯಾವ ಮಾರ್ಗದಲ್ಲಿ ಹೋಗಬೇಕು ಎನ್ನುವುದನ್ನು ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಗ್ಯಾಂಗ್, ಆ ಪ್ರಕಾರವೇ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು. ಇದೀಗ ಸುದೀರ್ಘ ಕಾರ್ಯಚರಣೆ ಬಳಿಕ ಅಂದರೆ ಒಂದು ವರ್ಷ 7 ತಿಂಗಳ ನಂತರ ಆರೋಪಿಗಳನ್ನು ಬೀದರ್ ಪೊಲೀಸರು ಸೆರೆಹಿಡಿದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.