ಬೆಂಕಿಯ ಉಂಡೆಗಳನ್ನೇ ಎಸೆಯಬೇಕಿತ್ತೇನೋ… ಪಾಂಡ್ಯ ಅಸಹಾಯಕತೆ! – Kannada News | Hardik pandya Post Match interview after CSK vs MI Match

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ (MI) ಇದೀಗ ಮತ್ತೊಂದು ಸೋಲನುಭವಿಸಿದೆ. ಈ ಸೋಲಿನೊಂದಿಗೆ ಮುಂಬೈ ತಂಡದ ಪರಾಜಯದ ಸಂಖ್ಯೆ 7 ಕ್ಕೇರಿದೆ. ಚೆನ್ನೈನಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 159 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 18.1 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್​ಗಳಿಂದ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯನ ಹಾರ್ದಿಕ್ ಪಾಂಡ್ಯ, ತಂಡದ ಕಳಪೆ ಪ್ರದರ್ಶನವನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಇದು ಕೇವಲ ಒಂದು ರಾತ್ರಿಯ ಸೋಲಲ್ಲ, ಇಡೀ ಸೀಸನ್ ನಮಗೆ ಕಠಿಣವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ನಮ್ಮ ಎದುರಾಳಿ ತಂಡದವರು ನಮಗಿಂತ ಉತ್ತಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡಿದರು. ಫೀಲ್ಡಿಂಗ್‌ನಲ್ಲೂ ಮಿಂಚಿದರು. ಸೋಲಿಗೆ ಯಾವುದೇ ನೆಪ ಹೇಳಲು ಸಾಧ್ಯವಿಲ್ಲ. ಸಿಎಸ್​ಕೆ ನಮಗಿಂತ ಉತ್ತಮವಾಗಿ ಆಡಿದ್ದಾರೆ. ಅದಕ್ಕೆ ಅವರು ಗೆದ್ದಿದ್ದಾರೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಇದೇ ವೇಳೆ ತಂಡದ ಬ್ಯಾಟಿಂಗ್ ಬಗ್ಗೆ ವಿಶ್ಲೇಷಿಸಿದ ಪಾಂಡ್ಯ, ಒಂದು ಹಂತದಲ್ಲಿ ನಾವು 180 ರಿಂದ 190 ರನ್ ಗಳಿಸುವ ನಿರೀಕ್ಷೆಯಲ್ಲಿದ್ದೆವು. ಆದರೆ 10 ಓವರ್‌ಗಳ ನಂತರ ನಾವು ಲಯವನ್ನು ಕಳೆದುಕೊಂಡೆವು. ಸರಿಯಾದ ಫಿನಿಶಿಂಗ್ ನೀಡಲು ನಮ್ಮಿಂದ ಸಾಧ್ಯವಾಗಲಿಲ್ಲ. ಕ್ರೀಸ್‌ಗೆ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡುವುದು ಸುಲಭವಾಗಿರಲಿಲ್ಲ ಎಂದಿದ್ದಾರೆ.

ಇಲ್ಲಿ ವಿಕೆಟ್‌ಗಳನ್ನು ಕೈಯಲ್ಲಿಟ್ಟುಕೊಂಡು ಲೆಕ್ಕಾಚಾರದ ಆಟವಾಡುವುದು ಮುಖ್ಯವಾಗಿತ್ತು. ಆದರೆ ನಮ್ಮ ಬ್ಯಾಟರ್‌ಗಳಿಗೆ ಚೆಂಡನ್ನು ಸರಿಯಾಗಿ ಬೌಂಡರಿ ದಾಟಿಸಲು ಸಾಧ್ಯವಾಗಲಿಲ್ಲ. ಎದುರಾಳಿ ಬೌಲರ್‌ಗಳು ಅತ್ಯಂತ ಶಿಸ್ತುಬದ್ಧವಾಗಿ ಬೌಲಿಂಗ್ ಮಾಡಿದರು ಎಂದು ಹಾರ್ದಿಕ್ ಪಾಂಡ್ಯ ಎದುರಾಳಿ ತಂಡದ ಕಾರ್ಯತಂತ್ರವನ್ನು ಶ್ಲಾಘಿಸಿದ್ದಾರೆ.

ಇನ್ನು ಬೌಲಿಂಗ್ ವಿಭಾಗದಲ್ಲಿನ ಹಿನ್ನಡೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಾರ್ದಿಕ್, ನಾವು ಇನ್ನೂ ಎಷ್ಟು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಲು ಸಾಧ್ಯವಿತ್ತು ಎಂದು ನನಗೆ ತಿಳಿದಿಲ್ಲ. ಅವರ ವಿಕೆಟ್ ಪಡೆಯಲು ಬಹುಶಃ ನಾವು ಬೆಂಕಿಯ ಉಂಡೆಗಳನ್ನೇ ಎಸೆಯಬೇಕಿತ್ತೇನೋ!

ನಮ್ಮಲ್ಲಿ ಲಭ್ಯವಿದ್ದ ಅತ್ಯುತ್ತಮ ಬೌಲಿಂಗ್ ಆಯ್ಕೆಗಳನ್ನೇ ನಾವು ಬಳಸಿದೆವು. ಆದರೆ ಎದುರಾಳಿ ಬ್ಯಾಟರ್‌ಗಳು ಹೆಚ್ಚು ಬುದ್ಧಿವಂತಿಕೆಯಿಂದ ಆಡಿದರು ಎಂದು ಹಾರ್ದಿಕ್ ಪಾಂಡ್ಯ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: IPL 2026: ಹೀಗಾದ್ರೆ ಮಾತ್ರ ಮುಂಬೈ ಇಂಡಿಯನ್ಸ್​ ಪ್ಲೇಆಫ್ ಪ್ರವೇಶಿಸುತ್ತೆ!

ಒಟ್ಟಾರೆಯಾಗಿ, ಮುಂಬೈ ಇಂಡಿಯನ್ಸ್ ತಂಡವು ಈ ಸೀಸನ್‌ನಲ್ಲಿ ತನ್ನ ಹಳೆಯ ಲಯಕ್ಕೆ ಮರಳಲು ಕಷ್ಟಪಡುತ್ತಿರುವುದು ನಾಯಕನ ಮಾತುಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ಇದಾಗ್ಯೂ ಮುಂದಿನ 5 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ ಪ್ಲೇಆಫ್​ಗೆ ಪ್ರವೇಶಿಸಬಹುದು. ಆದರೆ ಇಲ್ಲಿ ಇತರೆ ತಂಡಗಳ ಫಲಿತಾಂಶ ಕೂಡ ಗಣನೆಗೆ ಬರಲಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಪಾಲಿಗೆ ತನ್ನ ಪಂದ್ಯಗಳು ಮತ್ತು ಇತರೆ ತಂಡಗಳ ಫಲಿತಾಂಶಗಳು ತುಂಬಾ ಮುಖ್ಯ.

Source link

Leave a Reply

Your email address will not be published. Required fields are marked *