ಬೆಂಗಳೂರು, ಮೇ 08: ನಗರದಲ್ಲಿ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಮುಂದಾಗಿರುವ ಬಿಎಂಆರ್ಸಿಎಲ್ (BMRCL), ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ‘ಪಿಂಕ್ ಲೈನ್’ ಮೆಟ್ರೋ (Pink Line Metro) ಮಾರ್ಗವನ್ನು ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ಈ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಜೂನ್ ತಿಂಗಳಿನಲ್ಲಿ ಆರು ಎಲಿವೇಟೆಡ್ ಮೆಟ್ರೋ ನಿಲ್ದಾಣಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಯೋಜಿಸಲಾಗಿದೆ. ಇದರ ಬೆನ್ನಲ್ಲೇ, ಈ ಮಾರ್ಗವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ನಗರದ ಅತಿ ಉದ್ದದ ಮೆಟ್ರೋ ಕಾರಿಡಾರ್ ನಿರ್ಮಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಮುಖ್ಯಾಂಶಗಳು
- ಬೆಂಗಳೂರಿನಲ್ಲೇ ಅತಿ ಉದ್ದದ ಮೆಟ್ರೋ ಮಾರ್ಗ ಎಂಬ ಹೆಗ್ಗಳಿಕೆ
- ಐಟಿಬಿಟಿ ಮತ್ತು ಕೈಗಾರಿಕಾ ಪ್ರದೇಶಗಳಿಗೆ ಸುಗಮ ಸಂಪರ್ಕ
- ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬಿಎಂಆರ್ಸಿಎಲ್ ಮಾಸ್ಟರ್ ಪ್ಲಾನ್
ಕಾಳೇನ ಅಗ್ರಹಾರ ಟು ನಾಗವಾರ ಪಿಂಕ್ ಲೈನ್ ಮೆಟ್ರೋ ಮಾರ್ಗ ಓಪನ್ ಮಾಡಲು ಕೇವಲ ಒಂದು ತಿಂಗಳು ಮಾತ್ರ ಬಾಕಿಯಿದೆ. ಈ ಹಿನ್ನೆಲೆ ಐಟಿಬಿಟಿ ಪಾರ್ಕ್ಗಳು, ಇಂಡಸ್ಟ್ರಿಯಲ್ ಟೌನ್ಗಳನ್ನು ಸಂಪರ್ಕಿಸುವಂತೆ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲು ಬಿಎಂಆರ್ಸಿಎಲ್ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ 100ರಷ್ಟು ಕಾಮಗಾರಿ ಮುಗಿದಿದೆ. ಆರು ಎಲಿವೇಟೆಡ್ ಮೆಟ್ರೋ ಸ್ಟೇಷನ್ಗಳನ್ನು ಜೂನ್ನಲ್ಲಿ ಓಪನ್ ಮಾಡಲು ಪ್ಲಾನ್ ಕೂಡ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ: ಮೇ 10ರಂದು ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಇದೀಗ ಈ ಮಾರ್ಗವನ್ನು ಕಾಡುಗೋಡಿ ಟ್ರೀ ಪಾರ್ಕ್ವರೆಗೆ ವಿಸ್ತರಣೆ ಮಾಡಲು ಬಿಎಂಆರ್ಸಿಎಲ್ ಮುಂದಾಗಿದೆ. ಈ ಮಾರ್ಗ ಓಪನ್ ಆದರೆ ಬೆಂಗಳೂರಲ್ಲೇ ಅತಿ ಹೆಚ್ಚು ಉದ್ದದ ಮೆಟ್ರೋ ಮಾರ್ಗವಾಗಲಿದೆ. ಈ ಮಾರ್ಗವು ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ, ವರ್ತೂರು, ಕಾಡುಗೋಡಿ ಟ್ರೀ ಪಾರ್ಕ್, ಚನ್ನಸಂದ್ರ ಹೋಫ್ ಫಾರ್ಮ್ (73 ಕಿ.ಮೀ) ಮಾರ್ಗದಲ್ಲಿ ಸಂಚಾರ ಮಾಡಲಿದೆ. ಈ ಮೆಟ್ರೋ ಮಾರ್ಗಕ್ಕಾಗಿ ಫಿಸಿಬಲಿಟಿ ಟೆಸ್ಟ್ ಮಾಡಿದ್ದು, ಅದರ ವರದಿ ಇದೀಗ ಬಿಎಂಆರ್ಸಿಎಲ್ ಕೈಸೇರಿದೆ. ಆ ವರದಿಯನ್ನು ರಾಜ್ಯ ಸರ್ಕಾರಕ್ಕೂ ಸಲ್ಲಿಸಲಿದೆ.
ಇನ್ನು ಈ ಮಾರ್ಗದಲ್ಲಿ ಅಂದಾಜು 35 ಮೆಟ್ರೋ ಸ್ಟೇಷನ್ಗಳನ್ನು ನಿರ್ಮಾಣ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಇತ್ತ ಅತ್ತಿಬೆಲೆ ಬಳಿ ಕೆಹೆಚ್ಬಿ 90 ಸಾವಿರ ಆಸನಗಳ ಸಾಮರ್ಥ್ಯದ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಪಿಂಕ್ ಲೈನ್ ವಿಸ್ತರಿಸುವುದರಿಂದ ಪ್ರೇಕ್ಷಕರು ಬಂದು ಹೋಗಲು ಸಹಾಯ ಆಗಲಿವಾಗಲಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮೆಟ್ರೋ ಪ್ರಯಾಣಿಕರು ಈ ಭಾಗದಲ್ಲಿ ಮೆಟ್ರೋ ಓಪನ್ ಆದರೆ ರಾಜಧಾನಿಯಲ್ಲಿ ತುಂಬಾ ದೊಡ್ಡಮಟ್ಟದಲ್ಲಿ ಟ್ರಾಫಿಕ್ ಕಡಿಮೆ ಆಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮೆಟ್ರೋ ಪಿಂಕ್ ಲೈನ್ ಆರಂಭಕ್ಕೂ ಮುನ್ನವೇ ಸಂಘರ್ಷ: ಬೀಳಕಹಳ್ಳಿ ಹೆಸರಿಗಾಗಿ ಸ್ಥಳೀಯರ ಪಟ್ಟು
ಒಟ್ಟಾರೆಯಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಮಹತ್ವಾಕಾಂಕ್ಷಿ ಯೋಜನೆಗೆ ಹಸಿರು ನಿಶಾನೆ ತೋರಿದರೆ, ರಾಜಧಾನಿಯ ಜನರಿಗೆ ಸಂಚಾರದ ಸಂಕಷ್ಟದಿಂದ ದೊಡ್ಡ ಮಟ್ಟದ ವಿನಾಯಿತಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
