ಬೆಂಗಳೂರಲ್ಲಿ 112 ವರ್ಷದ ಬಳಿಕ ಜುಲೈನಲ್ಲಿ ದಾಖಲೆ ತಾಪಮಾನImage Credit source: Getty Images
ಬೆಂಗಳೂರು, ಜುಲೈ 15: ನೈಋತ್ಯ ಮುಂಗಾರು ದುರ್ಬಲಗೊಂಡಿರುವ ಪರಿಣಾಮ ಕರ್ನಾಟಕದಾದ್ಯಂತ ತಾಪಮಾನ ಏರಿಕೆಯಾಗಿದ್ದು, ಮಂಗಳವಾರ (ಜುಲೈ 14)ರಂದು ಬೆಂಗಳೂರಲ್ಲಿ ಗರಿಷ್ಠ ತಾಪಮಾನ 33.6 ಡಿಗ್ರಿ ಸೆಲ್ಸಿಯಸ್ ಕಂಡುಬಂದಿದೆ. ಜುಲೈ ತಿಂಗಳಲ್ಲಿ 112 ವರ್ಷಗಳ ಬಳಿಕ ನಗರದಲ್ಲಿ ದಾಖಲಾಗಿರುವ ಅತ್ಯಧಿಕ ತಾಪಮಾನ ಇದಾಗಿದೆ. ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಜುಲೈ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ 33.3 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಅದು 1914 ಮತ್ತು 1926ರಲ್ಲಿ ಸಂಭವಿಸಿತ್ತು. ಇದೀಗ 33.6 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಆ ದಾಖಲೆಯನ್ನು ಬೆಂಗಳೂರು ಮುರಿದಿದೆ.
ತಾಪಮಾನ ಹೆಚ್ಚಳ ಯಾಕೆ?
ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಬೆಂಗಳೂರಿನ ಗರಿಷ್ಠ ತಾಪಮಾನ 28.3 ಡಿಗ್ರಿ ಸೆಲ್ಸಿಯಸ್ ಇರಬೇಕಾಗಿದ್ದು, ಈ ಬಾರಿ ಅದು 5 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚು ಏರಿಕೆಯಾಗಿದೆ. ಬೆಂಗಳೂರಷ್ಟೇ ಅಲ್ಲದೆ, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲೂ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚು ದಾಖಲಾಗಿದೆ. ಹವಾಮಾನ ತಜ್ಞರ ಪ್ರಕಾರ, ನೈಋತ್ಯ ಮುಂಗಾರು ದುರ್ಬಲಗೊಂಡಿರುವುದರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅದರ ಪರಿಣಾಮವಾಗಿ ತಾಪಮಾನ ಏರಿಕೆಯಾಗಿದೆ. ಉತ್ತರ ಒಳನಾಡು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಕೆಲ ದಿನಗಳು ಒಣಹವಾಮಾನ ಮುಂದುವರಿಯುವ ಸಾಧ್ಯತೆಯಿದೆ.
ಇದನ್ನೂ ಓದಿ: ರೈತರೇ ಗಮನಸಿ; ಬಿತ್ತನೆ ಸಂಬಂಧ ಹವಾಮಾನ ತಜ್ಞರು ನೀಡಿರುವ ಸಲಹೆ ಇಲ್ಲಿದೆ
ಉಷ್ಣಾಂಶ ಮತ್ತಷ್ಟು ಹೆಚ್ಚಳದ ಎಚ್ಚರಿಕೆ
ಬಿಸಿ ಗಾಳಿ & ತೇವಾಂಶ ಎಚ್ಚರಿಕೆ.
HOT AND HUMID #Warning for COASTAL #KARNATAKA #Yellow #Alert@KarnatakaVarthe #KSNDMC pic.twitter.com/RPlGfzQIXY— Karnataka State Natural Disaster Monitoring Centre (@KarnatakaSNDMC) July 15, 2026
ಈ ನಡುವೆ ರಾಜ್ಯದಲ್ಲಿ ಜುಲೈ 15ರಿಂದ 19ರ ವರೆಗೆ ಉಷ್ಣಾಂಶದಲ್ಲಿ 3-5 ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಬಿಸಿಗಾಳಿ ಮತ್ತು ತೇವಾಂಶ ಪರಿಸ್ಥಿತಿಗಳು ಹೆಚ್ಚಲಿರುವ ಸಾಧ್ಯತೆ ಹಿನ್ನಲೆ ಯೆಲ್ಲೋ ಅಲರ್ಟ್ ಘೋಷಿಸಿರೋದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.