ಬೆಂಗಳೂರಿನಲ್ಲಿ ಕಾವೇರಿ ನೀರು ದುರ್ಬಳಕೆ: 692 ಜನರಿಗೆ BWSSB ದಂಡ; 34.60 ಲಕ್ಷ ರೂ ವಸೂಲಿ – Kannada News | BWSSB Fines 692 Bengaluru Residents 34.6 Lakh for Cauvery Water Misuse

ಬಿಡಬ್ಲ್ಯೂಎಸ್‍ಎಸ್‍ಬಿImage Credit source: x.com/chairmanbwssb

ಬೆಂಗಳೂರು, ಜುಲೈ 29: ಕಾವೇರಿಯಿಂದ (Cauvery water) ಪ್ರತಿನಿತ್ಯ 3500 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುಗಡೆ ಮಾಡಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ. ಇದು ರಾಜ್ಯದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಬೆಂಗಳೂರಿನಲ್ಲಿ ಕುಡಿಯುವ ಕಾವೇರಿ ನೀರನ್ನು ಅನಗತ್ಯವಾಗಿ ದುರ್ಬಳಕೆ ಮಾಡುತ್ತಿದ್ದ ಗ್ರಾಹಕರಿಗೆ ಬೆಂಗಳೂರು ಜಲಮಂಡಳಿ (BWSSB) ಬಿಸಿ ಮುಟ್ಟಿಸಿದೆ.  692 ಜನರಿಗೆ ತಲಾ‌ 5 ಸಾವಿರ ರೂ. ಅಂತೆ ಒಟ್ಟು 34.60 ಲಕ್ಷ ರೂ. ದಂಡ ವಸೂಲಿ ಮಾಡಿದೆ.

34 ಲಕ್ಷದ 60 ಸಾವಿರ ರೂ ದಂಡ ವಸೂಲಿ

ಬೆಂಗಳೂರಿನಲ್ಲಿ ಕಾವೇರಿ ನೀರು ದುರ್ಬಳಕೆ ಮಾಡಿದ 692 ಜನರಿಗೆ ದಂಡ ವಿಧಿಸಲಾಗಿದೆ. ವಾಹನ ತೊಳೆಯಲು ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಕುಡಿಯುವ ನೀರನ್ನು ಬಳಸಿದ ಒಟ್ಟು 692 ಜನರಿಗೆ ಜಲಮಂಡಳಿ ಅಧಿಕಾರಿಗಳು ತಲಾ 5 ಸಾವಿರ ರೂ.ಗಳಂತೆ ಒಟ್ಟು 34 ಲಕ್ಷದ 60 ಸಾವಿರ ರೂ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಅಣೆಕಟ್ಟುಗಳಲ್ಲಿ ಸದ್ಯ ಇರುವ ನೀರೆಷ್ಟು? ಇಲ್ಲಿದೆ ಮಾಹಿತಿ

ನಗರದ ವಿವಿಧ ವಲಯಗಳಲ್ಲಿ ಪರಿಶೀಲನೆ ನಡೆಸಿದ ಜಲಮಂಡಳಿ, ದಕ್ಷಿಣ ವಲಯದಲ್ಲಿ ಗರಿಷ್ಠ 206 ಜನರಿಗೆ ದಂಡ ವಿಧಿಸಿದೆ. ಉಳಿದಂತೆ ಪಶ್ವಿಮ ವಲಯದಲ್ಲಿ 165, ಕೇಂದ್ರ ವಲಯದಲ್ಲಿ 135, ಪೂರ್ವ ವಲಯದಲ್ಲಿ 100 ಹಾಗೂ ಉತ್ತರ ವಲಯದಲ್ಲಿ 86 ಜನರಿಂದ ನಿಯಮ ಉಲ್ಲಂಘನೆಗೆ ದಂಡ ವಸೂಲಿ ಮಾಡಲಾಗಿದೆ.

ಜುಲೈ 31 ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕಾವೇರಿ ನೀರು ಸರಬರಾಜು ಯೋಜನೆ–5ನೇ ಹಂತದ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆ ಜುಲೈ 31 ಅಂದರೆ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಬಂಧಿತ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.

ಈ ಅವಧಿಯಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿಗಳನ್ನು ಸುರಕ್ಷಿತವಾಗಿ ಹಾಗೂ ಪರಿಣಾಮಕಾರಿಯಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಜಲರೇಚಕ ಯಂತ್ರಾಗಾರಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ, ಸಂಬಂಧಿತ ಪ್ರದೇಶಗಳ ಸಾರ್ವಜನಿಕರು ತಮ್ಮ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಂಡು, ಲಭ್ಯವಿರುವ ನೀರನ್ನು ಮಿತವಾಗಿ ಹಾಗೂ ಜವಾಬ್ದಾರಿಯಿಂದ ಬಳಸುವಂತೆ ವಿನಂತಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕದ ಜಲ ಪ್ರದೇಶಗಳನ್ನು ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ

ಇನ್ನು ಈ ತಾತ್ಕಾಲಿಕ ವ್ಯತ್ಯಯದಿಂದ ಉಂಟಾಗುವ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಗರಕ್ಕೆ ನಿರಂತರ ಹಾಗೂ ವಿಶ್ವಾಸಾರ್ಹ ನೀರು ಪೂರೈಕೆಯನ್ನು ಖಚಿತಪಡಿಸಲು ಸಹಕಾರ ಕೋರಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *