ಬೆಂಗಳೂರು, ಮಾ.3: ಸಿಲಿಕಾನ್ ಸಿಟಿಯಲ್ಲಿ ಎಲೆಕ್ಟ್ರಿಕ್ ಬೈಕ್ ವಿತರಿಸುವ ನೆಪದಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ‘ಆಪ್ಕಿ ಇವಿ’ (Aapki EV) ಶೋರೂಂ ಮಾಲೀಕರು ಸುಮಾರು 3,250 ಜನರಿಗೆ ಸಬ್ಸಿಡಿ ಆಸೆ ತೋರಿಸಿ ಲೋನ್ ಸುಳಿಗೆ ಸಿಲುಕಿಸಿದ್ದಾರೆ. ಕೇವಲ 20,000 ರೂ. ಡಿಪಾಸಿಟ್ ಮಾಡಿದರೆ ಸಾಕು, ಉಳಿದ ಹಣ ಕೇಂದ್ರ ಸರ್ಕಾರದ ಸಬ್ಸಿಡಿಯಡಿ ಪಾವತಿಯಾಗುತ್ತದೆ ಎಂದು ನಂಬಿಸಲಾಗಿತ್ತು. ಬೈಕ್ ನೀಡುವ ನೆಪದಲ್ಲಿ ಗ್ರಾಹಕರಿಂದ ಆಧಾರ್, ಪಾನ್ ಕಾರ್ಡ್ ಪಡೆದ ಶೋರೂಂ ಮಾಲೀಕರು, ಗ್ರಾಹಕರಿಗೆ ತಿಳಿಯದಂತೆ ಕೊಟಕ್ ಮಹೀಂದ್ರಾ ಬ್ಯಾಂಕ್ ಮೂಲಕ ಲೋನ್ ಮಾಡಿಸಿದ್ದಾರೆ.
ಕೇವಲ 35,000 ರೂ. ಬೆಲೆಬಾಳುವ ಸಾಧಾರಣ ಇವಿ ಬೈಕ್ಗೆ ಬರೋಬ್ಬರಿ 1.50 ಲಕ್ಷ ರೂಪಾಯಿ ಲೋನ್ ಮಾಡಿಸಿ ಬ್ಯಾಂಕ್ನಿಂದ ಹಣ ಪಡೆದುಕೊಳ್ಳಲಾಗಿದೆ. ಈ ವಂಚನೆಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಮ್ಯಾನೇಜರ್ ಕೂಡ ಭಾಗಿಯಾಗಿದ್ದು, ಗ್ರಾಹಕರ ಅನುಮತಿಯಿಲ್ಲದೆ ಲೋನ್ ಮಂಜೂರು ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಧಾರವಾಡ ಆಯ್ತು, ಈಗ ರಾಜ್ಯಾದ್ಯಂತ ಹೋರಾಟಕ್ಕೆ ಧುಮುಕಲಿರುವ ಉದ್ಯೋಗಾಕಾಂಕ್ಷಿಗಳು!
ಇಲ್ಲಿದೆ ನೋಡಿ ವಿಡಿಯೋ:
ತಮ್ಮ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸಾಲ ಇರುವುದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕರು ಇಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂ.ಜಿ. ರಸ್ತೆವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿ ಪ್ರತಿಭಟಿಸಿದರು. 500ಕ್ಕೂ ಹೆಚ್ಚು ಗ್ರಾಹಕರು ಭಾಗವಹಿಸಿ, ತಮಗೆ ನ್ಯಾಯ ಕೊಡಿಸುವಂತೆ ಮತ್ತು ಆರೋಪಿಗಳಾದ ರವಿ ಹಾಗೂ ಹನುಮಂತರಾಜು ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಗುಂಟೆ ಮತ್ತು ಪೀಣ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಬಾಗಲಗುಂಟೆ ಠಾಣಾಧಿಕಾರಿಗಳು, ಶೀಘ್ರವೇ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ